ಬೆಂಗಳೂರಿನ ಎಲ್ಲಾ ವಾರ್ಡ್ ‌ಗಳಲ್ಲಿ ಬಡ ಮಕ್ಕಳಿಗಾಗಿ 'ಬೆಳಕು' ಕಲಿಕಾ ಕೇಂದ್ರಗಳ ಸ್ಥಾಪನೆ

ನಗರದಲ್ಲಿನ ಕೊಳಚೆ ಪ್ರದೇಶದ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆರವಾಗಲು ಬಿಬಿಎಂಪಿ ಕಲ್ಯಾಣ ಇಲಾಖೆ ಎಲ್ಲಾ ವಾರ್ಡ್ ಗಳಲ್ಲಿ ಬೆಳಕು ಕಲಿಕಾ ಕೇಂದ್ರವೊಂದನ್ನು ಸ್ಥಾಪಿಸುತ್ತಿದೆ. ಈ ಕೇಂದ್ರದಲ್ಲಿ ಓರ್ವ ನುರಿತ ಶಿಕ್ಷಕ, ಸುಸಜ್ಜಿತ ಕೊಠಡಿ ಹಾಗೂ ಪುಸ್ತಕಗಳು ಇರಲಿವೆ.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ನಗರದಲ್ಲಿನ ಕೊಳಚೆ ಪ್ರದೇಶದ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆರವಾಗಲು ಬಿಬಿಎಂಪಿ ಕಲ್ಯಾಣ ಇಲಾಖೆ ಎಲ್ಲಾ ವಾರ್ಡ್ ಗಳಲ್ಲಿ ಬೆಳಕು ಕಲಿಕಾ ಕೇಂದ್ರವೊಂದನ್ನು ಸ್ಥಾಪಿಸುತ್ತಿದೆ. ಈ ಕೇಂದ್ರದಲ್ಲಿ ಓರ್ವ ನುರಿತ ಶಿಕ್ಷಕ, ಸುಸಜ್ಜಿತ ಕೊಠಡಿ ಹಾಗೂ ಪುಸ್ತಕಗಳು ಇರಲಿವೆ.

ಇಂತಹ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗದ ಖಾತ್ರಿ ಈ ಯೋಜನೆಯದ್ದಾಗಿದೆ. ಮನೆಯಲ್ಲಿ ಅಧ್ಯಯನ ಮಾಡಲು ಸೂಕ್ತ ವಾತವಾರಣ ಇಲ್ಲದಂತಹ ದುರ್ಬಲ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ ಕಲ್ಯಾಣ ಇಲಾಖೆ ವಿದ್ಯಾರ್ಥಿ ಬೆಳಕು ಯೋಜನೆ ಜಾರಿಗೊಳಿಸುತ್ತಿದೆ ಎಂದು ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ವಿದ್ಯಾರ್ಥಿಗಳ ಮನೆಗಳಿಗೆ 500 ಮೀಟರ್ ಗಳಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಈ ಕೇಂದ್ರಗಳು ಸ್ಥಾಪನೆಯಾಗಲಿವೆ. ಸರಿಯಾಗಿ ಅಧ್ಯಯನ ನಡೆಸದ ಇಂತಹ ಅನೇಕ ವಿದ್ಯಾರ್ಥಿಗಳಿಗಾಗಿ ನಮ್ಮ ಇಲಾಖೆ ಈ ಕಾರ್ಯಕ್ರಮ ಆರಂಭಿಸುತ್ತಿದೆ. ಎನ್ ಜಿಒ ಮತ್ತು ಸ್ವಯಂ ಸೇವಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮೂಲಸೌಕರ್ಯ ಹಾಗೂ ಅಧ್ಯಯನ ಸಾಮಾಗ್ರಿಗಳನ್ನು ನಾವೇ ಪೂರೈಸುತ್ತೇವೆ ಎಂದು ಮನೋಹರ್ ವಿವರಿಸಿದರು.

ಈ ಕೇಂದ್ರಗಳು ಸಂಜೆ 5-30 ರಿಂದ 7-30ರವರೆಗೂ ತೆರೆದಿರುತ್ತವೆ. ಈ ಕೇಂದ್ರಗಳ ನಿರ್ವಹಣೆಗಾಗಿ ಮಾಸಿಕ ರೂ. 1,500 ರಿಂದ ರೂ. 2,000 ತಿಂಗಳ ಗೌರವಧನದೊಂದಿಗೆ ಪದವೀಧರರನ್ನು ಎನ್ ಜಿಒಗಳು ಗುತ್ತಿಗೆಗೆ ಪಡೆದುಕೊಳ್ಳಬೇಕು, ಈ ಕೇಂದ್ರಗಳ ಶಿಕ್ಷಕರಿಗೆ 15 ದಿನ ತರಬೇತಿ ನೀಡಲಾಗುವುದು, ಪ್ರತಿ ಸೆಂಟರ್ ಗೆ ರೂ. 42, 500 ಅನುದಾನ ಹಂಚಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳಿಗೆ ನಾಯಕತ್ವ, ಸಂವಹನ ಮತ್ತಿತರ ಕೌಶಲ್ಯಗಳನ್ನು ಹೇಳಿಕೊಡಲಾಗುವುದು, ಅವರು ತಮ್ಮ ಪರೀಕ್ಷೆ ಪಾಸು ಮಾಡಲು ತರಬೇತಿದಾರರ ನೆರವು ಪಡೆದುಕೊಳ್ಳಬಹುದು. ಪೈಲಟ್ ಆಧಾರದ ಮೇಲೆ ಈಗಾಗಲೇ 10 ಕೇಂದ್ರಗಳನ್ನು ತೆರೆಯಲಾಗಿದ್ದು, ಶೀಘ್ರದಲ್ಲಿಯೇ ಎಲ್ಲಾ ವಾರ್ಡ್ ಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮನೋಹರ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com