ಕೋವಿಡ್-19: ನಗರದ 69 ವಾರ್ಡ್ ಗಳಲ್ಲಿ 10ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಅಬ್ಬರ ಇಳಿಕೆಯಾಗುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 198 ವಾರ್ಡ್‌ಗಳ ಪೈಕಿ 64 ವಾರ್ಡ್ ಗಳಲ್ಲಿ  10 ಮತ್ತು ಅದಕ್ಕಿಂತಲೂ ಕಡಿಮೆ ಪ್ರಕರಣಗಳಿರುವುದು ಕಂಡು ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಅಬ್ಬರ ಇಳಿಕೆಯಾಗುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 198 ವಾರ್ಡ್‌ಗಳ ಪೈಕಿ 64 ವಾರ್ಡ್ ಗಳಲ್ಲಿ  10 ಮತ್ತು ಅದಕ್ಕಿಂತಲೂ ಕಡಿಮೆ ಪ್ರಕರಣಗಳಿರುವುದು ಕಂಡು ಬಂದಿದೆ.

ಆದರೆ, ಹೊರಮಾವು, ರಾಜರಾಜೇಶ್ವರಿ ನಗರ ಮತ್ತು ಬೇಗೂರು ಮೂರು ವಾರ್ಡ್‌ಗಳಲ್ಲಿ ತಲಾ 90 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಸೆಪ್ಟೆಂಬರ್ 24 ರ ವೇಳೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಪತ್ತೆಯಾಗಿರುವ ಒಟ್ಟು 7,443 ಸಕ್ರಿಯ ಪ್ರಕರಣಗಳಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 4,324 ಪ್ರಕರಣಗಳು, ಬೆಂಗಳೂರು ನಗರದಿಂದ 442 ಮತ್ತು ಬೆಂಗಳೂರು ಹೊರವಲಯದಿಂದ 2,677 ಪ್ರಕರಣಗಳಿರುವುದು ಕಂಡು ಬಂದಿದೆ. 

ಅಧಿಕಾರಿಗಳ ಪ್ರಕಾರ, ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕು ಪರೀಕ್ಷೆಗೊಳಗಾದ ಸಾಕಷ್ಟು ವರದಿ ಬರುವುದಕ್ಕೂ ಮುನ್ನವೇ ನಗರವನ್ನು ತೊರೆದಿರುವುದು ಕಂಡು ಬಂದಿದೆ. ಕೆಲವರು ಸೋಂಕು ದೃಢಪಟ್ಟ ಬಳಿಕವೂ ನಗರವನ್ನು ತೊರೆದಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬಿಬಿಎಂಪಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮಾತನಾಡಿ, ಅನೇಕ ವಾರ್ಡ್‌ಗಳು ಕಡಿಮೆ ಸಂಖ್ಯೆಯ ಪ್ರಕರಣಗಳನ್ನು ಹೊಂದಿದ್ದರೂ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಾರುಕಟ್ಟೆಗಳಂತಹ ಕೆಲವು ಪ್ರದೇಶಗಳಲ್ಲಿ ಜನರ ಚಲನೆ ಮತ್ತು ಜನದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಬೇಕು ಮತ್ತು ಕೋವಿಡ್-ಸೂಕ್ತ ನಡವಳಿಕೆಯನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ. 

ಈ ನಡುವೆ ಬಿಬಿಎಂಪಿ ನೀಡಿರುವ ದತ್ತಾಂಶಗಳನ್ನು ಗಮನಿಸಿದರೆ, ಯಾವುದೇ ವಾರ್ಡ್ ಗಳೂ ಕೂಡ ಕೋವಿಡ್ ನಿಂದ ಮುಕ್ತಗೊಂಡಿಲ್ಲ ಎಂಬುದನ್ನು ತೋರಿಸುತ್ತಿದೆ. ಆದರೆ, ಲಕ್ಷ್ಮೀ ದೇವಿ ನಗರ (ನಂ.45) ಹಾಗೂ ಸುಧಾಮನಗರ (ನಂ.118) ನಲ್ಲಿ ಮಾತ್ರ ತಲಾ ಒಂದೊಂದು ಪ್ರಕರಣವಿರುವುದ್ದು, ಬಾಪೂಜಿ ನಗರ (ಸಂಖ್ಯೆ 134) , ಪಾದರಾಯನಪುರ (ನಂ 135), ರಾಯಪುರಂ (ನಂ 137), ನೀಲಸಂದ್ರ (ಸಂಖ್ಯೆ 116) ಮತ್ತು ಎಸ್ ಕೆ ಗಾರ್ಡನ್ (ನಂ. 61) ತಲಾ ಎರಡು ಪ್ರಕರಣಗಳಿರುವುದು ಕಂಡು ಬಂದಿದೆ. 

