ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ತೀವ್ರ ಪ್ರತಿಭಟನೆಗಳ ಬಳಿಕ ಸಹಜ ಸ್ಥಿತಿಗೆ ಮರಳಿದ ಬೆಳಗಾವಿ!

ಕರ್ನಾಟಕ-ಮಹಾರಾಷ್ಟ್ರ ರಾಜ್ಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ಹೋರಾಟಗಾರರು ಬೃಹತ್ ಪ್ರತಿಭಟನೆ ನಡೆಸಿ, ಸಂಚಾರಕ್ಕೆ ಅಡ್ಡಿಪಡಿಸಿದ ಒಂದು ದಿನದ ನಂತರ ಬೆಳಗಾವಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ಕೊಗ್ನೋಳಿ ಟೋಲ್ ಪ್ಲಾಜಾ
ಕೊಗ್ನೋಳಿ ಟೋಲ್ ಪ್ಲಾಜಾ

ಕೊಗ್ನೋಳಿ (ಕರ್ನಾಟಕ-ಮಹಾರಾಷ್ಟ್ರ ಗಡಿ): ಕರ್ನಾಟಕ-ಮಹಾರಾಷ್ಟ್ರ ರಾಜ್ಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ಹೋರಾಟಗಾರರು ಬೃಹತ್ ಪ್ರತಿಭಟನೆ ನಡೆಸಿ, ಸಂಚಾರಕ್ಕೆ ಅಡ್ಡಿಪಡಿಸಿದ ಒಂದು ದಿನದ ನಂತರ ಬೆಳಗಾವಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.

ಕರ್ನಾಟಕ-ಮಹಾರಾಷ್ಟ್ರ ಗಡಿಯ ನಿಪಾಣಿ ಬಳಿಯ ಕೊಗ್ನೋಳಿ ಟೋಲ್ ಪ್ಲಾಜಾದಲ್ಲಿ ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇದರಂತೆ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ.

ಉಭಯ ರಾಜ್ಯಗಳಲ್ಲಿ ಗಡಿ ವಿವಾದ ತಾರಕ್ಕೇರಿ, ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ರಾಜ್ಯಗಳು ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆದರೆ, ಖಾಸಗಿ ವಾಹನಗಳು ಯಾವುದೇ ಸಮಸ್ಯೆಗಳಿಲ್ಲದೆ ಬುಧವಾರ ಸಂಚಾರ ನಡೆಸಿದವು.

ಟೋಲ್ ಪ್ಲಾಜಾದಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಮತ್ತು ಜೀಪ್ ಗಳನ್ನು ನಿಯೋಜಿಸಿದ್ದರು. ಅನುಮಾನಕ್ಕೆ ಎಡೆಮಾಡಿಕೊಟ್ಟ ವಾಹನಗಳನ್ನು ಮಾತ್ರ ಪೊಲೀಸರು ತಪಾಸಣೆ ನಡೆಸಿ ಇತರರಿಗೆ ತೆರಳಲು ಅನುವು ಮಾಡಿಕೊಟ್ಟರು.

ಮಹಾರಾಷ್ಟ್ರದ ಗಡಿಭಾಗದ ಕಾಗಲ್ ನಿವಾಸಿ ಅಮರ್ ಪವಾರ್ ಮಾತನಾಡಿ, ಬಸ್ ಸಂಚಾರ ರದ್ದುಗೊಂಡಿರುವುದರಿಂದ ಎರಡೂ ಕಡೆಯ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಟೋಲ್ ಪ್ಲಾಜಾದಿಂದ ಸುಮಾರು ಒಂದು ಕಿಲೋಮೀಟರ್ ದೂರದಿಂದ ಎರಡೂ ಕಡೆಯಿಂದ ಬಸ್‌ಗಳು ಸಂಚರಿಸುತ್ತಿಲ್ಲ. ಅಲ್ಲಿಂದ ಕಾಗಲ್ ತಲುಪಲು ಜನರು 5 ಕಿ.ಮೀ ನಡೆದು ಮುಂದೆ ಸಾಗಲು ಮತ್ತೊಂದು ಬಸ್ ಹಿಡಿಯಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟೋಲ್ ಪ್ಲಾಜಾದ ಟೀ ಅಂಗಡಿ ಮಾಲೀಕ ಕಿಶೋರ್ ಪಾಟೀಲ್ ಅಲಿಯಾಸ್ ಗೋಪಿ ಮಾತನಾಡಿ, ವಿವಾದದಿಂದಾಗಿ ಗಡಿಯ ಸಮೀಪ ವ್ಯಾಪಾರಗಳು ಭಾರಿ ನಷ್ಟವನ್ನು ಅನುಭವಿಸಿವೆ. ಪ್ರತಿಭಟನೆಯಿಂದಾಗಿ ಮಂಗಳವಾರ ಎಲ್ಲಾ ಅಂಗಡಿಗಳನ್ನು ಮುಚ್ಚಬೇಕಾಯಿತು. ಬುಧವಾರ ವ್ಯಾಪಾರ ಬಹುತೇಕ ಶೂನ್ಯವಾಗಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com