ದಕ್ಷಿಣ ಕನ್ನಡ: ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು, ಪತಿ ಆರೋಪ

ಉಗ್ರ ಸಂಘಟನೆ ಸಂಪರ್ಕ ಶಂಕೆ ಮೇರೆಗೆ ಪತ್ನಿ ವಿರುದ್ಧ ಪತಿಯೇ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಉಗ್ರ ಸಂಘಟನೆ ಸಂಪರ್ಕ ಶಂಕೆ ಮೇರೆಗೆ ಪತ್ನಿ ವಿರುದ್ಧ ಪತಿಯೇ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಚಿದಾನಂದ ಕೆ.ಆರ್. ಪತ್ನಿ ವಿರುದ್ಧ ದೂರು ನೀಡಿದ್ದಾರೆ. ಇವರ ಪತ್ನಿ ರಾಜಿ ರಾಘವನ್ 11 ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 

ಕಳೆದ 11 ವರ್ಷಗಳಿಂದ ರಾಜಿ ರಾಘವನ್ ದುಬೈನಲ್ಲಿರುವ ಪಾಕಿಸ್ತಾನದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಗೆ ಉಗ್ರ ಸಂಘಟನೆಯೊಂದಿಗೆ ನಂಟಿರುವ ಸಾಧ್ಯತೆಗಳಿವೆ. ಹೀಗಾಗಿ ಪೊಲೀಸರು ಕೂಡಲೇ ವಿಚಾರಣೆಗೊಳಪಡಿಸಿ, ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವುದರ ಕುರಿತು ಪತ್ತೆ ಹಚ್ಚಬೇಕಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

‘ಪತ್ನಿ ಜುಲೈ 11ಕ್ಕೆ ಮತ್ತೆ ಊರಿಗೆ ಬಂದಿದ್ದು, ಮಗಳನ್ನು ತನ್ನೊಂದಿಗೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸಿದ್ದಳು. ಇದಕ್ಕೆ ನಾನು ನಿರಾಕರಿಸಿದಾಗ ಆಕೆ ನನಗೆ ಬೆದರಿಕೆ ಹಾಕಿದ್ದಳು. ಬಳಿಕ ಅನಾಮಧೇಶ ವ್ಯಕ್ತಿಯೊಬ್ಬ ಲಕ್ಷದ್ವೀಪದಿಂದ ನನಗೆ ಕರೆ ಮಾಡಿದ್ದ. ಈ ವೇಳೆ ನನ್ನ ಪತ್ನಿ ಹಾಗೂ ಪುತ್ರಿಯನ್ನು ಆತನ ಜೊತೆಗೆ ಕಳುಹಿಸುವಂತೆ ಒತ್ತಾಯಿಸಿದ್ದ. ನಂತರ ಕೇರಳ ರಾಜ್ಯಕ್ಕೆ ಬರುವಂತೆ ತಿಳಿಸಿ ಹಣ ನೀಡುವುದಾಗಿ ತಿಳಿಸಿದ್ದ. 

ಆ.26ರಂದು ಮಗಳ ಜೊತೆ ರಾತ್ರಿ ಮಲಗಿದ್ದ ರಾಜಿ ರಾಘವನ್, ನಸುಕಿನ ವೇಳೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ನಾವು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದೆವು. ಪತ್ನಿ ಮನೆಯಲ್ಲಿದ್ದ ರೂ.95 ಸಾವಿರ ನಗದು, ಆಧಾರ್ ಹಾಗೂ ಪಡಿತರ ಚೀಟಿ, ಚಿನ್ನದ ಬಳೆಗಳನ್ನು ತೆಗೆದುಕೊಂಡು ಹೋಗಿದ್ದಾಳೆ. ನನಗೆ ಕೇರಳದಿಂದ ಪತ್ನಿ, ಮಗಳಿಬ್ಬರನ್ನು ಕಳುಹಿಸಿ ಕೊಡಬೇಕು ಎಂದು ಕರೆಯ ಮೇಲೆ ಕರೆ ಬರುತ್ತಿವೆ. ನನ್ನ ಪತ್ನಿಯಿಂದ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು, ನನಗೂ ಹಾಗೂ ನನ್ನ ಮಕ್ಕಳಿಗೂ ಬದುಕಲು ತೊಂದರೆಯಾಗಬಾರದು. ಹೀಗಾಗಿ ಪತ್ನಿ ದುಬೈನಲ್ಲಿ ಯಾವ ಸಂಘಟನೆಯೊಂದಿಗೆ ಇದ್ದಾಳೆ, ಲಕ್ಷದ್ವೀಪದಿಂದ ಕರೆ ಮಾಡುವವರು ಯಾರು ಎಂಬುದರ ಬಗ್ಗೆ ತನಿಖೆಯಾಗಬೇಕೆಂದು ಚಿದಾನಂದ ಅವರು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com