ಅಂಧ ವಿದ್ಯಾರ್ಥಿಗಳಿಗೆ 15 ದಿನದಲ್ಲಿ ಪಠ್ಯಪುಸ್ತಕ ವಿತರಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಾಜ್ಯದ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ ಪಠ್ಯ ಪುಸ್ತಕವನ್ನು 15 ದಿನಗಳಲ್ಲಿ ವಿತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ರಾಜ್ಯದ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ ಪಠ್ಯ ಪುಸ್ತಕವನ್ನು 15 ದಿನಗಳಲ್ಲಿ ವಿತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. 

ಪ್ರಸಕ್ತ ಸಾಲಿನಿಂದ ಪಠ್ಯ ಪುಸ್ತಕ ವಿತರಿಸಲಾಗುವುದು ಎಂದು ಹಿಂದಿನ ವರ್ಷ ಸರ್ಕಾರ ನೀಡಿದ್ದ ಭರವಸೆ ಗಮನಿಸಿದ ಪೀಠ, ಈ ಆದೇಶ ನೀಡಿದೆ.

ಈ ಕುರಿತು ರಾಷ್ಟ್ರೀಯ ಅಂಧರ ಒಕ್ಕೂಟ (ಎನ್‌ಎಫ್‌ಬಿ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಈ ಆದೇಶವನ್ನು ನೀಡಿದೆ. 

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಎನ್‌ಎಫ್‌ಬಿಯು, ಅಂಧ ವಿದ್ಯಾರ್ಥಿಗಳಿಗೆ ಉಚಿತವಾಗಿ ಸರಕಾರ ಪಠ್ಯ ಪುಸ್ತಕ ವಿತರಿಸಬೇಕು. ಪುಸ್ತಕ ಮತ್ತು ಇತರ ಕಲಿಕಾ ಸಾಮಗ್ರಿಗಳು ಬ್ರೈಲ್ ಲಿಪಿಯಲ್ಲಿ ಇರಬೇಕು’ ಎಂದು ಮನವಿ ಮಾಡಿಕೊಂಡಿತ್ತು. ಅಲ್ಲದೆ, ಈ ಸಂಬಂಧ 2016ರ ನ.29ರಂದು ಕೇಂದ್ರ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ಒಕ್ಕೂಟ ಉಲ್ಲೇಖಿಸಿತ್ತು. 

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ‘ಪುಸ್ತಕ ವಿತರಣೆ ಮಾಡಿ ಅನುಸರಣಾ ವರದಿಯನ್ನು 2 ವಾರಗಳಲ್ಲಿ ಸಲ್ಲಿಸಬೇಕು’ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಅ.7ಕ್ಕೆ ಮುಂದೂಡಿತು.

ಈ ವೇಳೆ ಅಂಧ ಮಕ್ಕಳ ಅನುಕೂಲಕ್ಕಾಗಿ 107 ಪುಸ್ತಕಗಳನ್ನು ಈಗಾಗಲೇ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಸರ್ಕಾರ ವಿವರ ಸಲ್ಲಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com