ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಇಳಿಮುಖ: ಕೃಷಿ ಇಲಾಖೆ ವರದಿ

ಕೋವಿಡ್ ಸಾಂಕ್ರಾಮಿಕದ ಸಂಕಷ್ಟ ಮತ್ತು ಮಳೆ ಸಂಬಂಧಿತ ಅನಾಹುತಗಳ ಮಧ್ಯೆ ಇಲ್ಲಿದೆ ಒಂದು ಸಿಹಿಸುದ್ದಿ. ಹಲವು ವರ್ಷಗಳ ನಂತರ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಿಧಾನವಾಗಿ ಇಳಿಮುಖವಾಗುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಸಂಕಷ್ಟ ಮತ್ತು ಮಳೆ ಸಂಬಂಧಿತ ಅನಾಹುತಗಳ ಮಧ್ಯೆ ಇಲ್ಲಿದೆ ಒಂದು ಸಿಹಿಸುದ್ದಿ. ಹಲವು ವರ್ಷಗಳ ನಂತರ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಿಧಾನವಾಗಿ ಇಳಿಮುಖವಾಗುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ 746 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡ ವರದಿಯಾಗಿದ್ದರೆ ಈ ಸಂಖ್ಯೆ 2019-20ರಲ್ಲಿ 1,076 ಆಗಿತ್ತು.

ರಾಜ್ಯ ಕೃಷಿ ಇಲಾಖೆಯ ಅಂಕಿಅಂಶ ಪ್ರಕಾರ, ಕಳೆದ ವರ್ಷ 2020ರ ಏಪ್ರಿಲ್ ತಿಂಗಳಿನಿಂದ ಕಳೆದ ಸೆಪ್ಟೆಂಬರ್ ವರೆಗೆ 746 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.

ಜಮೀನಿನಲ್ಲಿ ಉತ್ತಮ ಇಳುವರಿ ಸಿಕ್ಕದೆ, ಅವ್ಯಾಹತ ಮಳೆ, ಸಾಲದಿಂದ ನೊಂದು ರೈತರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಜ್ಞರು ಹೇಳುತ್ತಾರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ಮತ್ತು ಹಿರಿಯ ಸಲಹೆಗಾರ ಶ್ರೀನಿವಾಸ್ ರೆಡ್ಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಕಳೆದ ಕೆಲ ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗುತ್ತಿದೆ ಎನ್ನುತ್ತಾರೆ.

ಮಳೆ ಬಾರದಿದ್ದರೆ ರೈತರು ಹೂಡಿಕೆ ಮಾಡಿದ್ದಕ್ಕೆ ಶೇಕಡಾ 50ರಷ್ಟು ಕೂಡ ಇಳುವರಿ ಸಿಗುವುದಿಲ್ಲ. ಉತ್ತಮ ಮಳೆಯಾದರೆ ರೈತರ ಅರ್ಧ ಸಮಸ್ಯೆ ದೂರವಾಗುತ್ತದೆ. ಇದರಿಂದಾಗಿ ಆತ್ಮಹತ್ಯೆ ಪ್ರಕರಣಗಳು ಅಲ್ಲಲ್ಲಿ ಸಂಭವಿಸುತ್ತವೆ. ಸಾಮಾಜಿಕ-ಆರ್ಥಿಕ ಕಾರಣಗಳು ಕೂಡ ರೈತರ ಆತ್ಮಹತ್ಯೆಗೆ ಹಲವು ಬಾರಿ ಕಾರಣವಾಗುತ್ತವೆ ಎಂದು ಶ್ರೀನಿವಾಸ್ ರೆಡ್ಡಿ ಹೇಳುತ್ತಾರೆ. 

