ದಿಶಾ ರವಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ: ಟೂಲ್ ಕಿಟ್ ಪ್ರಕರಣಕ್ಕೆ 'ಸಿ' ರಿಪೋರ್ಟ್!

ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲು ದೆಹಲಿ ಪೊಲೀಸರು ಅಂತಿಮ ವರದಿ ಸಲ್ಲಿಸುವ ಸಾಧ್ಯತಗಳಿವೆ ಎಂದು ತಿಳಿದುಬಂದಿದೆ.
ದಿಶಾ ರವಿ
ದಿಶಾ ರವಿ

ಬೆಂಗಳೂರು: ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲು ದೆಹಲಿ ಪೊಲೀಸರು ಅಂತಿಮ ವರದಿ ಸಲ್ಲಿಸುವ ಸಾಧ್ಯತಗಳಿವೆ ಎಂದು ತಿಳಿದುಬಂದಿದೆ.

ಕಳೆದ ವರ್ಷದ ಜನವರಿ 26ರಂದು ದೆಹಲಿಯಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದಿದ್ದು ಅದರ ಹಿಂದೆ ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಇದ್ದರು ಎಂದು ಆರೋಪಿಸಿ ಫೆಬ್ರವರಿ 13ರಂದು ದೆಹಲಿ ಪೊಲೀಸರು ದೇಶದ್ರೋಹ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿ ಬಂಧಿಸಿದ್ದರು. ಪೊಲೀಸರ ಈ ನಡೆಯ ವಿರುದ್ಧ ವಿಶ್ವಾದ್ಯಂತ ಪರಿಸರ ಕಾರ್ಯಕರ್ತರು, ಹೋರಾಟಗಾರರು ಧ್ವನಿ ಎತ್ತಿದ್ದರು. ಬಂಧನದ 10 ದಿನಗಳ ಬಳಿಕ ದೆಹಲಿ ಕೋರ್ಟ್ ದಿಶಾಗೆ ಜಾಮೀನು ನೀಡಿತ್ತು.

ದಿಶಾ ರವಿ ವಿರುದ್ಧ, ದೇಶದ್ರೋಹ, ದ್ವೇಷವನ್ನು ಉತ್ತೇಜಿಸುವುದು ಮತ್ತು ಕ್ರಿಮಿನಲ್ ಪಿತೂರಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರ ಸರ್ಕಾರ ಮತ್ತದರ ಸಚಿವಾಲಯಗಳು ಮೊದಲಿನಿಂದಲೂ ರೈತ ಪ್ರತಿಭಟನೆಗಳ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂದು ಪ್ರತಿಪಾದಿಸುತ್ತಾ ಬಂದಿದೆ. ಅಂತರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥಂಬರ್ಗ್ ಭಾರತದ ರೈತರನ್ನು ಬೆಂಬಲಿಸಿ ಹಂಚಿಕೊಂಡಿದ್ದ ಟೂಲ್‌ಕಿಟ್‌ನ್ನು ಸಂಪಾದಿಸಿದ್ದು ದಿಶಾ ಎನ್ನುವುದು ಪೊಲೀಸರ ಆರೋಪ.

ದಿಶಾ ರವಿ ಅವರು ‘ಟೂಲ್‌ಕಿಟ್‌’ನ ‘ರೂಪಿಸುವಿಕೆ ಮತ್ತು ಪ್ರಚಾರ ಪಡಿಸುವಿಕೆ’ಯ ‘ಪ್ರಮುಖ ಪಿತೂರಿ’ ಎಂದು ಹೇಳಿದ್ದ ದೆಹಲಿ ಪೊಲೀಸರು ಇದೇ ಉದ್ದೇಶಕ್ಕಾಗಿ ಒಂದು ವಾಟ್ಸಪ್ ಗುಂಪನ್ನೂ ರಚಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಒಂಭತ್ತು ತಿಂಗಳುಗಳೇ ಕಳೆದರೂ ಪೊಲೀಸರಿಗೆ ತಮ್ಮ ಆರೋಪಗಳಿಗೆ ಪೂರಕವಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪೊಲೀಸರು ದಿಶಾ ರವಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸದಿರಲು ಮತ್ತು ಪ್ರಕರಣದ ಅಂತಿಮ ವರದಿ (ಸಿ ರಿಪೋರ್ಸ್ಟ್) ಸಲ್ಲಿಸಲು ಚಿಂತಿಸುತ್ತಿದ್ದಾರೆ ತಿಳಿದುಬಂದಿದೆ.

