ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದದಿಂದ ಸ್ಥಗಿತಗೊಂಡಿದ್ದ ಕೊಲ್ಹಾಪುರ ಮತ್ತು ಬೆಳಗಾವಿ ನಡುವಣ ಬಸ್ ಸೇವೆ ಪುನರ್ ಆರಂಭಗೊಂಡಿದೆ. ಸ್ಥಳೀಯ ಪೊಲೀಸರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆ ಶುಕ್ರವಾರದಿಂದ ಭಾಗಶ: ಬಸ್ ಸೇವೆಯನ್ನು ಪುನರ್ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಭಯ ರಾಜ್ಯಗಳ ನಡುವಣ ಗಡಿ ವಿಚಾರವಾಗಿ ಪ್ರತಿಭಟನೆ ಭುಗಿಲೆದ್ದ ನಂತರ ನಿಪ್ಪಾಣಿ ಮೂಲಕ ಬೆಳಗಾವಿ ಮತ್ತು ಕೊಲ್ಹಾಪುರ ನಡುವಣ 1,156 ಬಸ್ ಗಳ ಪೈಕಿ 382 ಬಸ್ ಗಳಸಂಚಾರವನ್ನು ಮಹಾರಾಷ್ಟ್ರ ಸಾರಿಗೆ ನಿಗಮ ಸ್ಥಗಿತಗೊಳಿಸಿತ್ತು.
ಕರ್ನಾಟಕದಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಕೆಲವೊಂದು ಬಸ್ ಗಳ ಮೇಲೆ ಮಸಿ ಬಳಿಯಲಾಗಿತ್ತು. ಮಹಾರಾಷ್ಟ್ರದಲ್ಲೂ ಕರ್ನಾಟಕಕ್ಕೆ ಸೇರಿದ ಬಸ್ ಗಳಿಗೆ ಶಿವಸೇನಾ ಕಾರ್ಯಕರ್ತರು ಮಸಿ ಬಳಿದಿದ್ದರು. ಶುಕ್ರವಾರ ಮಧ್ಯಾಹ್ನದಿಂದ ನಿಪ್ಪಾಣಿ ಮೂಲಕ ಕೊಲ್ದಾಪುರ ಮತ್ತು ಬೆಳಗಾವಿ ನಡುವಣ ಬಸ್ ಸಂಚಾರ ಸಾಮಾನ್ಯವಾಗಿದೆ ಎಂದು ಮಹಾರಾಷ್ಟ್ರ ಸಾರಿಗೆ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.
ಬೆಳಗಾವಿ ಸುತ್ತಮುತ್ತ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದ್ದು, ಉಭಯ ರಾಜ್ಯಗಳ ನಡುವಣ ಧೀರ್ಘ ಕಾಲದಿಂದಲೂ ಗಡಿ ವಿವಾದ ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ.
Advertisement