ಆಯುಕ್ತರಿಲ್ಲ, ಇಂಜಿನಿಯರ್ ಇಲ್ಲ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎಸ್ ಡಿಎ ಮಾತ್ರ ಕಾರ್ಯನಿರ್ವಹಣೆ! 

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ದಲ್ಲಿ ಹಲವು ವರ್ಷಗಳಿಂದ ದ್ವಿತೀಯ ವಿಭಾಗದ ಸಹಾಯಕ (ಎಸ್ ಡಿಎ) ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಆಯುಕ್ತರು ಸೇರಿದಂತೆ ಬಹುತೇಕ ಎಲ್ಲಾ ಹುದ್ದೆಗಳೂ ಖಾಲಿ ಬಿದ್ದಿವೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ದಲ್ಲಿ ಹಲವು ವರ್ಷಗಳಿಂದ ದ್ವಿತೀಯ ವಿಭಾಗದ ಸಹಾಯಕ (ಎಸ್ ಡಿಎ) ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಆಯುಕ್ತರು ಸೇರಿದಂತೆ ಬಹುತೇಕ ಎಲ್ಲಾ ಹುದ್ದೆಗಳೂ ಖಾಲಿ ಬಿದ್ದಿವೆ. 

ಇದೇ ಕಾರಣದಿಂದಾಗಿ ತನ್ನಲ್ಲಿರುವ ಆದಾಯದಿಂದ ಕುಡಾ 26 ವರ್ಷಗಳ ಹಿಂದೆ ತಾನೇ ನಿರ್ಮಿಸಿದ್ದ ಶ್ರೀ ದೇವರಾಜ ಅರಸ್ ಲೇಔಟ್ ಗೆ ಸೂಕ್ತ ಮೂಲಸೌಕರ್ಯ ನೀಡುವುದಕ್ಕೂ ಸಾಧ್ಯವಾಗಿಲ್ಲ. 

ಜೂ.04 ರಂದು ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರಿಗೆ ಪೊಲೀಸ್ ವಿಭಾಗ ಸಲ್ಲಿಸಿರುವ ವರದಿಯಲ್ಲಿ ಇವು ಪ್ರಮುಖವಾದ ಉಲ್ಲೇಖಗಳಾಗಿವೆ.

ಎಸ್ ಡಿಎಯನ್ನು ಹೊರತುಪಡಿಸಿ, ಆಯುಕ್ತ, ಭೂಸ್ವಾಧೀನ ಅಧಿಕಾರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್,  ಲೆಕ್ಕಿಗ, ಲೆಕ್ಕಗಳ ವಿಭಾಗದ ಸೂಪರಿಂಟೆಂಡೆಂಟ್, ಡೇಟಾ ಎಂಟ್ರಿ ಆಪರೇಟರ್, ಎಫ್ ಡಿಎ ಸೇರಿದಂತೆ ಉಳಿದೆಲ್ಲಾ ಹುದ್ದೆಗಳೂ ಖಾಲಿ ಇವೆ. ಬೇರೆ ಇಲಾಖೆಯ ಒಬ್ಬರೇ ಒಬ್ಬ ಅಧಿಕಾರಿ ಇನ್ ಚಾರ್ಜ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಲೇಔಟ್ ಗೆ ಮೂಲಸೌಕರ್ಯ ಒದಗಿಸುವುದಕ್ಕೆ ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿವೆ.

1994-95ರಲ್ಲಿ ನಿರ್ಮಾಣ ಮಾಡಲಾಗಿರುವ ಈ ಲೇಔಟ್ 121 ಎಕರೆ 3 ಗುಂಟೆ ವಿಸ್ತೀರ್ಣದಲ್ಲಿದ್ದು, ತಮಕ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದಲ್ಲಿದೆ. ಎಲ್ಲಾ 1,426 ನಿವೇಶನಗಳನ್ನು ಕಚ್ಚಾ ರಸ್ತೆ, ಚರಂಡಿ ವ್ಯವಸ್ಥೆಯನ್ನು ನಿರ್ಮಿಸಿ ವಿತರಣೆ ಮಾಡಲಾಗಿತ್ತು. ಆದರೆ ಕಾರ್ನರ್ ನಿವೇಶನಗಳೂ ಸೇರಿದಂತೆ ಕೆಲವು ನಿವೇಶನಗಳನ್ನು ಅಜಾಗರೂಕತೆಯಿಂದ ಮಾರಟ ಮಾಡಲಾಗಿರುವುದು ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ಸೌಲಭ್ಯ, ಮೂಲಸೌಕರ್ಯ, ವಿದ್ಯುತ್ ಸಂಪರ್ಕ, ತ್ಯಾಜ್ಯ ವಿಲೇವಾರಿ ಹಾಗೂ ಒಳಚರಂಡಿ ವ್ಯವಸ್ಥೆಗಳು ಈ ಲೇ ಔಟ್ ನ 148 ಮನೆಗಳಿಗೆ ಲಭ್ಯವಾಗಿಲ್ಲ.

ಕುಡಾ ಬಳಿ ಈಗ 8.71 ಕೋಟಿ ರೂಪಾಯಿ ಹಣವಿದ್ದು, 69.03 ಕೋಟಿ ರೂಪಾಯಿ ಆದಾಯವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿರೀಕ್ಷಿಸುತ್ತಿದೆ. ಲೇಔಟ್ ನಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಕುಡಾಗೆ ಶಾಶ್ವತ ಆಯುಕ್ತರ ನೇಮಕವಾಗಬೇಕಿದ್ದು, ತಾಂತ್ರಿಕ ಸಿಬ್ಬಂದಿಯೂ ನೇಮಕವಾಗಬೇಕಿದೆ

ಲೇಔಟ್ ನ ನಿವಾಸಿಗಳ ಕಲ್ಯಾಣ ಒಕ್ಕೂಟ ಅರ್ಜಿ ಸಲ್ಲಿಸಿದ್ದರ ಆಧಾರದಲ್ಲಿ ನಡೆದ ತನಿಖಾ ವರದಿಯ ಆಧಾರದಲ್ಲಿ ನ್ಯಾ.ಪಾಟೀಲ್ ಅವರು ಸ್ವಯಂ ಪ್ರೇರಿತ ಕ್ರಮಕ್ಕೆ ಮುಂದಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com