ಗುತ್ತಿಗೆದಾರರು, ಲೆಕ್ಕ ಪರಿಶೋಧಕರ ಮನೆ, ಕಚೇರಿ ಮೇಲೆ ಐಟಿ ದಾಳಿ: 750 ಕೋಟಿ ರೂ. ಅಕ್ರಮ‌ ಆಸ್ತಿ ಪತ್ತೆ

ಬೆಂಗಳೂರು ಮೂಲದ ಗುತ್ತಿಗೆದಾರರು ಮತ್ತು ಲೆಕ್ಕ ಪರಿಶೋಧಕರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ಸುಮಾರು ರೂ.750 ಕೋಟಿ ಬಹಿರಂಗಪಡಿಸದ ಆದಾಯವನ್ನು ಪತ್ತೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಮಂಗಳವಾರ ಪ್ರಕಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನೀರಾವರಿ ಮತ್ತು ಹೆದ್ದಾರಿ ಯೋಜನೆಗಳ ನಿರ್ವಹಣೆಯಲ್ಲಿ ತೊಡಗಿರುವ ಮೂರು ಪ್ರಮುಖ ಬೆಂಗಳೂರು ಮೂಲದ ಗುತ್ತಿಗೆದಾರರು ಮತ್ತು ಲೆಕ್ಕ ಪರಿಶೋಧಕರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ಸುಮಾರು ರೂ.750 ಕೋಟಿ ಬಹಿರಂಗಪಡಿಸದ ಆದಾಯವನ್ನು ಪತ್ತೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಮಂಗಳವಾರ ಪ್ರಕಟಿಸಿದೆ.

ದಾಳಿಯಲ್ಲಿ ಮಹತ್ವದ ದಾಖಲಾತಿ, ಆಸ್ತಿಪತ್ರ, ನಕಲಿ ಬಿಲ್ ಜಪ್ತಿ ಮಾಡಿ ಅಧಿಕಾರಿಗಳು‌ ಪರಿಶೀಲಿಸಿದಾಗ ಮೂವರು ಗುತ್ತಿಗೆದಾರರ ಒಟ್ಟು 750 ಕೋಟಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಈ ಪೈಕಿ 487 ಕೋಟಿ ರೂಪಾಯಿ ಅಕ್ರಮ ಎಂದು ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ. ಇನ್ನುಳಿದ‌ ಹಣ ಬಗ್ಗೆ ಅಧಿಕಾರಿಗಳು ತನಿಖೆ‌ ಮುಂದುವರೆಸಿದ್ದಾರೆಂದು ತಿಳಿಸಿದೆ. 

ಐಟಿ ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹೇಳಿಕೆ ಬಿಡುಗಡೆ ​ ಮಾಡಿದ್ದು, ನೀರಾವರಿ, ಹೆದ್ದಾರಿ ಯೋಜನೆಗಳಲ್ಲಿ ಅಕ್ರಮ ಎಸಗಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆರೋಪದಡಿ ಕಳೆದ‌ ವಾರ ಮೂವರು ಗುತ್ತಿಗೆದಾರರ ಮೇಲೆ ನಡೆದಿದ್ದ ಐಟಿ ಅಧಿಕಾರಿಗಳ ದಾಳಿಯಲ್ಲಿ‌ ಸುಮಾರು 750 ಕೋಟಿ ರೂ.ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ 47 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಖ್ಯವಾಗಿ ನೀರಾವರಿ ಇಲಾಖೆ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಕೋಟ್ಯಂತರ ತೆರಿಗೆ ವಂಚನೆ ಸಂಬಂಧ ಮೂವರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು.‌

ಗುತ್ತಿಗೆದಾರರ ಮನೆಯೊಂದರಲ್ಲಿ 4.69 ಕೋಟಿ ನಗದು, 8.67 ಕೋಟಿ ಚಿನ್ನ, 29.83 ಲಕ್ಷ ಮೌಲ್ಯದ ಬೆಳ್ಳಿ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ. ಮೂವರು ಪ್ರಮುಖ ಗುತ್ತಿಗೆದಾರರು ಸುಮಾರು 382 ಕೋಟಿ ರೂ. ಅಕ್ರಮ ವಹಿವಾಟು ನಡೆದಿದೆ. ಕಾರ್ಮಿಕರ ಹೆಸರಲ್ಲಿ ನೂರಾರೂ ಕೋಟಿ ವಂಚನೆ ಎಸಗಿರುವುದು ಗೊತ್ತಾಗಿದೆ. ಕಾರ್ಮಿಕರ ಹೆಸರಿನಲ್ಲಿ ಸಂಬಳ ಹಾಗೂ 40 ಜನರ ಹೆಸರಿನಲ್ಲಿ ಬೋಗಸ್ ಉಪಗುತ್ತಿಗೆದಾರರನ್ನು ಸೃಷ್ಟಿಸಿ ಗೋಲ್​ಮಾಲ್ ಮಾಡಲಾಗಿದೆ‌. ಪರಿಶೀಲನೆ ವೇಳೆ ಭೌತಿಕ ದಾಖಲಾತಿ ಹಾಗೂ ಡಿಜಿಟಲ್ ಡ್ಯಾಕುಮೆಂಟ್​ಗಳು ಸಿಕ್ಕಿವೆ‌ ಎಂದು ಆದಾಯ ತೆರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com