ಬೆಂಗಳೂರು: ಬೆಳಗ್ಗೆ 8.30ರ ನಂತರ ಶಾಲಾ ಬಸ್ ಸಂಚಾರಕ್ಕೆ ನಿಷೇಧ, ಪೋಷಕರಿಂದ ಆಕ್ರೋಶ
ಬೆಂಗಳೂರು: ಬೆಳಗ್ಗೆ 8.30ರ ನಂತರ ಶಾಲಾ ಬಸ್ಗಳು ನಗರದ ರಸ್ತೆಗಳಲ್ಲಿ ಸಂಚರಿಸದಂತೆ ಬೆಂಗಳೂರು ಸಂಚಾರಿ ಪೊಲೀಸರು ನೀಡಿರುವ ಸಲಹೆಗೆ ಪೋಷಕರು, ಶಾಲೆಗಳು ಮತ್ತು ಶಿಕ್ಷಣ ತಜ್ಞರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಜ್ಞರ ಪ್ರಕಾರ, ದಟ್ಟಣೆಯನ್ನು ನಿಗ್ರಹಿಸಲು ತೆಗೆದುಕೊಂಡ ಈ ನಿರ್ಧಾರವು ಶಾಲೆಗಳು, ಪೋಷಕರು ಮತ್ತು ವಿದ್ಯಾರ್ಥಿಗಳ 360 ಡಿಗ್ರಿ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಬೆಳಗ್ಗೆ 8.30ರ ನಂತರ ಶಾಲೆಗಳಿಗೆ ತೆರಳುವ ಬಸ್ಗಳಿಗೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ರಸ್ತೆಗಳಲ್ಲಿ ಶಾಲಾ ಬಸ್ಗಳನ್ನು ನಿಲ್ಲಿಸದಂತೆ ಶಾಲೆಗಳಿಗೆ ಸೂಚಿಸಲಾಗಿದೆ.
ಕರ್ನಾಟಕ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆಫ್ ಆಂಗ್ಲ ಮಾಧ್ಯಮ ಶಾಲೆಗಳ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಅವರು, ಸಂಚಾರಿ ಪೊಲೀಸರ ಈ ಕ್ರಮವನ್ನು ಟೀಕಿಸಿದ್ದು, ಇದು ಕೇವಲ ದಟ್ಟಣೆಯನ್ನು ಕಡಿಮೆ ಮಾಡಲು ಮಾತ್ರ ಗಮನಹರಿಸಿದೆ ಎಂದು ಹೇಳಿದ್ದಾರೆ.
ಶಾಲೆಯ ಸಮಯವನ್ನು ಬದಲಾಯಿಸಿದರೆ ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳು ಸಹ ತಮ್ಮ ದಿನವನ್ನು ಸಾಮಾನ್ಯಕ್ಕಿಂತ ಮುಂಚಿತವಾಗಿ ಪ್ರಾರಂಭಿಸಬೇಕಾಗಿರುವುದರಿಂದ ಅನಾನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಟ್ರಾಫಿಕ್ ಸಮಸ್ಯೆ ಕುರಿತು ಮಾತನಾಡಿದ ಕೆಲವು ಶಾಲೆಗಳು, ತಾವು ಟ್ರಾಫಿಕ್ ಸಮಸ್ಯೆ ತಪ್ಪಿಸಲು ಬಸ್ ಸೇವೆ ಹಿಂಪಡೆದು ಖಾಸಗಿ ವಾಹನಗಳ ಮೇಲೆ ಅವಲಂಬಿತವಾಗಿರುವುದಾಗಿ ತಿಳಿಸಿವೆ.