ಇನ್ನು ಹೊರಮಾವು 98 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದರೆ, ಆರ್‌ಆರ್ ನಗರದಲ್ಲಿ 91 ಮತ್ತು ಬೇಗೂರು 95 ಸಕ್ರಿಯಗಳಿರುವುದು ಕಂಡು ಬಂದಿದೆ. ಇದು ಅತೀ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ವಾರ್ಡ್ ಗಳಾಗಿವೆ. ಇನ್ನು ಕೆಂಪೇಗೌಡ ವಾರ್ಡ್ (ನಂ. 1) 74, ಬೆಳ್ಳಂದೂರು 74 ಮತ್ತು ಉತ್ತರಹಳ್ಳಿ 75 ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಆಯುಕ್ತ (ಆರೋಗ್ಯ) ರಣದೀಪ್ ಡಿ ಅವರು ಮಾತನಾಡಿ, ಇದೀಗ, ನಾವು ವಾರ್ಡ್ವಾರು ಪ್ರಕರಣಗಳನ್ನು ಗಮನಿಸುತ್ತಿಲ್ಲ. ಕ್ಲಸ್ಟರ್‌ಗಳ ಮೇಲೆ ನಿಗಾ ಇಟ್ಟಿದ್ದೇವೆ. ಇತ್ತೀಚೆಗೆ, ನರ್ಸಿಂಗ್ ಕಾಲೇಜುಗಳಲ್ಲಿ ಕ್ಲಸ್ಟರ್‌ ಪ್ರಕರಣಗಳು ಪತ್ತೆಯಾಗಿದ್ದವು, ಅದು ಹರಡದಂತೆ ನಾವು ಗಮನಹರಿಸಿದ್ದೇವೆ. ಅಪಾರ್ಟ್ ಮೆಂಟ್ ಗಳಲ್ಲಿ ವಾಸವಿರುವ ಒಂದು ಕುಟುಂಬದಲ್ಲಿ ಅತೀ ಹೆಚ್ಚು ಸಂಖ್ಯೆಯ ಜನರಿಗೆ ಕೋವಿಡ್ ಸೋಂಕು ದೃಢಪಟ್ಟರೆ, ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಗೊಳಗಾಗುವಂತೆ ಸೂಚಿಸಲಾಗುತ್ತಿದೆ. ಸೋಂಕು ಪತ್ತೆಯಾದ ಸಾಕಷ್ಟು ಜನರು ಮನೆಗಳಲ್ಲಿ ಐಸೋಲೇಷನ್ ನಲ್ಲಿದ್ದಾರೆ. ಇದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. 

ಹೊರಮಾವು ಮತ್ತು ಬೆಳ್ಳಂದೂರಿನಂತಹ ವಾರ್ಡ್‌ಗಳನ್ನು ಒಳಗೊಂಡ ಮಹಾದೇವಪುರ ವಲಯದ ಆರೋಗ್ಯ ಅಧಿಕಾರಿಯೊಬ್ಬರು ಮಾತನಾಡಿ, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ವಲಸೆ ಕಾರ್ಮಿಕರಿರುತ್ತಾರೆ. ಅವರಲ್ಲಿ ಸಾಕಷ್ಟು ಮಂದಿಯಲ್ಲಿ ಸೋಂಕು ತಗುಲಿರುವುದು ಕಂಡು ಬಂದಿದೆ. ಆದರೆ, ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಹದೇವಪುರದ ಪಾಸಿಟಿವಿಟಿ ದರ ಪ್ರಸ್ತು ಶೇ.0.55ರಷ್ಟಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com