2ಎ ಮೀಸಲಾತಿಗೆ ಆಗ್ರಹ: ಏ.21ರಿಂದ ಮತ್ತೆ ಧರಣಿ ಆರಂಭಿಸಲು ಲಿಂಗಾಯತ ಸ್ವಾಮೀಜಿ ನಿರ್ಧಾರ
ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2ಎ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಮರಳಿ ಏ.21ರಿಂದ ಧರಣಿ ಆರಂಭಿಸಲು ಲಿಂಗಾಯತ ನಾಯಕರು ನಿರ್ಧರಿಸಿದ್ದಾರೆ.
Published: 20th April 2022 11:05 AM | Last Updated: 20th April 2022 01:27 PM | A+A A-

ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು.
ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2ಎ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಮರಳಿ ಏ.21ರಿಂದ ಧರಣಿ ಆರಂಭಿಸಲು ಲಿಂಗಾಯತ ನಾಯಕರು ನಿರ್ಧರಿಸಿದ್ದಾರೆ.
ಲಿಂಗಾಯತ ನಾಯಕರು ಮತ್ತೆ ಧರಣಿಗೆ ಮುಂದಾಗುತ್ತಿದ್ದು, ಈ ಕುರಿತ ಸಿದ್ಧತೆಗಳನ್ನು ಸರ್ಕಾರ ನಿರಾತಂಕದಿಂದ ನೋಡುತ್ತಿದೆ. '2ಎ' ಹಿಂದುಳಿದ ಮೀಸಲಾತಿಗೆ ಸಮುದಾಯದ ನಾಯಕರು 5ನೇ ಹಂತದಲ್ಲಿ ಧರಣಿ ನಡೆಸುತ್ತಿದೆ.
ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯ ಮೃತ್ಯುಂಜಯ ಶ್ರೀ ಮಾತನಾಡಿ, ಮೂರು ಬಾರಿ ಗಡುವು ಕೊಟ್ಟರೂ ಸರಕಾರ ಬೇಡಿಕೆ ಈಡೇರಿಸಿಲ್ಲ. ಸರಕಾರದ ಮೇಲೆ ನಂಬಿಕೆ ಇಟ್ಟಿದ್ದೆವು. ಸರಕಾರ ಕೊಟ್ಟ ಮಾತಿಗೆ ತಪ್ಪಿದೆ. ಹೀಗಾಗಿ, ಈಗ ಅನಿವಾರ್ಯವಾಗಿ ಹೋರಾಟ ಆರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋಮು ಉದ್ವಿಗ್ನತೆಯ ನಡುವೆ ಸಿಎಂ ಬೊಮ್ಮಾಯಿಗೆ ಮೀಸಲಾತಿ ಬಿಸಿ: ಏ.21 ಅಂತಿಮ ಗಡುವು ಎಂದ ಸ್ವಾಮೀಜಿ
ಪಂಚಮಸಾಲಿ, ಲಿಂಗಾಯತ ಗೌಡ, ಮಲಯಗೌಡ, ದೀಕ್ಷ ಲಿಂಗಾಯತರು ಸೇರಿ ಹೋರಾಟ ನಡೆಸಲಾಗುವುದು. ಮೊದಲು ಕೂಡಲ ಸಂಗಮದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು. 2ನೆ ಹಂತದಲ್ಲಿ ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುವುದು. ಮೇ 21ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು. ಅದಕ್ಕೂ ಸರಕಾರ ಮಣಿಯದಿದ್ದರೆ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಭರವಸೆ ಇತ್ತು. ಆದರೆ, ನಂಬಿಕೆ ಹುಸಿಯಾಗಿದೆ. ಜನರಲ್ಲಿ ಅಸಮಾಧಾನ ಉಂಟಾಗಿದೆ. ಆದುದರಿಂದಲೇ ಐದು ಹಂತದ ಹೋರಾಟ ಆರಂಭಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಪ್ರವರ್ಗ 2ಎ ಪಟ್ಟಿಗೆ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಸೇರಿಸುವ ಆದೇಶ ಹೊರಬೀಳುವವರೆಗೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆದು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆಯೋಗದಿಂದ ವರದಿ ಪಡೆಯಲು ಒಂದು ವರ್ಷ ಬೇಕಿದೆಯೆ? ಕೊರೋನ ಮತ್ತಿತರ ಕಾರಣಗಳನ್ನು ನೀಡುತ್ತಾ ಕಾಲಹರಣ ಮಾಡಲಾಗುತ್ತಿದೆ. ಈ ನಿಲುವು ವಿರೋಧಿಸಿ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.