ಬೆಂಗಳೂರು: ಬೆಂಗಳೂರಿನ ಹೆಸರಾಂತ ವಿವಿ ಪುರಂ ಫುಡ್ ಸ್ಟ್ರೀಟ್ ಗೆ ಭೇಟಿ ನೀಡಿದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಕೆಲ ತಿಂಡಿಗಳನ್ನು ಸವಿದರು. ಫುಡ್ ಸ್ಟ್ರೀಟ್ ಗೆ ಆಗಮಿಸಿದ್ದ ಆಹಾರ ಪ್ರಿಯರು, ಜನರೊಂದಿಗೆ ಕೆಲ ಸಮಯ ಮಾತನಾಡುವ ಮೂಲಕ ಇಲ್ಲಿನ ಆಹಾರದ ಬಗ್ಗೆ ಮಾಹಿತಿ ಪಡೆದರು.
ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವರು, ಜನಪ್ರಿಯ ಆಹಾರ ಬ್ಲಾಗರ್ ಕೃಪಾಲ್ ಅಮಣ್ಣ ಅವರೊಂದಿಗೆ ಬೆಂಗಳೂರಿನ ಪ್ರಸಿದ್ಧ ವಿ ವಿ ಪುರಂ ಫುಡ್ ಸ್ಟ್ರೀಟ್ ಗೆ ಭೇಟಿ ಕೊಟ್ಟೆ. ಈ ಜಾಗ ಇಂದ್ರಿಯಗಳಿಗೆ ನಿಜವಾದ ಸತ್ಕಾರ ಹಾಗೂ ನಗರದ ಪಾಕಶಾಲೆಯ ಇತಿಹಾಸದ ಉಗ್ರಾಣ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ವಿಶ್ವ ರಾಜಕೀಯದ ಕುರಿತು ಸಂವಾದದಲ್ಲಿ ಪಾಲ್ಗೊಂಡರು. ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ವಿದ್ಯಾರ್ಥಿಗಳ ಅಪಾರವಾದ ಆಸಕ್ತಿಯನ್ನು ಅರಿತು ತುಂಬಾ ಸಂತೋಷವಾಯಿತು. ನಮ್ಮ ಮುಂಬರುವ ಪೀಳಿಗೆಗಳು ಹೆಚ್ಚು ಜಾಗತೀಕರಣದ ಪ್ರಪಂಚಕ್ಕಾಗಿ ಹೊಂದಿಕೊಳ್ಳಲು ಚೆನ್ನಾಗಿ ತಯಾರಿ ನಡೆಸಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಿಇಎಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಕೃತಕ ಬುದ್ದಿಮತ್ತೆ ಮತ್ತು ಡ್ರೋನ್ ತಂತ್ರಜ್ಞಾನಗಳ ಬಳಕೆ ಮೋದಿ ಸರ್ಕಾರವು ನಮ್ಮ ಯುವಕರಲ್ಲಿ ಇರಿಸಿರುವ ನಂಬಿಕೆಯನ್ನು ಧೃಡಿಕರಿಸುತ್ತದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement