ಧಾರವಾಡ: ಕ್ರೂಜರ್- ಖಾಸಗಿ ಬಸ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಇಬ್ಬರು ಸಾವು

ಕ್ರೂಜರ್ ಮತ್ತು ಖಾಸಗಿ ಸಾರಿಗೆ ಬಸ್ ನಡುವೆ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಕಲಘಟಗಿಯಲ್ಲಿ ಸಂಭವಿಸಿದ ಅಪಘಾತ
ಕಲಘಟಗಿಯಲ್ಲಿ ಸಂಭವಿಸಿದ ಅಪಘಾತ

ಕಲಘಟಗಿ (ಧಾರವಾಡ): ಕ್ರೂಜರ್ ಮತ್ತು ಖಾಸಗಿ ಸಾರಿಗೆ ಬಸ್ ನಡುವೆ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಕಲಘಟಗಿಯ ರಾಯಾನಾಳ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಮೃತರಾದವರು ಸಂಬಂಧಿಯೊಬ್ಬರ ಪಾರ್ಥಿವ ಶರೀರ ತರಲು ಕ್ರೂಜರ್‌ನಲ್ಲಿ ತೆರಳುತ್ತಿದ್ದರು. ಕ್ರೂಸರ್ ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಮೃತಪಟ್ಟವರನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ನಂದಗಡ ನಿವಾಸಿಗಳಾದ ಶಿವನಗೌಡ ಪಾಟೀಲ್ ಮತ್ತು ಅಮೃತ ಪಾಟೀಲ್ ಎಂದು ಗುರುತಿಸಲಾಗಿದೆ. 

ಮೃತ ಶಿವನಗೌಡ ಹಾಗೂ ಅಮೃತ ಸಂಬಂಧಿಯೊಬ್ಬರ ಪಾರ್ಥಿವ ಶರೀರವನ್ನು ತರಲು ಕ್ರೂಜರ್‌ನಲ್ಲಿ ಕಲಘಟಗಿ ಮಾರ್ಗವಾಗಿ ತೆರಳುತ್ತಿದ್ದರಂತೆ. ಈ ವೇಳೆ ವೇಗವಾಗಿ ಬಂದ ಖಾಸಗಿ ಸಾರಿಗೆ ಬಸ್ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಮಾರುತಿ ಹಾಗೂ ದೇವೇಂದ್ರ ಎಂಬ ಇಬ್ಬರಿಗೆ ಗಂಭೀರವಾದ ಗಾಯವಾಗಿದೆ. ಬಸ್‌ನ ಡಿಕ್ಕಿಯ ಹೊಡೆತಕ್ಕೆ  ಕ್ರೂಜರ್ ವಾಹನ ಸಂಪೂರ್ಣ ಜಖಂಗೊಂಡಿದ್ದು, ಮೇಲ್ಭಾಗ ಕಿತ್ತು ಹೋಗಿದೆ.  

ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಕಲಘಟಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಕಲಘಟಗಿ ಪೊಲೀಸ್ ಠಾಣೆಯ ಇಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿಗಳು, ಸ್ಥಳೀಯರ ಸಹಕಾರದೊಂದಿಗೆ ಗಾಯಾಳುಗಳನ್ನು ರಕ್ಷಣೆ ಮಾಡಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. 

ಬಳಿಕ ಮೃತ ಇಬ್ಬರ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ವರ್ಗಾಯಿಸಿ ಅಪಘಾತದ ಕುರಿತು ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com