ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಕಾರ್ಯದರ್ಶಿಗಳು ಎಂದು ಹೇಳಿಕೊಂಡು ಇಬ್ಬರು ಉದ್ಯಮಿಗಳಿಗೆ ಒಟ್ಟು 36 ಲಕ್ಷ ರು. ವಂಚಿಸಿರುವ ಆರೋಪದ ಮೇಲೆ ಐವರ ವಿರುದ್ಧ ಇಲ್ಲಿನ ಸಿಇಎನ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮಂಗಳೂರಿನ ಮೊಹಮದ್ ರೆಹಮಾನ್, ಶಿವಮೊಗ್ಗದ ವಿಠಲ್ ರಾವ್, ಮಂಜುನಾಥ್, ಖಾಜಿವಲೀಸ್, ಹಾಸನ ಜಿಲ್ಲೆ ಅರಸಿಕೆರೆಯ ಮೊಹಮದ್ ಮುಫಾಸಿರ್ ವಂಚಿಸಿರುವ ಆರೋಪಿಗಳು. ಪೊಲೀಸರು ವಿಠಲ್ ರಾವ್, ಮತ್ತು ಖಾಜಿವಲೀಸ್ ಇಬ್ಬರನ್ನು ಬಂಧಿಸಿದ್ದು ಮೂವರು ತಲೆ ಮರೆಸಿಕೊಂಡಿದ್ದಾರೆ.
ಮೈಸೂರಿನ ಸಿವಿಲ್ ಇಂಜಿನಿಯರ್ ರಾಜೇಶ್ ಎಂಬುವವರಿಗೆ 100 ಕೋಟಿ ರೂಪಾಯಿ ಲೋನ್ ಕೊಡಿಸುವುದಾಗಿ ನಂಬಿಸಲಾಗಿದೆ. ವಿಲ್ಲಾ ಪ್ರಾಜೆಕ್ಟ್ಗಾಗಿ ಈ ಲೋನ್ ಕೊಡಿಸುವುದಾಗಿ ತಿಳಿಸಲಾಗಿತ್ತು.
ಸಾಗರದ ಲಕ್ಷ್ಮಣ, ಮೈಸೂರಿನ ರಾಜೇಶ್ ಎಂಬುವವರಿಂದ ಪ್ರತ್ಯೇಕ ದೂರು ಸಲ್ಲಿಕೆಯಾಗಿತ್ತು. ಸಾಗರ ತಾಲೂಕಿನ ಬಾರೂರು ಗ್ರಾಮದ ಮುತ್ತಲ ಬೈಲಿನ ಲಕ್ಷ್ಮಣ್ ಎಂಬುವರು ಲೋಕೋಪಯೋಗಿ ಇಲಾಖೆ ಕಾರ್ಯಕ್ರಮಗಳ ಗುತ್ತಿಗೆದಾರರಾಗಿದ್ದಾರೆ .
ವಿಲ್ಲಾ ಪ್ರಾಜೆಕ್ಟ್ಗಾಗಿ ಸಚಿವರ ಮೂಲಕ 100 ಕೋಟಿ ರು. ಸರ್ಕಾರದ ನೆರವು ಕೊಡಿಸುವುದಾಗಿ ನಂಬಿಸಿ 2020ರ ಫೆಬ್ರುವರಿಯಲ್ಲಿ 10 ಲಕ್ಷ ಮುಂಗಡ ಪಡೆದಿದ್ದರು. ನಂತರ ಕೈಗೆ ಸಿಗದೆ ಅಲೆದಾಡಿಸುತ್ತಿದ್ದರು. ವಂಚನೆಗೆ ಒಳಗಾಗಿರುವುದು ಖಚಿತವಾದ ನಂತರ ಹಣ ಹಿಂದಿರುಗಿಸಲು ಕೇಳಿದರೆ ಜೀವ ಬೆದರಿಕೆ ಹಾಕಿದ್ದರು’ ಎಂದು ಮೈಸೂರಿನ ಹೆಬ್ಬಾಳದ ಎಂಜಿನಿಯರ್ ಸಿ.ರಾಜೇಶ್ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಕೆ.ಎಸ್. ಈಶ್ವರಪ್ಪ ಅವರ ಮೂಲಕ ಟೆಂಡರ್ ಕೊಡಿಸುವುದಾಗಿ ನಂಬಿಸಿ ಜುಲೈ 2019ರಲ್ಲಿ 26.25 ಲಕ್ಷ ರು. ಪಡೆದು ವಂಚಿಸಿದ್ದಾರೆ’ ಎಂದು ಸಾಗರ ತಾಲ್ಲೂಕಿನ ಬರೂರು–ಮುತ್ತಲ್ಬೈಲಿನ ಗುತ್ತಿಗೆದಾರ ಬಿ.ಲಕ್ಷ್ಮಣ್ ಮತ್ತೊಂದು ದೂರು ದಾಖಲಿಸಿದ್ದಾರೆ.
Advertisement