ಪರಿಸರ ನಷ್ಟವನ್ನು ತುಂಬಲು ಪ್ರತಿ ವರ್ಷ ಪರಿಸರ ಆಯವ್ಯಯ: ಮುಖ್ಯಮಂತ್ರಿಗಳ ಘೋಷಣೆ 

ರಾಜ್ಯದಲ್ಲಿನ ಪರಿಸರ ಹಾನಿಯನ್ನು ತುಂಬಲು ಪರಿಸರ  ಆಯವ್ಯಯವನ್ನು ಪ್ರಾರಂಭಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.  
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ

ಬೆಂಗಳೂರು: ರಾಜ್ಯದಲ್ಲಿನ ಪರಿಸರ ಹಾನಿಯನ್ನು ತುಂಬಲು ಪರಿಸರ  ಆಯವ್ಯಯವನ್ನು ಪ್ರಾರಂಭಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.  

ಅವರು ಇಂದು ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದರು. 

ಪ್ರತಿ ವರ್ಷ ರಾಜ್ಯದಲ್ಲಿ ನಾಶವಾಗಿರುವ  ಒಟ್ಟು ಹಸಿರು ಪ್ರದೇಶ ಎಷ್ಟು ಎಂಬುದನ್ನು ಅಂದಾಜಿಸುವ ವಿಧಾನ ಪ್ರಾರಂಭಿಸಬೇಕು. ಆಗ ಹಸಿರಿನ ಕೊರತೆ ಎಷ್ಟು ಎಂದೂ ಸಹ ಗೊತ್ತಾಗುತ್ತದೆ.  ಪರಿಸರ ಆಯವ್ಯಯವನ್ನು ಪ್ರಾರಂಭಿಸಿದಾಗ ಮಾತ್ರ ಈ ನಷ್ಟವನ್ನು ತುಂಬಿಸಿಕೊಳ್ಳಬಹುದು ಎಂದು  ಮುಖ್ಯಮಂತ್ರಿಗಳು ಹೇಳಿದರು.

ಅರಣ್ಯ ನಮಗಿಂತ ಮೊದಲು ಅಸ್ತಿತ್ವದಲ್ಲಿದ್ದ ನೈಸರ್ಗಿಕ ಸಂಪತ್ತು. ಅರಣ್ಯ ನಮ್ಮ ಪೂರ್ವಿಕರು ಎಂಬ ಅಭಿಪ್ರಾಯ ನಮ್ಮಲ್ಲಿದೆ. ಪೂರ್ವಿಕರಿಗೆ ಭಕ್ತಿಭಾವದಿಂದ ನಮನ ಸಲ್ಲಿಸುವಂತೆಯೇ ಗಿಡಮರಗಳನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಅರಣ್ಯವಿಲ್ಲದೇ ಮನುಷ್ಯನ ಅಸ್ತಿತ್ವವಿರುತ್ತಿರಲಿಲ್ಲ. ಕಾಡಿಗೆ ನಾವು ಸದಾ ಋಣಿಯಾಗಿರಬೇಕು ಎಂದು ಬೊಮ್ಮಾಯಿ‌ ಹೇಳಿದರು.

ಮನುಷ್ಯನ ಮೂಲ ಪ್ರಾರಂಭವಾಗಿದ್ದು ಅರಣ್ಯದಲ್ಲಿ.ಈಗ  ನಾಗರಿಕತೆ ಬೆಳಿಸಿಕೊಂಡಿದ್ದೇವೆ. ಅರಣ್ಯ ನಾಶಕ್ಕೆ ನಾವು ಎಡೆ ಮಾಡಿಕೊಟ್ಟಿದ್ದೇವೆ. ನೈಸರ್ಗಿಕ ಸಂಪತ್ತಿನ ವಿಚಾರದಲ್ಲಿ ನಮಗೆ ಇರುವ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಕಾಡಿಲ್ಲದೇ ಮಳೆ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮನುಷ್ಯನ ಅತಿಯಾಸೆಯಿಂದ  ನಿಸರ್ಗ ನಾಶವಾಗುತ್ತಿದೆ. 2000 ವರ್ಷಗಳಲ್ಲಿ ನಾಶವಾಗುವಷ್ಟು ಅರಣ್ಯವನ್ನು  ಕೇವಲ 20 ವರ್ಷಗಳಲ್ಲಿ ನಾಶ ಮಾಡಿದ್ದೇವೆ. ಪರಿಸರ ಹಾನಿಯ ವೇಗ ಅಷ್ಟು  ತೀವ್ರಗೊಂಡಿದೆ. ಇದು ನಿಜಕ್ಕೂ ಭಯಾನಕವಾದ ಸಂಗತಿ  ಎಂದರು. 
 