ಉತ್ತಮ ಮಳೆಯಾದರೆ ರಾಜ್ಯದಲ್ಲಿ 150 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯಾಗುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಕಳಪೆ ಗುಣಮಟ್ಟದ ಬೀಜ ವಿತರಣೆಯಿಂದಾಗಿ ರೈತರಿಗೆ ಉತ್ತಮ ಇಳುವರಿ ಸಿಕ್ಕಿಲ್ಲ. ಇದು ಕೂಡ ರೈತರ ಆತ್ಮಹತ್ಯೆಗೆ ಮುಖ್ಯ ಕಾರಣವಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ನಾವು 10 ಲಕ್ಷ ಟನ್ ಕಳಪೆ ಗುಣಮಟ್ಟದ ಆಹಾರ ಪದಾರ್ಥ ವಶಪಡಿಸಿಕೊಂಡಿದ್ದೇವೆ. ಈ ಸಂಬಂಧ ವ್ಯಕ್ತಿಗಳು ಮತ್ತು ಕಂಪೆನಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದೇವೆ. ಬೀಜ ಕಳಪೆ ಗುಣಮಟ್ಟದ್ದಾಗಿದ್ದರೆ ಇಳುವರಿ ಶೇಕಡಾ 60ಕ್ಕಿಂತ ಹೆಚ್ಚು ಬರುವುದಿಲ್ಲ, ಇದು ರೈತರನ್ನು ಕಂಗೆಡಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಬಗ್ಗೆ ಕೃಷಿ ಸಚಿವ ಬಿ ಸಿ ಪಾಟೀಲ್, ರೈತರ ಆತ್ಮಹತ್ಯೆಗಳನ್ನು ತಪ್ಪಿಸಬೇಕೆಂದರೆ ಉತ್ತಮ ಮಳೆ ಮತ್ತು ಸಾಮೂಹಿಕ ಪ್ರಯತ್ನದಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿದೆ. ರೈತರ ಸಂಬಂಧಿ ಕಾನೂನುಗಳು ಇತ್ತೀಚೆಗೆ ಅವರಿಗೆ ಅನುಕೂಲವಾಗಿದೆ. ನಮ್ಮ ಅಧಿಕಾರಿಗಳು ಇನ್ನಷ್ಟು ಜಾಗೃತರಾಗಿದ್ದು ಕಳಪೆ ಗುಣಮಟ್ಟದ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ. ಕೃಷಿ ಉತ್ಪನ್ನಗಳ ಅಂತರಾಜ್ಯ ಓಡಾಟಕ್ಕೆ ತೆರಿಗೆಯಿಲ್ಲ, ಉತ್ತಮ ಇಳುವರಿಯಾಗುತ್ತಿದೆ, ನಾವು ಮುಂದಿನ ದಿನಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಇದರಿಂದ ರೈತರ ಉತ್ಪನ್ನಗಳಿಗೆ ಇನ್ನೂ ಹೆಚ್ಚಿನ ಮಾರುಕಟ್ಟೆ ಬೆಲೆ ಬರುತ್ತದೆ ಎಂದರು.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಇನ್ನೂ ಸಿಗದಿರುವ ಬಗ್ಗೆ ಕೃಷಿ ಸಚಿವರನ್ನು ಕೇಳಿದಾಗ, ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಕೆಲವು ಕೇಸುಗಳಲ್ಲಿ ಹೆಚ್ಚುವರಿ ಆಯುಕ್ತರ ಸಮಿತಿಗಳು ಅಗತ್ಯ ದಾಖಲೆಗಳಿಗೆ ಒಪ್ಪಿಗೆ ನೀಡಿ ಹಣ ಮಂಜೂರು ಮಾಡಬೇಕಿದೆ. ಆ ಬಳಿಕವಷ್ಟೇ ಪರಿಹಾರ ಬಿಡುಗಡೆಯಾಗುತ್ತದೆ ಎಂದರು.

ಈ ಬಗ್ಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತರ ಆತ್ಮಹತ್ಯೆಗಳೇನು ಕಡಿಮೆಯಾಗಿಲ್ಲ. ಅಧಿಕಾರಿಗಳು ಕೆಲವು ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಿಲ್ಲ ಅಥವಾ ಇದು ಅಪೂರ್ಣ ಮಾಹಿತಿಯಾಗಿರಬೇಕು. ಈ ವರದಿ, ಅಂಕಿಅಂಶವನ್ನು ನಾನು ಒಪ್ಪುವುದಿಲ್ಲ, ರೈತರು ಇನ್ನೂ ಸಂಕಷ್ಟದಲ್ಲಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com