ಗ್ರಾಮ ಪಂಚಾಯತಿಗಳ ಮೂಲಕ ಜನರಿಗೆ ಹೆಚ್ಚಿನ ಸೇವೆ ನೀಡಲು ಸರ್ಕಾರ ಮುಂದು: ನೌಕರರ ವೇತನ ಸಮಸ್ಯೆ ಬಗೆಹರಿಸಲು ಸಮಿತಿ ರಚನೆ

ಹಲವು ನಾಗರಿಕ ಸ್ನೇಹಿ ಸೇವೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಲು ರಾಜ್ಯ ಸರ್ಕಾರ ಉತ್ಸುಕವಾಗಿರುವಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ವೇತನ ವಿತರಣೆ ಸೇರಿದಂತೆ ಅದರ ಆಡಳಿತವನ್ನು ಚುರುಕುಗೊಳಿಸಲು ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಲವು ನಾಗರಿಕ ಸ್ನೇಹಿ ಸೇವೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಲು ರಾಜ್ಯ ಸರ್ಕಾರ ಉತ್ಸುಕವಾಗಿರುವಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ವೇತನ ವಿತರಣೆ ಸೇರಿದಂತೆ ಅದರ ಆಡಳಿತವನ್ನು ಚುರುಕುಗೊಳಿಸಲು ನಿರ್ಧರಿಸಿದೆ.

ಕರ್ನಾಟಕದಲ್ಲಿ 6 ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯತ್ ಗಳಿವೆ. ಅವುಗಳ ಸಶಕ್ತೀಕರಣಕ್ಕೆ ಸರ್ಕಾರ ಹಲವು ನಾಗರಿಕ ಸೇವೆಗಳನ್ನು ಗ್ರಾಮ ಪಂಚಾಯತ್ ಗೆ ನೀಡಿದೆ. ಅವುಗಳಲ್ಲಿ ಜನನ, ಮರಣ ಪ್ರಮಾಣಪತ್ರ, ಆದಾಯ ಮತ್ತು ಜಾತಿ ಸರ್ಟಿಫಿಕೇಟ್, ಖಾತೆ, ಆಕ್ಯುಪೆನ್ಸಿ ಸರ್ಟಿಫಿಕೇಟ್ ಗಳು ಸೇರಿವೆ. ಪ್ರಸ್ತುತ ಈ ಸೇವೆಗಳನ್ನು ಪಡೆಯಲು ನಾಗರಿಕರು ತಾಲ್ಲೂಕು ಕೇಂದ್ರಗಳಿಗೆ ಹೋಗಬೇಕು.

ನಾಗರಿಕ ಸೇವೆಗಳನ್ನು ಹೆಚ್ಚೆಚ್ಚು ನೀಡುತ್ತಾ ಹೋದಾಗ ಪಂಚಾಯತ್ ನೌಕರರ ಕೆಲಸಗಳು ಹೆಚ್ಚಾಗುತ್ತವೆ. ಆದರೆ ತಮಗೆ ವೇತನ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದು ಪಂಚಾಯತ್ ನೌಕರರು ಹೇಳುತ್ತಾರೆ. ತಿಂಗಳುಗಟ್ಟಲೆ ನಮಗೆ ವೇತನ ಬರುತ್ತಿಲ್ಲ. ಹಲವು ಬಾರಿ ಈ ಬಗ್ಗೆ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನೌಕರರ1ಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಹೆಚ್ಚು ಕೆಲಸ ನೀಡಿ ಸರಿಯಾದ ಸಮಯಕ್ಕೆ ಸಂಬಳ ನೀಡದಿರುವುದು ತಪ್ಪು. ಪ್ರತಿಭಟನೆ  ನಡೆಸಲು ಮುಂದಾದರೆ ಇಡೀ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ಆರ್ ಡಿಪಿಆರ್ ಇಲಾಖೆ ಮೂಲಗಳು ಹೇಳುತ್ತವೆ.

ಪಂಚಾಯತ್ ನೌಕರರ ವೇತನ ಸರಿಯಾದ ಸಮಯಕ್ಕೆ ನೀಡಲು ಆರ್ ಡಿಪಿಆರ್ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ನೇಮಿಸಲಾಗಿದೆ. ಪ್ರತಿ ತಿಂಗಳ 5ರೊಳಗೆ ನೌಕರರಿಗೆ ವೇತನ ನೀಡಬೇಕೆಂದು ಕೋರಲಾಗಿದೆ. ಬಾಕಿ ಉಳಿಕೆ ವೇತನವನ್ನು ನೀಡುವಂತೆ ಸೂಚಿಸಲಾಗಿದೆ. ಪಂಚಾಯತ್ ನೌಕರರ ಅಂತಿಮ ವಿಧಿವಿಧಾನಗಳಿಗೆ ಹಣವನ್ನು ಮಂಜೂರು ಮಾಡಬಹುದೇ ಎಂದು ಅಧ್ಯಯನ ಮಾಡಲು ಸಮಿತಿಯನ್ನು ಕೇಳಲಾಗಿದೆ.

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಮಾತನಾಡಿಸಿದಾಗ, ಗ್ರಾಮ ಪಂಚಾಯತ್ ಹೊಸ ಸದಸ್ಯರು ಕೆಲ ತಿಂಗಳ ಹಿಂದಷ್ಟೇ ಚುನಾಯಿತರಾಗಿದ್ದಾರೆ. ಅವರಿಗೆ ಅಭಿವೃದ್ಧಿ ಕೆಲಸಗಳನ್ನು ಜಾರಿಗೆ ತರುವ ಉತ್ಸುಕತೆಯಿದೆ. ಹಂಚಿಕೆಯಾದ ನಿಧಿಯನ್ನು ಕೂಡ ಬಳಸುತ್ತಾರೆ. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಇಲಾಖೆ ನೌಕರರು ಮುಖ್ಯ ಪಾತ್ರ ವಹಿಸುತ್ತಾರೆ. ಹೊಸದಾಗಿ ಚುನಾಯಿತರಾದ ಸದಸ್ಯರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಡಳಿತವನ್ನು ಸುಗಮಗೊಳಿಸಲು ಸಮಿತಿ ಹಲವು ಸಮಸ್ಯೆಗಳನ್ನು, ವಿಚಾರಗಳನ್ನು ನೋಡಲಿದೆ. ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಕೋರುತ್ತೇವೆ ಎಂದರು.

ಈ ಹಿಂದೆ ಗ್ರಾಮ ಪಂಚಾಯತ್ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ ಎಂಬ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿತ್ತು. ಬಿಲ್ ಕಲೆಕ್ಟರ್, ವಾಟರ್‌ಮ್ಯಾನ್, ಡೇಟಾ ಆಪರೇಟರ್ ಮತ್ತು ಅಟೆಂಡರ್‌ನಂತಹ ವಿವಿಧ ಹುದ್ದೆಗಳಲ್ಲಿ 50,000 ಕ್ಕೂ ಹೆಚ್ಚು ಜನರು ಗ್ರಾಮ ಪಂಚಾಯತ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕೋವಿಡ್ -19 ಲಾಕ್‌ಡೌನ್‌ ಸಮಯದಲ್ಲಿ ಕೆಲಸ ಮಾಡುತ್ತಿದ್ದರು, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದರು. ಸಾಂಕ್ರಾಮಿಕ ರೋಗದ ಬಗ್ಗೆ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಜನರಿಗೆ ಆರೋಗ್ಯ ಕಿಟ್ ಒದಗಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com