ದೇವದಾಸಿ ಪದ್ದತಿ ನಿರ್ಮೂಲನೆಗೆ ಕಟ್ಟುನಿಟ್ಟಿನ ಕಾನೂನು ಅನುಷ್ಠಾನ: ಸಚಿವ ಹಾಲಪ್ಪ ಆಚಾರ್
ರಾಜ್ಯದಲ್ಲಿ ಬಾಲ್ಯವಿವಾಹ ತಡೆಗೆ ಇರುವ ಕಠಿಣ ಕ್ರಮಗಳಂತೆಯೇ, ದೇವದಾಸಿ ಪದ್ದತಿ ಆಚರಣೆ ತಡೆಗೆ ಇರುವ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಹಾಲಪ್ಪ ಆಚಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Published: 08th December 2022 04:48 PM | Last Updated: 08th December 2022 05:24 PM | A+A A-

ಮಾಜಿ ದೇವದಾಸಿಯರ ಸಮಸ್ಯೆ ಆಲಿಸುತ್ತಿರುವ ಸಚಿವ ಹಾಲಪ್ಪ ಆಚಾರ್
ಬೆಂಗಳೂರು: ರಾಜ್ಯದಲ್ಲಿ ಬಾಲ್ಯವಿವಾಹ ತಡೆಗೆ ಇರುವ ಕಠಿಣ ಕ್ರಮಗಳಂತೆಯೇ, ದೇವದಾಸಿ ಪದ್ದತಿ ಆಚರಣೆ ತಡೆಗೆ ಇರುವ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಹಾಲಪ್ಪ ಆಚಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಜಿ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕುಂದು ಕೊರತೆ, ಪರಿಹಾರ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗುತ್ತಿದೆ. ಯಾವುದೇ ಬಾಲ್ಯವಿವಾಹ ನಡೆದಾಗ ಅದರಲ್ಲಿ ಭಾಗಿಯಾಗುವವರನ್ನ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಇದರಿಂದ ಬಾಲ್ಯವಿವಾಹದಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಪರಿಣಾಮಕಾರಿಯಾಗಿ ಕಡಿಮೆ ಆಗಿದೆ. ಆದರೆ, ದೇವದಾಸಿ ಪದ್ದತಿಗೆ ಇನ್ನು ಹಲವು ಮಹಿಳೆಯರನ್ನ ಕಾನೂನುಬಾಹಿರವಾಗಿ ತಳ್ಳಲಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇರುವ ಕಾನೂನಿನ ಕಟ್ಟುನಿಟ್ಟಿನ ಬಳಕೆ ಆಗಬೇಕಾಗಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಬಾಲ್ಯ ವಿವಾಹ ತಡೆಗಟ್ಟಲು ಇರುವ ಅಧಿಕಾರದಂತೆಯೇ ಕಠಿಣವಾದ ಕ್ರಮಗಳನ್ನ ದೇವದಾಸಿ ಪದ್ದತಿಗೆ ಹೊಸದಾಗಿ ಮಹಿಳೆಯರನ್ನ ತಳ್ಳುವವರ ವಿರುದ್ದ ಕೈಗೊಳ್ಳಬೇಕು, ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು. ದೇವದಾಸಿ ಪದ್ದತಿ ನಿಷೇಧ ಮತ್ತು ಕಾನೂನಿನ ಬಗ್ಗೆ ವ್ಯಾಪಕವಾಗಿ ಪ್ರಚಾರ ಕೈಗೊಳ್ಳುವಂತೆ ಸೂಚಿಸಲಾಯಿತು.
ಇದನ್ನೂ ಓದಿ: ಸಮಾಜದ ಪರಕೀಯ ಭಾವನೆ ಹೋಗಲಾಡಿಸುವ ಕುರಿತು ದೇವದಾಸಿ ಪುತ್ರಿಯ ಪಿಎಚ್ಡಿ ಅಧ್ಯಯನ
ಮಾಜಿ ದೇವದಾಸಿಯರ ಬಗ್ಗೆ ಸಮೀಕ್ಷೆ: 1993- 94 ಹಾಗೂ 2007- 08 ರಲ್ಲಿ ದೇವದಾಸಿಯರ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ವಲಸೆ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವ ಭಯ ಮತ್ತಿತರ ಕಾರಣಗಳಿಂದ ಹಲವಾರು ದೇವದಾಸಿಯರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ. ಈ ಹಿನ್ನಲೆಯಲ್ಲಿ ಇನ್ನೊಮ್ಮೆ ಸಮೀಕ್ಷೆ ನಡೆಸುವುದು ಸೂಕ್ತ. ಇದರಿಂದ ನಮ್ಮ ರಾಜ್ಯದಲ್ಲಿರುವ ಮಾಜಿ ದೇವದಾಸಿಯರ ಸಂಖ್ಯೆ, ದೇವದಾಸಿ ನಿಷೇಧ ಅಧಿನಿಯಮದ ಅನುಷ್ಠಾನದ ಪರಿಣಾಮಗಳನ್ನು ತಿಳಿದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು.
ವಿದ್ಯಾರ್ಥಿಗಳ ವೇತನ, ಹಾಸ್ಟೆಲ್, ಶಾಲಾ, ಕಾಲೇಜ್ ಗಳಲ್ಲಿ ಮಾಜಿ ದೇವದಾಸಿ ಮಕ್ಕಳಿಗೆ ಒಳ ಮೀಸಲಾತಿಯನ್ನು ನೀಡಲು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಹಾಗೂ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ನಿವೇಶನ ರಹಿತ ಅಲೆಮಾರಿ ಸಮುದಾಯಕ್ಕೆ ನೀಡುತ್ತಿರುವ ವಸತಿ ಸೌಲಭ್ಯದ ಮಾದರಿಯಂತೆ ಮಾಜಿ ದೇವದಾಸಿಯರಿಗೆ ವಸತಿ ಸೌಲಭ್ಯ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.