ಎರಡು ವರ್ಷಗಳ ನಂತರ 600 ಕೋಟಿ ರೂ. ವೆಚ್ಚದ ಅನುಭವ ಮಂಟಪ ಕಾಮಗಾರಿ ಆರಂಭ!

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ಈ ನಡುವಲ್ಲೇ ರಾಜ್ಯ ಸರ್ಕಾರ ಬೀದರ್ ನಲ್ಲಿ ರೂ.600 ಕೋಟಿ ವೆಚ್ಚದ ಅನುಭವ ಮಂಟಪ ಯೋಜನೆಗೆ ಚಾಲನೆ ನೀಡಿದೆ.
ಅನುಭವ ಮಂಟಪ
ಅನುಭವ ಮಂಟಪ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ಈ ನಡುವಲ್ಲೇ ರಾಜ್ಯ ಸರ್ಕಾರ ಬೀದರ್ ನಲ್ಲಿ ರೂ.600 ಕೋಟಿ ವೆಚ್ಚದ ಅನುಭವ ಮಂಟಪ ಯೋಜನೆಗೆ ಚಾಲನೆ ನೀಡಿದೆ.

2021 ರ ಜನವರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷಗಳಾದ ಬಳಿಕ ಇದೀಗ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ.

ಸರ್ಕಾರದ ಈ ಕ್ರಮವು ಕಲ್ಯಾಣ ಕರ್ನಾಟಕ ಪ್ರದೇಶದ ಲಿಂಗಾಯತ ಮತದಾರರನ್ನು ಓಲೈಸುವ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ.

12ನೇ ಶತಮಾನದ ಸುಧಾರಕ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪವನ್ನು ‘ವಿಶ್ವದ ಮೊದಲ ಸಂಸತ್ತು’ ಎಂದು ಪರಿಗಣಿಸಲಾಗಿದೆ.

ಬಸವೇಶ್ವರರ ಬೋಧನೆಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಮೊದಲು 2016 ರಲ್ಲಿ ರಾಜ್ಯದಲ್ಲಿ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಸ್ತಾಪಿಸಿತ್ತು. ನಂತರ, 2019 ರಲ್ಲಿ, ಆಗಿನ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿತು.

ಯೋಜನೆಯ ಪ್ರಕಾರ, ಅನುಭವ ಮಂಟಪವು 770 ಸ್ತಂಭಗಳೊಂದಿಗೆ ಆರು ಮಹಡಿಗಳನ್ನು ಹೊಂದಿರುತ್ತದೆ ಮತ್ತು ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಮೇಲೆ ನಿರ್ಮಿಸಲಾಗುತ್ತಿದೆ.

ಅನುಭವ ಮಂಟಪದಲ್ಲಿ 770 ಶರಣರು (ಬಸವಣ್ಣನವರ ಅನುಯಾಯಿಗಳು) ಇದ್ದರು ಎಂದು ನಂಬಲಾಗಿದ್ದು, ಇದರಂತೆ ಆಡಿಟೋರಿಯಂನಲ್ಲಿ 770 ಆಸನ ಸಾಮರ್ಥ್ಯದ ಸಭಾಂಗಣ ಕೂಡ ಇರಲಿದೆ. 612 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಜೂನ್‌ನಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಪುಣೆ ಮೂಲದ ಕಂಪನಿಗೆ ಆಗಸ್ಟ್‌ನಲ್ಲಿಯೇ ಕಾಮಗಾರಿಯ ಆರ್ಡರ್ ನೀಡಲಾಗಿದೆ ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಮೂಲಗಳು ತಿಳಿಸಿವೆ.

ಅನುಭವ ಮಂಟಪದ ಅಡಿಪಾಯದ ಕೆಲಸ ಕೆಲವೇ ವಾರಗಳ ಹಿಂದೆ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಇಷ್ಟು ವರ್ಷಗಳಾದರೂ ಅನುಭವ ಮಂಟಪ ಕಾಮಗಾರಿ ಆರಂಭವಾಗದೇ ಇದ್ದರೆ, ಇದು ಲಿಂಗಾಯತ ಮತಗಳ ಮೇಲೆ ಪರಿಣಾಮ ಬೀರಲಿದೆ ಹಾಗೂ ಆಡಳಿತಾರೂಢ ಪಕ್ಷಕ್ಕೂ ಹಿನ್ನೆಡೆಯುಂಟಾಗುವಂತೆ ಮಾಡಲಿದೆ. ನಿಗದಿತ ಸಮಯಕ್ಕೆ ಯೋಜನೆ ಆರಂಭವಾಗಿದ್ದೇ ಆದರೆ, ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಳ್ಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2021ರಲ್ಲಿ ಬಸವಕಲ್ಯಾಣ ಉಪಚುನಾವಣೆಗೆ ಕೆಲವೇ ವಾರಗಳ ಮೊದಲು ಅಂದಿನ ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಘೋಷಿಸಿದ್ದರು. ಆದರೆ, ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗದ ಕಾರಣ ಕಾಮಗಾರಿ ಆರಂಭಗೊಂಡಿರಲಿಲ್ಲ. ಡಿಪಿಆರ್‌ ಇಲ್ಲದೆ ನಿಜವಾದ ಕಾಮಗಾರಿಗೆ ಟೆಂಡರ್‌ ಕರೆಯಲು ಸಾಧ್ಯವಾಗಿರಲಿಲ್ಲ.

ಈ ವರ್ಷ, ಏಪ್ರಿಲ್‌ನಲ್ಲಿ, ಸಿಎಂ ಬೊಮ್ಮಾಯಿ ಅವರು ಮೇ 2022 ರಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದ್ದರು, ಅದೂ ಸಾಧ್ಯವಾಗಿರಲಿಲ್ಲ.

ಮೇ ತಿಂಗಳಲ್ಲಿ, ಬೊಮ್ಮಾಯಿ ಅವರು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಈ ವೇಳೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮೂರು ವರ್ಷಗಳ ಗಡುವು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com