ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ: ಮೈಸೂರು ದಸರಾ ಉದ್ಘಾಟಿಸಿ ಎಸ್ಎಂ ಕೃಷ್ಣ ಮಾತು

ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿದ್ದಾರೆ. ಅವರು ದೇಶವನ್ನು ಅಭಿವೃದ್ಧಿಪಡಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಶ್ರಮವಹಿಸುವ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಗುರುವಾರ ಹೇಳಿದ್ದಾರೆ.
ಭಾಷಣ ಮಾಡುತ್ತಿರುವ ಎಸ್ಎಂ.ಕೃಷ್ಣಾ
ಭಾಷಣ ಮಾಡುತ್ತಿರುವ ಎಸ್ಎಂ.ಕೃಷ್ಣಾ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿದ್ದಾರೆ. ಅವರು ದೇಶವನ್ನು ಅಭಿವೃದ್ಧಿಪಡಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಶ್ರಮವಹಿಸುವ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಗುರುವಾರ ಹೇಳಿದ್ದಾರೆ.

ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ದೇಶವನ್ನು ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಶ್ರಮವಹಿಸುತ್ತಿದ್ದಾರೆ. ಅವರಿಗೆ ಚಾಮುಂಡೇಶ್ವರಿ ದೇವಿ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. 

ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ನನಗೆ ಅವಕಾಶ ಸಿಕ್ಕಿದೆ. ಮೈಸೂರು ದಸರಾ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿದೆ. ಈ ಅವಕಾಶ ಮಾಡಿಕೊಟ್ಟ ಸಿಎಂಗೆ ನನ್ನ ಅನಂತ ಧನ್ಯವಾದ. ನನ್ನ ವಿದ್ಯಾಭ್ಯಾಸದ ದಿನಗಳಲ್ಲಿ ಪ್ರತಿನಿತ್ಯ ತಾಯಿಗೆ ನಮಿಸುತ್ತಿದ್ದೆ. ಶಾಲೆಗೆ ಹೋಗುವುದಕ್ಕೂ ಮುನ್ನ ದೇವಿಗೆ ನಮಿಸುತ್ತಿದ್ದೆ. ಮೈಸೂರು ದಸರಾಗೆ ವಿದೇಶಗಳಿಂದಲೂ ಜನ ಬರುತ್ತಿದ್ದರು. ದಸರಾ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡಿಯುತಿತ್ತು ಎಂದು ಇದೇ ವೇಳೆ ಎಸ್.ಎಂ.ಕೃಷ್ಣ ಅವರು, ತಮ್ಮ ಬಾಲ್ಯದ ದಿನದಲ್ಲಿ ನಡೆಯುತ್ತಿದ್ದ ದಸರಾ ಬಗ್ಗೆ ಮೆಲುಕು ಹಾಕಿದರು.

ಹನ್ನೆರಡು ವರ್ಷ ಇದ್ದಾಗಲೇ ನಮ್ಮ ತಂದೆ ಓದಲು ಕಳುಹಿಸಿಕೊಟ್ಟರು. ಒಂಟಿಕೊಪ್ಪಲು ಶಾಲೆಯಲ್ಲಿ ಓದಿ, ಮಹಾಜನ ಶಾಲೆಯಲ್ಲಿ ಕಲಿತೆ. ನಂತರ ಯುವರಾಜ ಕಾಲೇಜು, ಮಹಾರಾಜ ಕಾಲೇಜಿನಲ್ಲಿ ಕಲಿತೆ. ನಾನು ಮೈಸೂರಿನ ಜೊತೆಯಲ್ಲೇ ಬೆಳೆದೆ. ಪ್ರತಿದಿನ ಚಾಮುಂಡಿ ಬೆಟ್ಟ ನೋಡುತ್ತಿದ್ದೆ, ಕೈ ಮುಗಿಯುತ್ತಿದೆ. ದಸರಾ ಆ ವೇಳೆ ಸಂಭ್ರಮದಿಂದ ನಡೆಯುತ್ತಿತ್ತು. ರಾಜ್ಯದ ನಾನಾ ಕಡೆ ಹಾಗೂ ವಿದೇಶದಿಂದ ಬರುತ್ತಿದ್ದರು. 

ಪ್ರಜಾಪ್ರತಿನಿಧಿ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿತ್ತು. ಪೀಟಿಲ್ ಚೌಡಯ್ಯ, ದೇವೇಂದ್ರಪ್ಪ ಹಲವರು ಪ್ರಾತಃಸ್ಮರಣೀಯರು ಇದ್ದರು. ಮೈಸೂರು ಕುಸ್ತಿಗೆ ಹೆಸರಾಂತ ಜಿಲ್ಲೆ. ಸಾಹುಕಾರ್ ಚನ್ನಯ್ಯ ಅವರು ಕುಸ್ತಿಗೆ ಸಹಮತ ಹೆಚ್ಚಾಗಿತ್ತು. ಯದುವಂಶದವರು ದಸರಾ ಉತ್ಸವಕ್ಕೆ ಮೆರಗು ತಂದಿದ್ದಾರೆ. ನಾಲ್ವಡಿ ಒಡೆಯರ್, ಜಯಚಾಮರಾಜ ಒಡೆಯರ್ ಕೊಡುಗೆ ಅಪಾರವಾಗಿದೆ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆ ಇದೆ ಅಂತ ಎಸ್ಎಂ ಕೃಷ್ಣ ಭಾಷಣದಲ್ಲಿ ಬಾಲ್ಯದ ದಿನ ಸೇರಿದಂತೆ ಮೈಸೂರಿನ ಪ್ರಮುಖರನ್ನ ನೆನೆದರು.

ದಸರಾ ಪ್ಯಾಕೇಜ್ ಟೂರ್ ಮಾಡಿ: ಬೊಮ್ಮಾಯಿಗೆ ಸಲಹೆ
ಭಾಷಣದಲ್ಲಿ ಪ್ಯಾಕೇಜ್ ಟೂರಿಸಂಗೆ ಎಸ್ಎಂ ಕೃಷ್ಣ ಸಲಹೆ ನೀಡಿದ್ದಾರೆ. ಸಿಎಂ ಬೊಮ್ಮಾಯಿಗೆ ಸಲಹೆ ನೀಡಿದ ಅವರು, ಇದರಿಂದ ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗುತ್ತದೆ. ಸಿಂಗಾಪುರ ನೋಡಲು ಲಕ್ಷಾಂತರ ಜನ ಹೋಗುತ್ತಾರೆ. ಸಿಂಗಾಪುರ ತುಂಬಾ ಸ್ವಚ್ಛವಾಗಿರುವುದರಿಂದ ಹೋಗುತ್ತಾರೆ. ನಮ್ಮ ಮೈಸೂರನ್ನು ಕೂಡ ಸುಂದರ ನಗರ ಮಾಡಬೇಕು. ಪ್ರಕೃತಿದತ್ತವಾಗಿ ಎಲ್ಲ ಸಿಗಬೇಕಾದರೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಪ್ರಧಾನಿ ಮೋದಿಯವರನ್ನು ಕೊಂಡಾಡಿದ ಅವರು, ಮೋದಿ ಬಹಳ ಒಳ್ಳೆಯ ಕೆಲಸ ಮಾಡಿ ದೇಶ ಕಟ್ಟುತ್ತಿದ್ದಾರೆ. ನಾನು ಬಹಳಷ್ಟು ಜನಪ್ರತಿನಿಧಿಗಳ ಆಡಳಿತ ನೋಡಿದ್ದೇನೆ. ಮೋದಿ ಬಹಳ ಶ್ರದ್ಧೆ, ಅಚ್ಚುಕಟ್ಟಾಗಿ ದೇಶ ಕಟ್ಟುತ್ತಿದ್ದಾರೆ. ತಾಯಿ ಚಾಮುಂಡಿ ಮೋದಿ ಅವರಿಗೆ ಇನ್ನಷ್ಟು ಶಕ್ತಿ ಕೊಡಲಿ. ಭಾರತ ಇದೀಗ ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತ ಚೀನಾದ ನಡುವೆ ಪೈಪೋಟಿಯಿದೆ. ಮತ್ಸರವಿಲ್ಲದ ಸ್ಪರ್ಧೆ ಸ್ವಾಗತರ್ಹ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com