ದೇಶದಲ್ಲಿ ದ್ವೇಷ ಹರಡುವುದು ನಿಲ್ಲಬೇಕು; ಬಸವಣ್ಣನವರ ಜಾತ್ಯತೀತ ಮನೋಭಾವ ನಮ್ಮ ಮೂಲ ಮಂತ್ರವಾಗಬೇಕು: ರಾಹುಲ್
ಮಠದಲ್ಲಿ ಯಾವುದೇ ಜಾತಿ, ಧರ್ಮವನ್ನು ನೋಡದೆ ಭ್ರಾತೃತ್ವ ಪ್ರಚಾರ ಮಾಡುವ ಕೆಲಸ ನಡೆದಿದೆ. ಪ್ರಸ್ತುತ ದ್ವೇಷ ಬಿತ್ತುತ್ತಿರುವ ಸಮಯದಲ್ಲಿ ಸಿದ್ಧಗಂಗಾ ಮಠದ ಜಾತ್ಯತೀತ ಸಂದೇಶ ನಮಗೆಲ್ಲ ಮಾದರಿಯಾಗಿದೆ. ಅದಕ್ಕಾಗಿ ಸ್ವಾಮೀಜಿಗೆ ನಮನ ಸಲ್ಲಿಸುತ್ತೇನೆ’ಎಂದರು.
Published: 01st April 2022 09:15 AM | Last Updated: 01st April 2022 02:48 PM | A+A A-

ಸಿದ್ದಗಂಗಾ ಶ್ರೀಗಳ ಜೊತೆ ರಾಹುಲ್ ಗಾಂಧಿ
ತುಮಕೂರು: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಕ್ಕೆ ಗುರುವಾರ ಭೇಟಿ ನೀಡಿದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು, ಶ್ರೀಗಳ ಗದ್ದುಗೆ ದರ್ಶನ ಪಡೆದರು. ಬಳಿಕ ಮಕ್ಕಳ ಮಧ್ಯೆ ಕೆಲಕಾಲ ಕಳೆದರು.
ಮಠದಲ್ಲಿ ಯಾವುದೇ ಜಾತಿ, ಧರ್ಮವನ್ನು ನೋಡದೆ ಭ್ರಾತೃತ್ವ ಪ್ರಚಾರ ಮಾಡುವ ಕೆಲಸ ನಡೆದಿದೆ. ಪ್ರಸ್ತುತ ದ್ವೇಷ ಬಿತ್ತುತ್ತಿರುವ ಸಮಯದಲ್ಲಿ ಸಿದ್ಧಗಂಗಾ ಮಠದ ಜಾತ್ಯತೀತ ಸಂದೇಶ ನಮಗೆಲ್ಲ ಮಾದರಿಯಾಗಿದೆ. ಅದಕ್ಕಾಗಿ ಸ್ವಾಮೀಜಿಗೆ ನಮನ ಸಲ್ಲಿಸುತ್ತೇನೆ’ಎಂದರು.
‘ಬಸವಣ್ಣನ ಸಂದೇಶವನ್ನು ಜಗತ್ತಿಗೆ ತಿಳಿಸುವ ಪ್ರಯತ್ನದಲ್ಲಿ ಮಠ, ಸ್ವಾಮೀಜಿ ಸಾಗಿದ್ದಾರೆ. ಹಿಂದೆ ಮಠಕ್ಕೆ ಬಂದಿದ್ದಾಗ ಶಿವಕುಮಾರ ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೆ. ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ತ್ರಿವಿಧ ದಾಸೋಹದ ಮೂಲಕ ನಾಡಿಗೆ ಮಾದರಿ ಸಂದೇಶ ನೀಡಿದ್ದಾರೆ. ಅವರ ದಾರಿಯಲ್ಲಿ ನಾವೆಲ್ಲ ಸಾಗಬೇಕಿದೆ. ಆದರೆ ಈಗ ಅವರಿಲ್ಲ ಎಂಬುದು ದುಃಖದ ಸಂಗತಿ’ ಎಂದು ತಿಳಿಸಿದರು.