ಮುಂದಿನ ಜನಾಂಗಕ್ಕಾಗಿ ಅರಣ್ಯ ಸಂರಕ್ಷಿಸುವ  ಅಗತ್ಯ ಮತ್ತು ಅನಿವಾರ್ಯತೆ ಇದೆ. ಅವಶ್ಯಕತೆಗಿಂತ ಹೆಚ್ಚು ನಿಸರ್ಗವನ್ನು ನಾಶಪಡಿಸಿದರೆ, ಭವಿಷ್ಯದಿಂದ ಕಳ್ಳತನ ಮಾಡಿದಂತೆ. ನಮ್ಮ ಹಿರಿಯರು ಇದನ್ನು ಉಳಿಸಿದ್ದರಿಂದ ಈ ಸಂಪತ್ತನ್ನು ನಾವು ಅನುಭವಿಸುತ್ತಿದ್ದೇವೆ. ಮುಂದಿನ ಜನಾಂಗದ ಪಾಲನ್ನು ನಾವೇ ಬಳಕೆ ಮಾಡಬಾರದು ಎಂಬ ಅರಿವಿನಿಂದ ಇಲಾಖೆ ಕೆಲಸ ಮಾಡಬೇಕು. ಆಗ ಮಾತ್ರ ಹುತಾತ್ಮರ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು. 

ಅರಣ್ಯ ಸಂರಕ್ಷಣೆಯ ಸಲುವಾಗಿ ಅನೇಕರು ಹುತಾತ್ಮರಾಗಿದ್ದಾರೆ. ರಾಜ್ಯದ 43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯವಿದೆ. ಪ್ರಸ್ತುತ  ಶೇ 21.5%  ರಷ್ಟು ಅರಣ್ಯದ ಕೊರತೆ ಇದೆ. ಕಾಡುಗಳ್ಳರನ್ನು ನಿಯಂತ್ರಿಸಿ, ಕಾಡು, ಉಳಿಸಿ ಬೆಳೆಸುವ ಕ್ರಮಗಳನ್ನು ಕೈಗೊಳ್ಳಬೇಕು. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡಬೇಕು. ಗಡಿಗಳಲ್ಲಿ ನಾಗರಿಕರೂ ಸಹ ಪ್ರಾಣ ತೆತ್ತಿದ್ದಾರೆ.ಅವರ ಪ್ರಾಣ ಉಳಿಸುವುದೂ ಮುಖ್ಯ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಇಲಾಖೆಯ ಕಾರ್ಯಚಟುವಟಿಕೆ ವಿಸ್ತರಿಸಲಿ. ದಕ್ಷತೆಯಿಂದ ಕಾಡನ್ನು ಉಳಿಸುವ ಕೆಲಸವಾಗಲಿ. ಕರ್ತವ್ಯದಲ್ಲಿರುವವರ ಪ್ರಾಣ ಸಂರಕ್ಷಣೆಗೆ ಅಗತ್ಯ ಪರಿಕರಗಳನ್ನು ಒದಗಿಸಬೇಕೆಂದರು ಮುಖ್ಯಮಂತ್ರಿಗಳು ತಿಳಿಸಿದರು.

ಅರಣ್ಯ ಇಲಾಖೆ ಅಪರ ಮುಖ್ಯ  ಕಾರ್ಯದರ್ಶಿ ಜಾವೇದ್ ಅಖ್ತರ್ ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com