ಬೆಳಗಾವಿ: ರವೀಂದ್ರ ಕೌಶಿಕ್ ಇ-ಗ್ರಂಥಾಲಯ ಜಗತ್ತಿಗೆ ಮಾದರಿ ಗ್ರಂಥಾಲಯ; ಶಾಸಕ ಅಭಯ್ ಪಾಟೀಲ ಬಣ್ಣನೆ

ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವ ದೃಷ್ಟಿಯಿಂದ ಮರೆತು ಹೋಗಿದ್ದ ದೇಶ ಪ್ರೇಮಿ ರವೀಂದ್ರ ಕೌಶಿಕ್ ಅವರ ಹೆಸರನ್ನು ಇ- ಗ್ರಂಥಾಲಯಕ್ಕೆ ನಾಮಕರಣ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದ್ದಾರೆ.
ರವೀಂದ್ರ ಕೌಶಿಕ್ ಗ್ರಂಥಾಲಯ
ರವೀಂದ್ರ ಕೌಶಿಕ್ ಗ್ರಂಥಾಲಯ

ಬೆಳಗಾವಿ: ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವ ದೃಷ್ಟಿಯಿಂದ ಮರೆತು ಹೋಗಿದ್ದ ದೇಶ ಪ್ರೇಮಿ ರವೀಂದ್ರ ಕೌಶಿಕ್ ಅವರ ಹೆಸರನ್ನು ಇ- ಗ್ರಂಥಾಲಯಕ್ಕೆ ನಾಮಕರಣ ಮಾಡಲಾಗಿದೆ ಎಂದು ಶಾಸಕ ಅಭಯ್ ಪಾಟೀಲ ಹೇಳಿದ್ದಾರೆ.

ನಗರದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ನಲ್ಲಿ ಶಿವಾಜಿ ಉದ್ಯಾನದ ಹತ್ತಿರವಿರುವ ರವೀಂದ್ರ ಕೌಶಿಕ್ ಇ-ಗ್ರಂಥಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶಕ್ಕಾಗಿ ಸುಮಾರು 26 ವರ್ಷ ತಮ್ಮ ಯೌವನವನ್ನು‌ ಮುಡಿಪಾಗಿಟ್ಟ ದೇಶಪ್ರೇಮಿ ರವೀಂದ್ರ ಕೌಶಿಕ್ ಅವರ ಹೆಸರನ್ನು ಇ-ಗ್ರಂಥಾಲಯಕ್ಕೆ ನಾಮಕರಣ ಮಾಡಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸೆ.26 ಉದ್ಘಾಟನೆಗೊಳ್ಳಲಿರುವ ಇ-ಗ್ರಂಥಾಲಯ ಕಾರ್ಯಕ್ರಮಕ್ಕೆ ರವೀಂದ್ರ ಕೌಶಿಕ್ ಅವರ ಕುಟುಂಬಸ್ಥರು ಆಗಮಿಸಲಿದ್ದು, ಅವರನ್ನು ಸನ್ಮಾನಿಸಲಾಗುವುದು ಎಂದು ಶಾಸಕರು ತಿಳಿಸಿದರು.

2.5 ರೂ.ಕೋಟಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದ್ದು, ಗ್ರಂಥಾಲಯದಲ್ಲಿ ಕನ್ನಡ, ‌ಇಂಗ್ಲೀಷ್, ಹಿಂದಿ, ಮರಾಠಿ ಹಾಗೂ ಉರ್ದು ಸೇರಿದಂತೆ ಒಟ್ಟು 5 ಭಾಷೆಗಳ ಡಿಜಿಟಲ್‌ ಗ್ರಂಥಾಲಯ ಇದಾಗಿದೆ. ಇದು ವಿಶ್ವಕ್ಕೆ ಮಾದರಿ ಗ್ರಂಥಾಲಯವಾಗಲಿದೆ ಎಂದು ಅವರು ತಿಳಿಸಿದರು.

ರವೀಂದ್ರ ಕೌಶಿಕ್ ಗ್ರಂಥಾಲಯವು ಇಬ್ಬರು ಸಿಬ್ಬಂದಿ ಸೇರಿ ಒಟ್ಟು 23 ಡೆಸ್ಕ್ ಟಾಪ್ ಕಂಪ್ಯೂಟರಗಳನ್ನು ಹೊಂದಿದ್ದು, ಮಕ್ಕಳಿಗಾಗಿ ಉಪಯೋಗಿಸಲು 5 ಯೋಗ್ಯವಾದ ಟ್ಯಾಬ್ಲೆಟ್ ಗಳನ್ನು ಹೊಂದಿದೆ. ಮುಂದೆ ಮಕ್ಕಳ ಆಸಕ್ತಿಯ ಮೇಲೆ ಟ್ಯಾಬ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಗ್ರಂಥಾಲಯದಲ್ಲಿ 5000 ಪುಸ್ತಕಗಳು ಲಭ್ಯವಿದ್ದು, ಒಂದು ಪುಸ್ತಕದ ಪ್ರತಿಯನ್ನು ಅನಿಯಮಿತ ಸಂಖ್ಯೆಯ ಬಳಕೆದಾರರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದರು.

ಬೆಳಗಾವಿ ಸ್ಮಾರ್ಟ್ ಸಿಟಿ E-Libray Application ಮೂಲಕ ಲೈಬ್ರರಿಯಲ್ಲಿ ದೊರಕುವ ಪುಸ್ತಕಗಳನ್ನು ನೋಡಬಹುದು ಹಾಗೂ ಒಂದು ಬಾರಿ 50-60 ರೂಪಾಯಿಗಳನ್ನು ನೀಡಿ ಚಂದಾದಾರರಾಗಿ ಪುಸ್ತಕಗಳನ್ನು ಓದಬಹುದು ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವಂತಹ ಪುಸ್ತಕಗಳು ಹಾಗೂ ಚಿಕ್ಕ ಮಕ್ಕಳ ಪುಸ್ತಕಗಳು, ಕೃತಕ ಬುದ್ದಿ ಮತ್ತೆ ಉಪಯೋಗಿಸಿ ಮಾಡಿದಂತಹ ಪುಸ್ತಕಗಳು ಕೂಡ ಲಭ್ಯವಿವೆ. ಎಲ್ಲಾ ವಯಸ್ಕರಿಗೂ ಉಪಯೋಗವಾಗುವ ಪುಸ್ತಕಗಳು ಲಭ್ಯವಿದೆ ಎಂದು ಗ್ರಂಥಾಲಯದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್.ಕೆ ಅವರು ಮಾಹಿತಿ ನೀಡಿದರು.

ಗ್ರಂಥಾಲಯದ ಸುತ್ತಲೂ 300 ಮೀಟರ್ ವ್ಯಾಪ್ತಿಯಲ್ಲಿ ವೈಫೈ ಬಳಸಿ ಪುಸ್ತಕಗಳನ್ನು ಓದಬಹುದು ಹಾಗೂ ವೈಫೈ ಸೌಲಭ್ಯ ಕೇವಲ ಪುಸ್ತಕಗಳನ್ನು ಓದಲು ಡೌನ್ಲೋಡ್ ಮಾಡಿಕೊಳ್ಳಲು ಮಾತ್ರ ಉಪಯೋಗಿಸಿಕೊಳ್ಳಬಹುದಾಗಿದೆ.

ಗ್ರಂಥಾಲಯವು 3 ಅಂತಸ್ತು ಹೊಂದಿದ್ದು, ಒಂದು ಬಾರಿಗೆ‌ 60 ಜನ ಓದುಗರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬೆಳಗಾವಿ ನಗರದಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ದಿವ್ಯಾಂಗ/ ವಿಕಲಚೇತನರಿಗಾಗಿ ವಿಶೇಷ ಉದ್ಯಾನವನ್ನು ನಿರ್ಮಿಸಲಾಗಿದೆ. ಬೆಳಗಾವಿಯಲ್ಲಿ ಸುಮಾರು 2200 ದಿವ್ಯಾಂಗ/ ವಿಕಲಚೇತನ ಮಕ್ಕಳಿದ್ದಾರೆ. ಬುದ್ಧಿಮಾಂದ್ಯ ಮಕ್ಕಳು ಸಾರ್ವಜನಿಕ ಉದ್ಯಾನವನಗಳಿಗೆ ತೆರಳಿದಾಗ ಅವರ ಪಾಲಕರಿಗೆ ಕೀಳರಿಮೆಯ ಭಾವನೆ ಉಂಟಾಗುತ್ತದೆ. ಆದ್ದರಿಂದ, ತಜ್ಞರೊಂದಿಗೆ ಚರ್ಚಿಸಿ ವಿಶೇಷವಾಗಿ ವಿಕಲಚೇತನ ಮಕ್ಕಳಿಗೆ ಅನುಕೂಲವಾಗುವಂತೆ ಮಹಾತ್ಮ ಫುಲೆ‌ ಉದ್ಯಾನವನನ್ನು ನಿರ್ಮಿಸಲಾಗಿದೆ. ಇದನ್ನು ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಉದ್ಘಾಟಿಸಲಿದ್ದಾರೆ ಎಂದು ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಬೆಳಗಾವಿಯಲ್ಲಿ 774 ಕೋಟಿ ರೂ. ವೆಚ್ಚದಲ್ಲಿ ಐ.ಟಿ.ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಕೇಂದ್ರ ರಕ್ಷಣಾ ಸಚಿವರ ಜೊತೆ ಚರ್ಚಿಸಲಾಗುವುದು. ಐ.ಟಿ. ಪಾರ್ಕ್ ನಿರ್ಮಾಣದಿಂದ 1 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಸಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com