ದೇಶದಲ್ಲಿ ದ್ವೇಷ ಹರಡುವುದನ್ನು ನಿಲ್ಲಿಸಬೇಕು, ಭ್ರಾತೃತ್ವ ಭಾವನೆ ಹರಡಬೇಕು. ಬಸವಣ್ಣನವರ ಜಾತ್ಯತೀತ ಮನೋಭಾವ, ಅವರ ವಚನಗಳ ಆಶಯ ನಮ್ಮೆಲ್ಲರ ಮೂಲ ಮಂತ್ರವಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಡಾ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯೋತ್ಸವ: ಗದ್ದುಗೆಗೆ ವಿಶೇಷ ಪೂಜೆ, ಕಂಚಿನ ಪ್ರತಿಮೆ ಮೆರವಣಿಗೆ, ಭಕ್ತಾದಿಗಳ ಆಗಮನ
ಸಿದ್ಧಗಂಗಾ ಮಠ ಹಾಗೂ ನಮ್ಮ ಕುಟುಂಬಕ್ಕೂ ಹಿಂದಿನಿಂದಲೂ ಅವಿನಾಭಾವ ಹಾಗೂ ಗೌರವಯುತ ಸಂಬಂಧವಿದೆ. ನಮ್ಮ ಅಜ್ಜಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ಅವರು ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದಿದ್ದರು. ಈಗ ನಾನು ಮಠಕ್ಕೆ ಬಂದಿರುವುದು ವೈಯಕ್ತಿಕವಾಗಿ ಬಹಳ ಸಂತೋಷ ಕೊಟ್ಟಿದೆ. ಸಿದ್ಧಗಂಗಾ ಮಠ ಶಿಕ್ಷಣ, ದಾಸೋಹಕ್ಕೆ ಪ್ರಸಿದ್ಧಿ, ಬಸವಣ್ಣನವರ ಜಾತ್ಯತೀತ ಮನೋಭಾವಕ್ಕೆ ಉತ್ತಮ ಉದಾಹರಣೆಯಾಗಿದೆ. ಹಿಂದೆ ತಾವು ಮಠಕ್ಕೆ ಭೇಟಿ ನೀಡಿದ್ದಾಗ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೆ. ಈ ಬಾರಿ ಅವರಿಲ್ಲದಿರುವುದು ಬೇಸರದ ಸಂಗತಿ ಎಂದರು.
ಅವರು ಹಾಕಿ ಕೊಟ್ಟಿರುವ ಮಾರ್ಗ ನಮಗೆ ದಾರಿದೀಪ. ಭ್ರಾತೃತ್ವ, ಸೋದರತ್ವ, ಸಾಮರಸ್ಯವನ್ನು ಪ್ರಚಾರ ಮಾಡುವ ಕೆಲಸವನ್ನು ಸಿದ್ಧಗಂಗಾ ಮಠ ಮಾಡುತ್ತಿದೆ. ಇದಕ್ಕಾಗಿ ನಾವು ಸಿದ್ಧಗಂಗಾ ಮಠ ಹಾಗೂ ಶ್ರೀಗಳನ್ನು ಅಭಿನಂದಿಸುತ್ತೇವೆ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ ಲಕ್ಷ್ಮೇ ಹೆಬ್ಬಾಳಕರ್ ಮತ್ತಿತರರು ಇದ್ದರು.
ಸಿದ್ಧಗಂಗಾ ಮಠಕ್ಕೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುಟುಂಬಕ್ಕೂ ಸುದೀರ್ಘ ಸಂಬಂಧವಿದೆ. ಈ ಹಿಂದೆ ಸೋನಿಯಾ ಗಾಂಧಿ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಶಿವಕುಮಾರ ಸ್ವಾಮೀಜಿ, ತಾವು ಹಾಗೂ ಸೋನಿಯಾ ಗಾಂಧಿ ಜತೆಯಾಗಿ ಕಾರಿನಲ್ಲಿ ಪ್ರಯಾಣಿಸಿದ್ದು ಅವಿಸ್ಮರಣೀಯ ಎಂದು ಸಿದ್ಧಲಿಂಗ ಶ್ರೀಗಳು ಸ್ಮರಿಸಿದರು.