ಅನಧಿಕೃತ ದೇವಾಲಯಗಳ ಸಕ್ರಮಕ್ಕೆ ಖಾಸಗಿ ವಿಧೇಯಕ ಮಂಡಿಸುತ್ತೇನೆ: ಶಾಸಕ ಎಸ್‌.ಎ.ರಾಮದಾಸ್‌

ರಾಜ್ಯದಲ್ಲಿರುವ ಅನಧಿಕೃತ ದೇವಾಲಯಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಸೆ.23ರಂದು ವಿಧಾನಸಭೆಯ ಅಧಿವೇಶನದಲ್ಲಿ ‘ಕರ್ನಾಟಕ ರಾಜ್ಯದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಹಿಂದೂ ದೇವಾಲಯಗಳ ಕ್ರಮಬದ್ಧಗೊಳಿಸುವಿಕೆಯ ಕಾಯ್ದೆ–2021’ ಎಂಬ ಖಾಸಗಿ ವಿಧೇಯಕವನ್ನು ಮಂಡಿಸಲಿದ್ದೇನೆ ಎಂದು ಶಾಸಕ ಎಸ್‌.ಎ.ರಾಮದಾಸ್‌ ಅವರು ಶನಿವಾರ ಹೇಳಿದ್ದಾರೆ.
ಶಾಸಕ ಎಸ್‌.ಎ.ರಾಮದಾಸ್‌
ಶಾಸಕ ಎಸ್‌.ಎ.ರಾಮದಾಸ್‌

ಮೈಸೂರು: ರಾಜ್ಯದಲ್ಲಿರುವ ಅನಧಿಕೃತ ದೇವಾಲಯಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಸೆ.23ರಂದು ವಿಧಾನಸಭೆಯ ಅಧಿವೇಶನದಲ್ಲಿ ‘ಕರ್ನಾಟಕ ರಾಜ್ಯದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಹಿಂದೂ ದೇವಾಲಯಗಳ ಕ್ರಮಬದ್ಧಗೊಳಿಸುವಿಕೆಯ ಕಾಯ್ದೆ–2021’ ಎಂಬ ಖಾಸಗಿ ವಿಧೇಯಕವನ್ನು ಮಂಡಿಸಲಿದ್ದೇನೆ ಎಂದು ಶಾಸಕ ಎಸ್‌.ಎ.ರಾಮದಾಸ್‌ ಅವರು ಶನಿವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2,818 ಅನಧಿಕೃತ ದೇವಸ್ಥಾನಗಳಿವೆ. ಈ ಪೈಕಿ ರಸ್ತೆ ಮಧ್ಯೆ ಇರುವ, ಓಡಾಟಕ್ಕೆ ಸಮಸ್ಯೆಯಾಗಿರುವ ದೇವಸ್ಥಾನಗಳನ್ನು ಬಿಟ್ಟು ಉಳಿದವುಗಳನ್ನು ಸಕ್ರಮಗೊಳಿಸಬೇಕು ಎಂಬ ಒತ್ತಾಸೆಯಿಂದಾಗಿ ಖಾಸಗಿ ವಿಧೇಯಕವನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಹಾಗೂ ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದ್ದೇನೆ. ಇದರಿಂದ 2009ರ ನಂತರ ನಿರ್ಮಾಣಗೊಂಡ ಅನಧಿಕೃತ ದೇವಸ್ಥಾನಗಳನ್ನು ಕ್ರಮಬದ್ಧಗೊಳಿಸಲು ಕಾನೂನಾತ್ಮಕ ಬಲ ಸಿಗಲಿದೆ. ಈ ವಿಧೇಯಕದಲ್ಲಿ 10 ವಿಭಾಗಗಳಿವೆ. ಸಕ್ಷಮ ಪ್ರಾಧಿಕಾರ ರಚನೆ, ಅದರ ಅಧಿಕಾರ ವ್ಯಾಪ್ತಿ, ಕ್ರಮಬದ್ಧಗೊಳಿಸುವಿಕೆ, ಭವಿಷ್ಯದಲ್ಲಿ ಅನಧಿಕೃತವಾಗಿ ದೇವಸ್ಥಾನ ನಿರ್ಮಿಸುವವರ ವಿರುದ್ಧ ಕ್ರಮಕೈಗೊಳ್ಳುವುದು ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. 

ಈ ವಿಧೇಯಕ ಜಾರಿಗೊಳಿಸಲು ಸಹಕರಿಸುವಂತೆ ಕೋರಿ ಸೆ.20ರಂದು ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಅವರಿಗೂ ಪತ್ರ ಬರೆದು ಮನವಿ ಸಲ್ಲಿಸುತ್ತೇನೆ. ಸುಪ್ರೀಂಕೋರ್ಟ್‌ ನೀಡಿರುವ ತಾತ್ಕಾಲಿಕ ಆದೇಶವನ್ನು ಪಾಲಿಸುತ್ತಲೇ ದೇವಸ್ಥಾನಗಳನ್ನು ಸಕ್ರಮಗೊಳಿಸಲು ಅವಕಾಶವಿತ್ತು. 

ಕೆಲ ರಾಜ್ಯಗಳು ಈಗಾಗಲೇ ಕಾಯ್ದೆಗಳನ್ನು ರೂಪಿಸಿದ್ದರೆ, ಮತ್ತೆ ಕೆಲ ರಾಜ್ಯಗಳು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿವೆ. ಅದೇ ರೀತಿ, ಕರ್ನಾಟಕ ಸರ್ಕಾರವು ಕಾಯ್ದೆ ಅಥವಾ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಬೇಕಿತ್ತು. ಈಗ ಮಂಡಿಸಲಿರುವ ಖಾಸಗಿ ವಿಧೇಯಕವನ್ನು ಚರ್ಚಿಸಿ, ಕಾಯ್ದೆ ರೂಪದಲ್ಲಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. 

‘ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನವನ್ನು 2009ಕ್ಕಿಂತ ಹಿಂದೆ ನಿರ್ಮಾಣಗೊಂಡಿದ್ದು, ಇದನ್ನು ನೆಲಸಮಗೊಳಿಸಬಾರದಿತ್ತು. ಮೈಸೂರು ನಗರದಲ್ಲಿ 214 ಅನಧಿಕೃತ ಮಂದಿರ, ಚರ್ಚ್‌, ಮಸೀದಿಗಳಿವೆ. ಜಿಲ್ಲೆಯಲ್ಲಿರುವ ಅನಧಿಕೃತ ದೇವಸ್ಥಾನಗಳ ಪಟ್ಟಿಯನ್ನೂ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಸಿದ್ಧಪಡಿಸಿದ್ದರು. ಆ ಕಡತ ನಾಪತ್ತೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ದೇವಾಲಯ ತೆರವು ವಿಚಾರ ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಇದನ್ನೇ ಬಂಡವಾಳ ಮಾಡಿಕೊಂಡು ಹೊಸ ರಾಜಕೀಯ ದಾಳ ಉರುಳಿಸುತ್ತಿದೆ. ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೂ ಬಿಜೆಪಿ ಗುರಿಯಾಗಿದೆ. ಹೀಗಿರುವಾಗಲೇ ಹೊಸ ಮಸೂದೆ ಮಂಡನೆ ಆಗುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com