ಅ.1 ರಿಂದ ಚಿತ್ರಮಂದಿರ, ಅ.3 ರಿಂದ ಶಾಲಾ ಕಾಲೇಜು ಮತ್ತು ಪಬ್ ಗಳಿಗೆ ಶೇಖಡ 100ರಷ್ಟು ಹಾಜರಾತಿಗೆ ಸರ್ಕಾರ ಒಪ್ಪಿಗೆ

ಅಕ್ಟೋಬರ್ 1 ರಿಂದ ಚಿತ್ರಮಂದಿರ. ಅಕ್ಟೋಬರ್ 3 ರಿಂದ ಶಾಲಾ-ಕಾಲೇಜು ಸೇರಿ ಪಬ್ ಗಳಿಗೂ ಶೇಕಡ ನೂರರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿ ಕೆಲವು ನಿಯಮಗಳನ್ನು ಸೂಚಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಅಕ್ಟೋಬರ್ 1 ರಿಂದ ಚಿತ್ರಮಂದಿರ. ಅಕ್ಟೋಬರ್ 3 ರಿಂದ ಶಾಲಾ-ಕಾಲೇಜು ಸೇರಿ ಪಬ್ ಗಳಿಗೂ ಶೇಕಡ ನೂರರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿ ಕೆಲವು ನಿಯಮಗಳನ್ನು ಸೂಚಿಸಿದೆ.

ಶೇ.1 ಕ್ಕಿಂತ ಕಡಿಮೆ ಕೋವಿಡ್ ಪ್ರಕರಣವಿರುವ ಭಾಗಗಳಲ್ಲಿ ಮಾತ್ರ ಶೇ.100 ರಷ್ಟು ಚಿತ್ರಮಂದಿರ ತುಂಬಲು ಅವಕಾಶ ಕಲ್ಪಿಸಿದ್ದು, ಶೇ.1 ಕ್ಕಿಂತ ಪ್ರಕರಣ ಹೆಚ್ಚಿರುವ ಕಡೆ ಶೇ.50 ಹಾಗೂ ಶೇ.2 ಕ್ಕಿಂತ ಕೋವಿಡ್ ಪ್ರಕರಣ ಹೆಚ್ಚಿರುವ ಭಾಗಗಳಲ್ಲಿ ಚಿತ್ರಮಂದಿರ ಬಂದ್ ಮಾಡುವುದಾಗಿಯೂ ಹಾಗೂಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವವರು ಕೋವಿಡ್ ಮೊದಲನೇ ಲಸಿಕೆಯನ್ನಾದರೂ ಕಡ್ಡಾಯವಾಗಿ ಪಡೆದಿರಬೇಕೆಂದು ಷರತ್ತು ವಿಧಿಸಿದೆ.ಗರ್ಭಿಣಿ ಹಾಗೂ ಮಕ್ಕಳಿಗೆ ಚಿತ್ರಮಂದಿರದಲ್ಲಿ ಅವಕಾಶ ನೀಡದಿರಲು ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿನ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಉನ್ನತ ಮಟ್ಟದ ತಜ್ಞರ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಕೋವಿಡ್ ಪ್ರಕರಣಗಳು ಶೇ.0.66 ಬಗ್ಗೆ ಸಂಬಂಧಿಸಿದವರಿಂದ ಸಿಎಂ ಮಾಹಿತಿ ಪಡೆದರು.ರಾತ್ರಿ ಕರ್ಫ್ಯೂವನ್ನು ರಾತ್ರಿ 1- ರಿಂದ ಬೆಳಿಗ್ಗೆ 5ರವರೆಗೆ ನಿಗದಿ ಪಡಿಸಿ, 6-12 ನೇ ತರಗತಿವರೆಗೆ ಶೇ.100 ರಷ್ಟು ಹಾಜರಾತಿಯಂತೆ ವಾರದಲ್ಲಿ 5 ದಿನ ಶಾಲಾ ಕಾಲೇಜು ನಡೆಸಲು ತೀರ್ಮಾನಿಸಲಾಯಿತು.

ದಸರಾ ಬಗ್ಗೆ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು, ಗಡಿಭಾಗಗಳಲ್ಲಿ ಹೆಚ್ಚು ನಿಗಾ, ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಲಸಿಕಾ ಅಭಿಯಾನ ತೀವ್ರಗೊಳಿಸಲು ಜನರಲ್ಲಿ ಲಸಿಕೆ ಬಗ್ಗೆ ಹೆಚ್ಚು ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ಸೂಚಿಸಲಾಯಿತು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಅಕ್ಟೋಬರ್ 3 ರಿಂದ ಪಬ್ ಗಳಿಗೆ ಅನುಮತಿ ನೀಡಲು ಹಾಗೂ 1-5 ಶಾಲೆಗಳನ್ನು ಸದ್ಯಕ್ಕೆ ತೆರೆಯದಿರಲು ನಿರ್ಧರಿಸುವುದಾಗಿ ಹೇಳಿದರು.

ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ, ಕಂದಾಯ ಸಚಿವ ಆರ್ ಅಶೋಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com