ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಕೋದಂಡರಾಮಪುರ ಪ್ರೌಢಶಾಲೆಗೆ ಮಗನ ದಾಖಲಾತಿಗೆ ಆಗಮಿಸಿದ ಮಹಿಳೆಯೊಂದಿಗಿನ ದುರ್ವರ್ತನೆ ತೋರಿದ ಪ್ರಭಾರ ಮುಖ್ಯೋಪಾಧ್ಯಾಯ ಲೋಕೇಶಪ್ಪ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಸರ್ಕಾರಿ ಕಟ್ಟಡವನ್ನು ತಮ್ಮ ಖಾಸಗಿ ಕೆಲಸಕ್ಕೆ ಬಳಸಿಕೊಂಡಿರುವುದು ಹಾಗೂ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕರ್ನಾಟಕ ನಾಗರೀಕ ನಿಯಮಾವಳಿಗಳನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಪಡಿಸಲಾಗಿದೆ.
ಘಟನೆ ಸಂಬಂಧ ಇಲಾಖಾ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಆದರೆ, 1958ರ ಕೆ.ಸಿ.ಎಸ್.ಆರ್ ನಿಯಮ 98 ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅವರು ಅರ್ಹರಿರುತ್ತಾರೆ.
ಕೋದಂಡರಾಮಪುರ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಮಗುವಿನ ದಾಖಲಾತಿಗೆಂದು ಮಹಿಳೆಯೊಬ್ಬರು ಶಾಲೆಗೆ ಬಂದಿರುತ್ತಾರೆ. ಈ ವೇಳೆ ಮಹಿಳೆಯಿಂದ ತಾವು ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯ ಕಟ್ಟಡದಲ್ಲಿ ಮಸಾಜ್ ಮಾಡಿಸಿಕೊಂಡಿರುವ ಸಂಬಂಧ ದೃಶ್ಯಾವಳಿಗಳು ಸಾರ್ವಜನಿಕ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸಂಬಂಧ ವಿಚಾರಣೆ ವೇಳೆ ಲೋಕೇಶಪ್ಪ, ಮಸಾಜ್ ಮಾಡಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.
Advertisement