ಅಕ್ಟೋಬರ್-ನವೆಂಬರ್ ನಲ್ಲಿ ಕೋವಿಡ್-19 ಮೂರನೇ  ಅಲೆ: ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ

ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್ ವೇಳೆಗೆ ಮೂರನೇ ಅಲೆ ಎದುರಾಗಬಹುದು ಎಂದು ಕೋವಿಡ್-19 ತಡೆಗೆ ಕ್ರಮ ಕೈಗೊಳ್ಳಲು ರಚಿಸಲಾಗಿರುವ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ.
ಕೋವಿಡ್-19 ಸೋಂಕು ತಡೆಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯುವಕರು
ಕೋವಿಡ್-19 ಸೋಂಕು ತಡೆಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯುವಕರು

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್ ವೇಳೆಗೆ ಮೂರನೇ ಅಲೆ ಎದುರಾಗಬಹುದು ಎಂದು ಕೋವಿಡ್-19 ತಡೆಗೆ ಕ್ರಮ ಕೈಗೊಳ್ಳಲು ರಚಿಸಲಾಗಿರುವ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ.

ಹಬ್ಬಗಳ ಸಾಲುಗಳು ಈ ತಿಂಗಳಲ್ಲಿ ಬರುವುದರಿಂದ ಇತ್ತೀಚೆಗೆ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಠಿಣವಾಗಿ ಜಾರಿಗೊಳಿಸಿ ಪಾಲಿಸಬೇಕೆಂದು ಟಿಎಸಿ ಹೇಳಿದೆ.

"ಒಂದು ವೇಳೆ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದಲ್ಲಿ ಅವ್ಯವಸ್ಥೆ ಉಂಟಾಗಲಿದೆ. ಈ ಹಂತದಲ್ಲಿ ಮಾರ್ಗಸೂಚಿಗಳನ್ನು ಪಾಲಿಸುವುದು ಬಹಳ ಮುಖ್ಯ. ರಾಜ್ಯದಲ್ಲಿ ಈಗ ಕೋವಿಡ್-19 ಸೋಂಕು ಪ್ರಸರಣ ಸಂಖ್ಯೆ ಇಳಿಮುಖವಾಗಿದೆ. ಆದರೆ  ರಾಜಕೀಯ ರ್ಯಾಲಿಗಳು, ಹಬ್ಬದ ಸಂಭ್ರಮದಲ್ಲಿ ಮೈಮರೆತು ನಿರ್ಲಕ್ಷ್ಯ ವಹಿಸಿದರೆ, ಮೂರನೇ ಅಲೆಯ ಪರಿಣಾಮ ತೀವ್ರವಾಗಿರಲಿದೆ" ಎಂದು ಸಮಿತಿಯಲ್ಲಿರುವ ತಜ್ಞರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಹಬ್ಬಗಳ ದಿನಗಳಲ್ಲಿ ಹೆಚ್ಚಿನ ಜನರು ಸೇರುವುದನ್ನು ತಡೆಗಟ್ಟುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು 
ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿರುವುದನ್ನೂ ಟಿಎಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ರಾಜ್ಯದಲ್ಲಿ ಒಟ್ಟು ಸಕ್ರಿಯ ಕೇಸ್ ಲೋಡ್ 16,000 ಇದ್ದು ಟಿಪಿಆರ್ ಶೇ.0.68 ರಷ್ಟಿದೆ. ಸೆ.03 ವರೆಗೆ ಸಿಎಫ್ ಆರ್ 1.55% ಇದೆ. ಈಗಿನ ಪರಿಸ್ಥಿತಿಯಲ್ಲಿ ದಿನವೊಂದಕ್ಕೆ 1,200 ರಿಂದ 1,500 ಪ್ರಕರಣಗಳು ವರದಿಯಾಗುವ ಮೂಲಕ ರಾಜ್ಯದಲ್ಲಿ ಎರಡನೇ ಅಲೆ ಕಡಿಮೆ ಪ್ರಮಾಣದಲ್ಲಿದೆ. ಹೆಚ್ಚಿನ ಚಟುವಟಿಕೆಗಳು, ಹಲವು ಗಂಟೆಗಳು ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶಗಳು, ಕೋವಿಡ್-19 ಸೋಂಕು ಹರಡುವುದಕ್ಕೆ ಸೂಕ್ತವಾದ ವಾತಾವರಣವಾಗಿದೆ.

ಮಾರ್ಚ್ 2021 ರಿಂದ ಈವರೆಗೂ ಎರಡನೇ ಅಲೆಯ ತೀವ್ರತೆಯನ್ನು ನಿಯಂತ್ರಿಸುವುದಕ್ಕೆ ವಿನಿಯೋಗಿಸಿರುವ ಶ್ರಮ ವ್ಯರ್ಥವಾಗಬಾರದು ಎಂದೂ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ.

"ಸೆಪ್ಟೆಂಬರ್ ತಿಂಗಳಲ್ಲಿ ಹಲವು ಪ್ರದೇಶಗಳಲ್ಲಿ ಮಳೆ, ಚಳಿ ಹೆಚ್ಚಾಗಿರುವುದರಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಉಲ್ಬಣಗೊಳ್ಳುವ ಕಾಲವಾಗಿದೆ. ಇನ್ನು ಡೆಲ್ಟಾ ರೂಪಾಂತರಿ ವೈರಾಣು ಲಸಿಕೆ ಪಡೆದವರಿಗೂ ತೀವ್ರವಾದ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಕಳೆದ ಒಂದು ತಿಂಗಳಲ್ಲಿ ಮಂಗಳೂರು, ಬೆಂಗಳೂರು, ಕೋಲಾರ, ಮೈಸೂರಿನ ಅಪಾರ್ಟ್ ಮೆಂಟ್ ಗಳು, ನರ್ಸಿಂಗ್ ಹಾಸ್ಟೆಲ್ ಗಳ ಕ್ಲಸ್ಟರ್ ಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿ ವರದಿಯಾಗುತ್ತಿದ್ದು ಇದೇ ಪರಿಸ್ಥಿತಿ ಮಾರ್ಚ್-ಏಪ್ರಿಲ್ 2021 ರಲ್ಲಿತ್ತು ತತ್ಪರಿಣಾಮ ಎರಡನೇ ಅಲೆ ತೀವ್ರವಾಯಿತು" ಎಂದು ಟಿಎಸಿ ತನ್ನ ವರದಿಯಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com