ಸಾರಿಗೆ ನಿಗಮಗಳ ಲಾಭದಾಯಕವಾಗಿಸಲು ತಜ್ಞರ ಸಮಿತಿ ನೇಮಕ: ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರಿ ಸ್ವಾಮ್ಯದ 4 ಸಾರಿಗೆ ನಿಗಮವನ್ನು ಲಾಭದಾಯಕವಾಗಿಸಲು ಕೈಗೊಳ್ಳಬೇಕಾದ ಸುಧಾಕರಣ ಕ್ರಮಗಳ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ 4 ಸಾರಿಗೆ ನಿಗಮವನ್ನು ಲಾಭದಾಯಕವಾಗಿಸಲು ಕೈಗೊಳ್ಳಬೇಕಾದ ಸುಧಾಕರಣ ಕ್ರಮಗಳ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) 60ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ 4 ಸಾರಿಗೆ ನಿಗಮಗಳ 60 ಮಂದಿ ಚಾಲಕರಿಗೆ ಅಪಘಾತ ರಹಿತ ಚಾಲನೆಗಾಗಿ ಮುಖ್ಯಮಂತ್ರಿಯವರ ಚಿನ್ನದ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

ಬಸ್‌ಗಳು ನಮ್ಮ ಟೂರಿಸಂ ಸಂಕೇತ. ಬೆಂಗಳೂರಿಗೆ ಕಳಶ ಪ್ರಾಯ. ಹಳ್ಳಿಗೆ ಹೋಗುವ ಕೆಎಸ್​​​ಆರ್​​​​ಟಿಸಿ ಕೂಡ ಮುಖ್ಯ. ನಿರಂತರ ಸೇವೆ ನೀಡುವ ಈ ವೃತ್ತಿಗೆ ಉತ್ತಮ ಹೆಸರಿದೆ. ನಿಗಮಗಳೆಲ್ಲವೂ ದೇಶಕ್ಕೆ ಮಾಡೆಲ್ ಆಗಿವೆ. ಆದಾಯ ವಿಚಾರದಲ್ಲಿ ಸಾರಿಗೆ ಇಲಾಖೆ ಹಿಂದೆ ಉಳಿದಿದೆ. ಈ ಕುರಿತಂತೆ ಅನೇಕ ನೌಕರರು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಸಾರಿಗೆ ಸಂಸ್ಥೆಗೆ ಯಾವ ರೀತಿ ಆದಾಯ ತರಬೇಕು ಎಂಬುದರ ಕುರಿತಂತೆ ಚಿಂತನೆ ನಡೆಸಲಾಗುತ್ತಿದೆ. ಹಲವು ತಜ್ಞರ ಜೊತೆ ಚರ್ಚೆ ಆರಂಭಿಸಿದ್ದೇನೆ. ಶೀಘ್ರದಲ್ಲೇ ತಜ್ಞರ ಸಮಿತಿ ರಚನೆ ಮಾಡುತ್ತೇನೆ.‌ ಯಾವ ರೀತಿ ಲಾಭ ಮಾಡಬಹುದು. ಬಂಡವಾಳ ಹೂಡುವುದರಿಂದ ಹಿಡಿದು ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ನಾಲ್ಕೈದು ತಿಂಗಳಲ್ಲಿ ವರದಿ ತರಿಸಲಾಗುವುದು. ಕೆಎಸ್​​​​ಆರ್​​​​​ಟಿಸಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. 

ನಮ್ಮ ಕೆಎಸ್​ಆರ್​ಟಿಸಿ 60 ವರ್ಷ ಸಂಭ್ರಮ ಆಚರಿಸುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ 50 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಕೆಎಸ್​ಆರ್​ಟಿಸಿ ಉದ್ಯೋಗಿಗಳ ಮಕ್ಕಳ ಕಲಿಕೆಗಾಗಿ ಇನ್ಫೋಸಿಸ್ ಕಂಪನಿಯೊಂದಿಗೆ ಡಿಜಿಟಲ್​ ಲರ್ನಿಂಗ್​ ಆ್ಯಪ್​​ ಒಡಂಬಡಿಕೆ ಮಾಡಿರುವುದು, ಕುಂದುಕೊರತೆ ಆಲಿಸೋ ವೆಬ್‌ಸೈಟ್ ಬಿಡುಗಡೆ ಮಾಡಿರುವುದು ಅತ್ಯಂತ ಅರ್ಥಪೂರ್ಣ ಎಂದರು.

ಎಲ್ಲಾ ಚಾಲಕರು ಒಂದು ರೀತಿಯಲ್ಲಿ ಬ್ರಹ್ಮರು. ನಮ್ಮ ಜೀವವನ್ನು ಅವರ ಕೈಯಲ್ಲಿ ಕೊಟ್ಟಿರುತ್ತೇವೆ. ನಮ್ಮನ್ನು ಸುರಕ್ಷಿತವಾಗಿ ನಮ್ಮ ಸ್ಥಳಗಳಿಗೆ ತಲುಪಿಸುತ್ತಾರೆ. ಸರ್ಕಾರ ಕಾಲ ಕಾಲಕ್ಕೆ ನಿಮ್ಮ ಬೆನ್ನಿಗೆ ನಿಂತಿದೆ. ಅದನ್ನು ನೌಕರರು ಮರೆಯಬಾರದು. ನಮ್ಮ ನಾಯಕರಾದ ಯಡಿಯೂರಪ್ಪನವರು 2,300 ಕೋಟಿ ರೂ. ಅನುದಾನ ನೀಡಿದ್ದಾರೆ. ನಾನು ಮುಖ್ಯಮಂತ್ರಿಯಾದ ಬಳಿಕವೂ ರೂ.108 ಕೋಟಿ ಬಿಡುಗಡೆ ಮಾಡಲಾಗಿದೆ. 

ಮುಂದಿನ ದಿನಗಳಲ್ಲಿ ನಿಗಮದ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಕಾರ್ಯ ವಿಧಾನಗಳಲ್ಲಿ ಬದಲಾವಣೆ ಅಗತ್ಯವಿದೆ. ಜೊತೆಗೆ ಕ್ಷಣತೆಯಿಂದ ನಿಗಮವನ್ನು ಮುನ್ನಡೆಸಲು ಸರ್ಕಾರ ಬದ್ಧವಾಗಿದೆ. ವಿಶ್ವದಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಎಷಅಟೇ ಬದಲಾವಣೆಗಳಾದರೂ, ಬಸ್ ಸೇವೆ ನಿರಂತರವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಹಳ್ಳಿಗಳಲ್ಲಿ ಬಸ್ ಬಂದರೆ ಚಟುವಟಿಕೆಗಳು ಆರಂಭವಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ನಿಗಮ ತನ್ನದೇ ಆದ ಗೌರವವನ್ನು ಹೊಂದಿದೆ. ಬದಲಾಗುತ್ತಿರುವ ತಂತ್ರಜ್ಞಾನಗಳೊಂದಿಗೆ ಹೊಂದಿಕೊಳ್ಳುವ ಜೊತೆಗೆ ಪರಿಸರ ಸ್ನೇಹಿ ವಾಹನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಎಂಟಿಸಿಯು 90 ವಿದ್ಯುತ್ ಚಾಲಿತ ಬಸ್ ಗಳನ್ನು ಖರೀದಿಸುತ್ತಿದೆ. ಅಂತೆಯೇ ಕೆಎಸ್ಆರ್'ಟಿಸಿಯು 642 ಹೊಸ ಬಸ್ ಗಳನ್ನು ಖರೀದಿಸುತ್ತಿದೆ ಎಂದು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com