ಆಕೆಯ ಬಂಧನವು ರೈತರ ಪ್ರತಿಭಟನೆ ಮತ್ತು ಅದನ್ನು ಬೆಂಬಲಿಸುವವರನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನವಾಗಿ ವ್ಯಾಪಕವಾಗಿ ಟೀಕಿಸಲ್ಪಟ್ಟಿತು ಮತ್ತು ಅಂತರರಾಷ್ಟ್ರೀಯ ಖಂಡನೆಗೆ ಒಳಗಾಗಿತ್ತು.  ಆಕೆಗೆ ಜಾಮೀನು ನೀಡುವಾಗ, ದೆಹಲಿ ನ್ಯಾಯಾಲಯವು ದಿಶಾ ರವಿ ವಿರುದ್ಧ ಪೋಲೀಸ್ ಕ್ರಮವು ‘ದುರ್ಬಲ’ ಸಾಕ್ಷ್ಯವನ್ನು ಆಧರಿಸಿದೆ ಎಂದು ಹೇಳಿತ್ತು.

ಆದರೆ ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಲಿಸ್ತಾನ‌ ಪರ ಸಂಘಟನೆಯಾದ ಪಿಎಫ್‌ಜೆ ಸದಸ್ಯರೊಂದಿಗೆ ಜನವರಿ 26ಕ್ಕೂ ಮೊದಲು ದಿಶಾ ಝೂಮ್‌ ಕರೆಯಲ್ಲಿ ಮಾತನಾಡಿದ್ದಾರೆ ಎನ್ನುವುದು ಪೊಲೀಸರ ಆರೋಪ. ಈ ಬಗ್ಗೆ ಝೂಮ್ ಗೆ ಸೈಬರ್ ಸೆಲ್ ಪತ್ರ ಬರೆದಿದ್ದರೂ ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ತನಿಖಾಧಿಕಾರಿಗಳು ‘ಟೂಲ್‌ಕಿಟ್’ ಡಾಕ್ಯುಮೆಂಟ್ ಕುರಿತು ಮಾಹಿತಿಗಾಗಿ ಗೂಗಲ್ ಅನ್ನು ಸಂಪರ್ಕಿಸಿದಾಗಲೂ‌ ಪ್ರತಿಕ್ರಿಯೆ ಬಂದಿಲ್ಲ.

ತನಿಖಾಧಿಕಾರಿಗಳು ದಿಶಾ ರವಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ನಂತರವೂ ಅವರನ್ನು ತನಿಖೆಗೊಳಪಡಿಸಿದ್ದಾರೆಂದು ತಿಳಿದು ಬಂದಿದೆ, ಆದರೆ ಜನವರಿ 26 ರ ಹಿಂಸಾಚಾರದ ಹಿಂದಿನ ‘ಅಪರಾಧ ಪಿತೂರಿ’ ಯಲ್ಲಿ ಆಕೆಯನ್ನು ನಿರ್ಣಾಯಕ ಆರೋಪಿ ಎಂದು ಗುರುತಿಸುವಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎನ್ನಲಾಗಿದೆ.‌ ಪ್ರಸ್ತುತ ಸನ್ನಿವೇಶವನ್ನು ಪೊಲೀಸರು ಪ್ರಕರಣದ ಕುರಿತು ಚಾರ್ಜ್ ಶೀಟ್ ಸಲ್ಲಿಸದೆ ಇಡೀ ಪ್ರಕರಣವನ್ನು ಮುಕ್ತಾಯಗೊಳಿಸುವ ಯೋಚನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com