ಬೆಂಗಳೂರು: ವಿಶೇಷಚೇತನರ ಪ್ರಯಾಣಕ್ಕೆ ಹಲವು ಸೌಲಭ್ಯಗಳ ಒದಗಿಸಿದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ವಿಶೇಷಚೇತನರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ.
Published: 16th December 2022 09:23 AM | Last Updated: 16th December 2022 01:48 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ವಿಶೇಷಚೇತನರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ.
ದೇಶದಲ್ಲೇ ಇದೇ ಮೊದಲ ಬಾರಿಗೆ ವಿಶೇಷ ಸೌಲಭ್ಯಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಚಾಲನೆ ನೀಡಲಾಗಿದೆ. ಆ ಮೂಲಕ ವಿಶೇಷಚೇತನರ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಲಾಗಿದೆ.
ಕಡಿಮೆ ದೃಷ್ಠಿಹೀನತೆ, ಶ್ರವಣದೋಷ ಹೊಂದಿರುವವರು ಇತರೆ ದೈಹಿಕ ಅಂಗವೈಖಲ್ಯತೆ ಸೇರಿದಂತೆ ವಿಶೇಷಚೇತನ ಪ್ರಯಾಣಿಕರು ಚೆಕ್ಇನ್ ಆಗಲು ಅವರಿಗೆ ಯಾವುದೇ ಸಮಸ್ಯೆ ಬಾರದಂತೆ ವಿಕಲಚೇತನ ಸ್ನೇಹಿ ಸೇವೆಗಳನ್ನ ಏರ್ಪೋಟ್ನಲ್ಲಿ ಪರಿಚಯಿಸಲಾಗಿದೆ.
ಇದನ್ನೂ ಓದಿ: ವಲಸೆ ವಿಭಾಗದ ಪ್ರಕ್ರಿಯೆಯಲ್ಲಿ ವಿಳಂಬ: ಕೆಐಎನಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಪ್ರಯಾಣಿಕರ ಬೇಸರ!
ಪ್ರವೇಶ ದ್ವಾರ 5 ರಲ್ಲಿ ವೀಲ್ಚೇರ್ ಇರಲಿದ್ದು, ಬಿಐಎಎಲ್ನ ಸಿಬ್ಬಂದಿಗಳೇ ಇವರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ವಿಕಲಚೇತನರಿಗಾಗಿಯೇ ಲೇನ್ 1ನ್ನು ಮೀಸಲಿಟ್ಟಿದ್ದು ವಿಶೇಷ ಚೆಕ್ಇನ್, ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಇನ್ನು ದೃಷ್ಟಿ ಹೀನತೆ ಸಮಸ್ಯೆ ಇರುವವರಿಗಾಗಿ ಎಲ್ಲಾ ಆಹಾರ ಮಳಿಗೆಯಲ್ಲಿ ಬ್ರೈಲ್ ಮೆನುಗಳನ್ನು ಸಹ ಪರಿಚಯಿಸಲಾಗಿದ್ದು, ಸ್ವತಃ ತಾವೇ ಆಹಾರ ಆರ್ಡರ್ ಮಾಡಿಕೊಳ್ಳಬಹುದಾಗಿದೆ. ವಿಶೇಷ ಚೇತನ ಪ್ರಯಾಣಿಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನ್ಯಾವಿಗೇಟ್ ಮಾಡಲು ಈ ವಿಶೇಷ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಅಂತಹ ವಿಮಾನ ನಿಲ್ದಾಣಗಳನ್ನು ಜಾಗತಿಕವಾಗಿ “ಸನ್ಫ್ಲವರ್ ವಿಮಾನ ನಿಲ್ದಾಣ”ವೆಂದು ಕರೆಯಲಾಗುತ್ತದೆ. ಪ್ರಸ್ತುತ ಈ ಕಾರ್ಯಕ್ರಮವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಪರಿಚಯಿಸಲಾಗಿದ್ದು, “ಸನ್ಫ್ಲವರ್” ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎಬಿ ಕೂಡ ಸೇರ್ಪಡೆಗೊಂಡಿದೆ.
