ಬೋಧನಾ ಆಸ್ಪತ್ರೆ ಉದ್ಘಾಟನೆ: ಜಯಚಾಮರಾಜ ಒಡೆಯರ್ ಸ್ಮರಿಸಿದ ರಾಷ್ಟ್ರಪತಿ ಕೋವಿಂದ್

ಪಾಶ್ಚಿಮಾತ್ಯ ಸಂಸ್ಕೃತಿಯನ್ನು ದೇಶೀಯ ಸಂಸ್ಕೃತಿಯೊಂದಿಗೆ ಬೆರೆಸುವ ಪ್ರಯತ್ನ ಒಡೆಯರ್ ವಂಶಸ್ಥರದ್ದಾಗಿತ್ತು ಎಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರಪತಿ ಕೋವಿಂದ್
ರಾಷ್ಟ್ರಪತಿ ಕೋವಿಂದ್

ಚಾಮರಾಜನಗರ: ಪಾಶ್ಚಿಮಾತ್ಯ ಸಂಸ್ಕೃತಿಯನ್ನು ದೇಶೀಯ ಸಂಸ್ಕೃತಿಯೊಂದಿಗೆ ಬೆರೆಸುವ ಪ್ರಯತ್ನ ಒಡೆಯರ್ ವಂಶಸ್ಥರದ್ದಾಗಿತ್ತು ಎಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಆಯೋಜಿಸಿರುವ 450 ಹಾಸಿಗೆಯ ಬೋಧನಾ ಆಸ್ಪತ್ರೆಯನ್ನು ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ  ಕನ್ನಡದಲ್ಲಿಯೇ ಮಾತು ಆರಂಭಿಸಿದ ಕೋವಿಂದ್ ಅವರು, 'ಕರ್ನಾಟಕಕ್ಕೆ ಬರುವುದು ಬಹಳ ಇಷ್ಟ. ಇಲ್ಲಿನ ಜನರೊಂದಿಗೆ ಇರುವುದು ಬಹಳ ಇಷ್ಟ ಎಂದರು.

ನವರಾತ್ರಿ ಆರಂಭದಲ್ಲಿ ಆಸ್ಪತ್ರೆ ಉದ್ಘಾಟನೆಯಾಗಿರುವುದು ಬಹಳ ಪುಣ್ಯದ ಕೆಲಸವಾಗಿದೆ. ಜಯಚಾಮರಾಜೇಂದ್ರ ಒಡೆಯರಿಂದ ಚಾಮರಾಜನಗರವಾಗಿದೆ. ಒಡೆಯರ ಸ್ಮರಣೆಗೆ ಜಿಲ್ಲೆಯ ಹೆಸರು ಮತ್ತು ವೈದ್ಯಕೀಯ ಕಾಲೇಜಿಗೆ ಹೆಸರಿಟ್ಟಿರುವುದು ಉತ್ತಮ ಕೆಲಸವಾಗಿದೆ. ಒಡೆಯರ್ ವಂಶಸ್ಥರದ್ದು ದೂರದೃಷ್ಟಿಯ ಬುದ್ಧಿವಂತಿಕೆ ಮತ್ತು ಆಡಳಿತ ವೈಖರಿಯಾಗಿತ್ತು. ಕೈಗಾರಿಕೆ, ಉದ್ದಿಮೆಗೆ ಪ್ರೋತ್ಸಾಹ, ಜನಪ್ರಿಯತೆಯಿಂದ ಮೈಸೂರು ರಾಜ್ಯದ ರಾಜ್ಯಪಾಲರನ್ನಾಗಿ ಜಯಚಾಮರಾಜ ಒಡೆಯರ್ ಅವರನ್ನು ನೇಮಿಸಲಾಗಿತ್ತು ಎಂದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ವಿವಿಧತೆಯಲ್ಲಿ ಏಕತೆಯ ಸಂಕೇತವಾಗಿದೆ. ಸುಮಾರು 700ಕ್ಕೂ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿನಿಯರು ಇಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ವಿಷಯ. ವೈದ್ಯಕೀಯ ವಿದ್ಯಾರ್ಥಿಗಳು ಸೇವೆಗೆ ಹೆಚ್ಚು ಒತ್ತು ಕೊಡಬೇಕು. ಮಾನವೀಯ ಸೇವೆಗಳು ಯುವ ವೈದ್ಯರಿಗೆ ಆದರ್ಶವಾಗಬೇಕು ಎಂದು ರಾಷ್ಟ್ರಪತಿ ಕರೆ ನೀಡಿದರು.

ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಪಡೆದ ರಾಷ್ಟ್ರಪತಿ
ಇದಕ್ಕೂ ಮೊದಲು ಜಿಲ್ಲೆಯ ಯಳಂದೂರು ತಾಲೂಕಿನ ಪ್ರಸಿದ್ಧ ಪೌರಾಣಿಕ ಕ್ಷೇತ್ರವಾದ ಬಿಳಿಗಿರಿ ರಂಗನಬೆಟ್ಟಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಪಡೆದರು. ರಾಷ್ಟ್ರಪತಿಗಳ ಆಗಮನದ ಹಿನ್ನಲೆಯಲ್ಲಿ ದೇಗುಲವನ್ನು ವಿಶೇಷವಾಗಿ ಸಿದ್ಧಗೊಳಿಸಲಾಗಿತ್ತು. ವಡಗೆರೆ ಗ್ರಾಮದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೆಲಿಪ್ಯಾಡ್ ಗೆ ಕುಟುಂಬ ಸಮೇತರಾಗಿ ಬಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸ್ವಾಗತವನ್ನು ಕೋರಲಾಯಿತು. ನಂತರ ರಸ್ತೆ ಮಾರ್ಗವಾಗಿ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಿದರು. ಬಳಿಕ ಬಿಳಿಗಿರಿ ರಂಗನಾಥ ಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ದರ್ಶನವನ್ನು ಪಡೆದರು. 

ಈ ವೇಳೆ ಸ್ಥಳೀಯ ಶಾಸಕ ಎನ್. ಮಹೇಶ್ ಕೂಡ ರಾಷ್ಟ್ರಪತಿಗಳ ಜೊತೆಯಲ್ಲಿ ಕಾಣಿಸಿಕೊಂಡರು. ದರ್ಶನ ಮುಗಿದ ನಂತರ ಮತ್ತೆ ವಡಗೆರೆ ಗೆ ರಸ್ತೆ ಮಾರ್ಗವಾಗಿ ಬಂದ ರಾಷ್ಟ್ರಪತಿಗಳು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಚಾಮರಾಜನಗರದ ಆಸ್ಪತ್ರೆ ಉದ್ಘಾಟನೆಗೆ ತೆರಳಿದರು.

ಇನ್ನು ಕೋವಿಂದ್ ಅವರು ಬಿಳಿಗಿರಿ ರಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಮೊದಲ ರಾಷ್ಟ್ರಪತಿಯಾಗಿದ್ದು, ಎಪಿ ಜೆ ಅಬ್ದುಲ್ ಕಲಾಂ ಅವರ ಬಳಿಕ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಎರಡನೇ ರಾಷ್ಟ್ರಪತಿಗಳಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com