ಬೆಂಗಳೂರು: ಹುತಾತ್ಮ ಯೋಧರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವುದರೊಂದಿಗೆ, ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ. ಯಾವುದೇ ಅಡೆತಡೆಯಾಗದೆಯೇ ಹುತಾತ್ಮ ಯೋಧರ ಮನೆ ಬಾಗಿಲಿಗೆ ಉದ್ಯೋಗದ ಆದೇಶ ಪ್ರತಿಯನ್ನು ಕಳುಹಿಸಲಾಗುವುದು ಎಂದು 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಬುಲೆಟ್ ಪ್ರೂಫ್ ಬಾಕ್ಸ್ ಬೇಡ ಎಂದ ಅವರು, ಮುದ್ರಿತ ಭಾಷಣದ ಪ್ರತಿಯನ್ನು ಓದದೇ ಸ್ವಂತ ಭಾಷಣ ಮಾಡಿದರು.
'ದೇಶವನ್ನು ರಕ್ಷಿಸಲು ಸೈನಿಕರು ತಮ್ಮ ಪ್ರಾಣವನ್ನು ಮುಡಿಪಾಗಿಡುತ್ತಾರೆ ಮತ್ತು ತ್ಯಾಗ ಮಾಡುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರ್ವಹಿಸುತ್ತಿರುವಾಗ ಹುತಾತ್ಮರಾದರೆ, ಅವರ ಕುಟುಂಬಕ್ಕೆ ಭದ್ರತೆ ಒದಗಿಸಲು ಅನುಕಂಪದ ಆಧಾರದ ಮೇಲೆ ಅವರ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು' ಎಂದರು.
ರಾಜ್ಯ ಸರ್ಕಾರ ಮಂಜೂರು ಮಾಡಿರುವ 250 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುವುದಾಗಿ ಘೋಷಿಸಿದರು. ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸ್ವಚ್ಛ ಮತ್ತು ನೈರ್ಮಲ್ಯದ ವಾತಾವರಣವನ್ನು ಸೃಷ್ಟಿಸಲು, ಮುಂದಿನ ಆಗಸ್ಟ್ 15, 2023 ರೊಳಗೆ ಶೇ 100 ರಷ್ಟು ಶೌಚಾಲಯದ ಗುರಿಯನ್ನು ಸಾಧಿಸಲಾಗುವುದು' ಎಂದು ಅವರು ಹೇಳಿದರು.
ಇದರೊಂದಿಗೆ, ಈಗಾಗಲೇ ರೈತರ ಮಕ್ಕಳಿಗೆ ಜಾರಿಗೊಳಿಸಿರುವ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದರು. ಈ ಹಿಂದೆ ರೈತರು, ಮೀನುಗಾರರು, ನೇಕಾರರು ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಈ ಯೋಜನೆಯನ್ನು ಘೋಷಿಸಿದ್ದರು.
3ಇ ಮಂತ್ರಕ್ಕೆ ಒತ್ತು ನೀಡಿದ ಬೊಮ್ಮಾಯಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಉನ್ನತಿಗಾಗಿ ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ ಎಂಬ ಮಂತ್ರವನ್ನು ಅಳವಡಿಸಿಕೊಂಡಿರುವುದಾಗಿ ತಿಳಿಸಿದ ಅವರು, ಈ ಜನರು ಸ್ವಾವಲಂಬಿ ಜೀವನ ನಡೆಸಲು ಸೂಕ್ತವಾದ ವಾತಾವರಣ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸಾವಿರಾರು ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Advertisement