ಇದನ್ನೂ ಓದಿ: ವಿಶೇಷಚೇತನರಿಂದ ನಡೆಸಲ್ಪಡುವ ಅಸಾಮಾನ್ಯ ಕೆಫೆ ಈ ಮಿಟ್ಟಿ ಕೆಫೆ: ಶೀಘ್ರದಲ್ಲೇ ಕೆಐಎಎಲ್'ನಲ್ಲೂ ಆರಂಭ!
ಇನ್ನು ಕೆಲವರು ಗೌಪ್ಯ ದೈಹಿಕ ಸಮಸ್ಯೆಯನ್ನು ಹೊಂದಿರುತ್ತಾರೆ ಉದಾಹರಣೆಗೆ, ಮಧುಮೇಹ, ಅಧಿಕ ರಕ್ತದೊತ್ತಡ, ಇತರೆ ಆರೋಗ್ಯ ಸಮಸ್ಯೆ ಇರುವವರು ಸಹ ಈ ಕಾರ್ಯಕ್ರಮದ ಅಡಿಯಲ್ಲಿ ಗುರುತಿಸಲಾಗುತ್ತದೆ.
ಇಂತಹವರು ಕೂಡ ಈ ಕಾರ್ಯಕ್ರಮದ ಸೇವೆ ಪಡೆದುಕೊಳ್ಳಬಹುದು. ಬಿಎಲ್ಆರ್ ವಿಮಾನ ನಿಲ್ದಾಣವು ಸನ್ಫ್ಲವರ್ ಲ್ಯಾಂಡ್ಯಾರ್ಡ್ ಕಾರ್ಯಕ್ರಮವನ್ನೂ ಪರಿಚಯಿಸಿದ್ದು, ಬಿಎಲ್ಆರ್ ಕಿಯೋಸ್ಕೋ ಕೇರ್ನಿಂದ ಲ್ಯಾನ್ಯಾರ್ಡ್ನನ್ನು ತೆಗೆದುಕೊಳ್ಳಬಹುದು. ಅಂದರೆ, ತಮಗೆ ಬಿಎಲ್ಆರ್ ಸಿಬ್ಬಂದಿಯ ಅವಶ್ಯಕತೆ ಇದೆ ಈ ಕಿಯಸ್ಕೋ ಮೂಲಕ ನಮೂದಿಸಬೇಕು. ಬಳಿಕ ಆ ವಿಕಲ ಚೇತನರನ್ನು ಬಿಎಲ್ಆರ್ ಸಿಬ್ಬಂದಿ ಸಂಪರ್ಕಿಸಿ, ಸಹಾಯ ಮಾಡಲಿದ್ದಾರೆ. ಇದಷ್ಟೇ ಅಲ್ಲದೇ, ಮಾತು ಮತ್ತು ಶ್ರವಣದೋಷ ಹೊಂದಿರುವವರ ಜೊತೆ ಸಂವಹನ ಮಾಡಲು ಕೆಲ ಬಿಎಲ್ಆರ್ ಸಿಬ್ಬಂದಿಗಳಿಗೆ ಸಂಕೇತ ಭಾಷೆಯ ತರಬೇತಿ ನೀಡಲಾಗಿದೆ.
ಇದಷ್ಟೇ ಅಲ್ಲದೆ, ನಿರ್ಗಮನ ಗೇಟ್ ಎ5ನಲ್ಲಿ (ಲಗೇಜ್ ಪಡೆದುಕೊಳ್ಳುವ ಪ್ರದೇಶದ ಪಕ್ಕದಲ್ಲಿ) ವಿಕಲಚೇತನರಿಗಾಗಿ ವಿಶಾಲವಾದ ಮಾರ್ಗ, ವೀಲ್ಚೇರ್ ಪ್ರವೇಶ, ವೀಲ್ಚೇರ್ ಸ್ನೇಹಿ ಸೌಲಭ್ಯಗಳು, ವಿಶ್ರಾಂತಿ ಸ್ಥಳ ಸೇರಿದಂತೆ ಹಲವು ಸೌಲಭ್ಯಗಳನ್ನು ಸಹ ಮಾಡಲಾಗಿದ್ದು ಇನ್ನು ಮುಂದೆ ವಿಶೇಷಚೇತನರು ಕೂಡ ಒಬ್ಬಂಟಿಯಾಗಿ ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ.