ಬೆಂಗಳೂರು: ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ 48 ವರ್ಷದ ವ್ಯಕ್ತಿಯೊಬ್ಬರು ರಾಮನಗರದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಬಳಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಇದೀಗ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧನಕ್ಕೊಳಪಡಿಸಿದ್ದಾರೆ.
ಚಿಕ್ಕಬಾಣಾವರದ ಸೋಮಶೆಟ್ಟಿಹಳ್ಳಿ ನಿವಾಸಿ ದೇಸೇಗೌಡ (48) ಹತ್ಯೆಯಾಗಿರುವ ವ್ಯಕ್ತಿಯಾಗಿದ್ದು, ಈತನ ಪತ್ನಿ ಜಯಲಕ್ಷ್ಮಿ (32) ಮತ್ತು ಅಶೋಕ್ (25) ಬಂಧಿತ ವ್ಯಕ್ತಿಗಳಾಗಿದ್ದಾರೆ.
ದೇಸೇಗೌಡ ಅವರು 16 ವರ್ಷಗಳಿಂದ ತೋಟವನ್ನು ನೋಡಿಕೊಂಡು ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅವರ ಪತ್ನಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಜಯಲಕ್ಷ್ಮೀ ಅಶೋಕ್ ಜೊತೆಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಈ ಆತ್ಮೀಯತೆ ದಿನ ಕಳೆದಂತೆ ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲಸ ನಿಮಿತ್ತ ರಾಮನಗರಕ್ಕೆ ತೆರಳಿದ್ದ ಪತಿ ವಾಪಸ್ಸು ಬಂದಿಲ್ಲ ಎಂದು ಹೇಳಿಕೊಂಡು ಸೋಲದೇವನಹಳ್ಳಿ ಪೊಲೀಸರ ಬಳಿ ಹೋಗಿದ್ದ ಜಯಲಕ್ಷ್ಮೀ ತನಗೇನೂ ಗೊತ್ತಿಲ್ಲ ಎಂಬಂತೆ ದೂರು ದಾಖಲಿಸಿದ್ದಳು. ಈ ಸಂಬಂಧ ತನಿಖೆ ಆರಂಭಿಸಲಾಗಿತ್ತು. ಆದರೆ, ಹೇಳಿಕೆಯಲ್ಲಿ ಸ್ಥಿರತೆಗಳಿರಲಿಲ್ಲ. ಬಳಿಕ ವಿಚಾರಣೆ ನಡೆಸಿದಾಗ ಪರಪುರುಷನೊಂದಿಗೆ ಸೇರಿಕೊಂಡು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಳು. ನಂತರ ಅಶೋಕ್ ನನ್ನು ಬಂಧನಕ್ಕೊಳಪಡಿಸಲಾಯಿತು ಎಂದು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ದೇಸೇಗೌಡ ಅವರ ಕತ್ತು ಹಿಸುಕಿ ಹತ್ಯೆ ಮಾಡಲಾಗಿದ್ದು, ನಂತರ ಶವವನ್ನು ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಬಳಿ ಎಸೆದಿದ್ದಾರೆ. ಅಕ್ರಮ ಸಂಬಂಧದ ಬಗ್ಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಹತ್ಯೆ ಮಾಡಿದೆವು ಎಂದು ಜಯಲಕ್ಷ್ಮೀ ವಿಚಾರಮೆ ವೇಳೆ ಹೇಳಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement