ಆರೋಗ್ಯ ಕ್ಷೇತ್ರ ದತ್ತಾಂಶ ಸಂಗ್ರಹದಿಂದ ಪರಿಣಾಮಕಾರಿ ಕಾರ್ಯಕ್ರಮಗಳ ನಿರ್ವಹಣೆಗೆ ಸಹಾಯ: ಸಚಿವ ಸುಧಾಕರ್

ಆರೋಗ್ಯ ಕ್ಷೇತ್ರದಿಂದ ದತ್ತಾಂಶವನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಇದು ವಿವಿಧ ಕಾಯಿಲೆಗಳು ಮತ್ತು ಅನಾರೋಗ್ಯಗಳಿಗೆ ಸೂಕ್ತ ಕಾರ್ಯಕ್ರಮಗಳನ್ನು ತರಲು ಸಹಾಯ ಮಾಡುತ್ತದೆ ಎಂದು ಶನಿವಾರ ಹೇಳಿದರು.
ಸಚಿವ ಸುಧಾಕರ್
ಸಚಿವ ಸುಧಾಕರ್

ಬೆಂಗಳೂರು: ಆರೋಗ್ಯ ಕ್ಷೇತ್ರದಿಂದ ದತ್ತಾಂಶವನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಇದು ವಿವಿಧ ಕಾಯಿಲೆಗಳು ಮತ್ತು ಅನಾರೋಗ್ಯಗಳಿಗೆ ಸೂಕ್ತ ಕಾರ್ಯಕ್ರಮಗಳನ್ನು ತರಲು ಸಹಾಯ ಮಾಡುತ್ತದೆ ಎಂದು ಶನಿವಾರ ಹೇಳಿದರು.

ಫಾನಾದಿಂದ ಆಯೋಜಿಸಿದ್ದ 3ನೇ ರಾಷ್ಟ್ರೀಯ ಆರೋಗ್ಯ ಸಮ್ಮೇಳನದಲ್ಲಿ ಮಾತನಾಡಿ ಸಚಿವರು, ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡಲು ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ಫಾನಾ ಸಹಯೋಗದಲ್ಲಿ ಕೆಲಸ ಮಾಡಬೇಕು. ಜನರಿಗೆ ಸದಾ ಲಭ್ಯವಾಗುವಂತೆ ಹಾಗೂ ಚಿಕಿತ್ಸೆ ಕಡಿಮೆ ದರದಲ್ಲಿ ದೊರೆಯುವಂತೆ ವ್ಯವಸ್ಥೆ ಇರಬೇಕು. ನಾನು ಯಾರನ್ನೂ ನಿರ್ದಿಷ್ಟವಾಗಿ ದೂರುತ್ತಿಲ್ಲ. ಆದರೆ, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆಯೇ ಇಲ್ಲ. ಸರ್ಕಾರದ ರಾಷ್ಟ್ರೀಯ, ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಸರಿಯಾದ ದತ್ತಾಂಶ ಬೇಕಾಗುತ್ತದೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು ಮಾಹಿತಿ, ದತ್ತಾಂಶಗಳನ್ನು ಸರಿಯಾಗಿ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದರು.

ಸರಕಾರವು ಸರಿಯಾದ ದತ್ತಾಂಶಗಳನ್ನು ಹೊಂದಿದ್ದರೆ ಮಾತ್ರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರಿಣಾಮಕಾರಿ ಆರೋಗ್ಯ ಕಾರ್ಯಕ್ರಮಗಳ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಲ್ಲದೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಉತ್ತಮ ಸಂಬಂಧ ಇರಬೇಕು. ಉತ್ತಮ ಸಮನ್ವಯದಿಂದ ಹಾಗೂ ನಿರಂತರ ಸಂವಹನದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.

ಮೊದಲು ವೈದ್ಯ ಕೇಂದ್ರಿತ ವ್ಯವಸ್ಥೆ ಇತ್ತು. ಈಗ ರೋಗಿಗಳ ಕೇಂದ್ರಿತ ವ್ಯವಸ್ಥೆ ಇದೆ. ಜೀವನಶೈಲಿಯ ಬದಲಾವಣೆಯಿಂದಾಗಿ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ. ಜನವರಿ ಅಂತ್ಯಕ್ಕೆ ಎಲ್ಲಾ ಕ್ಲಿನಿಕ್‌ಗಳು ಕಾರ್ಯಾರಂಭವಾಗಲಿವೆ. ಕಾರ್ಮಿಕರು, ವಲಸಿಗರು, ಕೊಳೆಗೇರಿ ನಿವಾಸಿಗಳಿಗೆ ಇಂತಹ ಕ್ಲಿನಿಕ್‌ಗಳು ಮೀಸಲಾಗಿವೆ. ಇದೇ ರೀತಿ ಬಡವರು ಹೆಚ್ಚಿರುವ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ʼಆಯುಷ್ಮತಿʼ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಭಾರತದಲ್ಲಿ ಮಾನಸಿಕ ಆರೋಗ್ಯ ಕಾಯಿಲೆಗಳು, ನರವೈಜ್ಞಾನಿಕ ಅಸ್ವಸ್ಥತೆಗಳು ಮತ್ತು ಮಧುಮೇಹದ ಹರಡುವಿಕೆಯ ಕುರಿತು ಮಾತನಾಡಿದ ಸುಧಾಕರ್ ಅವರು, ನರ ಸಂಬಂಧಿ ರೋಗಗಳಿಂದಾಗಿ ಆರೋಗ್ಯ ಕ್ಷೇತ್ರದ ಮೇಲೆ ಹೊರೆ ಹೆಚ್ಚುತ್ತಿದೆ. ಇದು ಆರೋಗ್ಯ ವಲಯಕ್ಕೆ ದೊಡ್ಡ ಸವಾಲಾಗಿದೆ. ಇದು ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ. ಕರ್ನಾಟಕದಲ್ಲಿ ನರ ಸಂಬಂಧಿ ಸಮಸ್ಯೆ, ಮೂರ್ಛೆ ಹಾಗೂ ಪಾರ್ಶ್ವವಾಯು ಸಮಸ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದೆ. ಬಾಲ್ಯದಲ್ಲೇ ಮಕ್ಕಳು ಅಂಗವಿಕಲರಾಗಲು ಇರುವ ಕಾರಣಗಳಲ್ಲಿ ನರ ಸಂಬಂಧಿ ಸಮಸ್ಯೆಗಳೇ ಶೇ.70 ಪಾಲು ಹೊಂದಿವೆ. ಈ ಬಗ್ಗೆ ಶಾಲಾ ಮಕ್ಕಳಲ್ಲಿ, ವಯಸ್ಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇಂತಹ ಸಮ್ಮೇಳನದ ಮೂಲಕ ಸಮಸ್ಯೆಗಳಿಗೆ ಹೊಸ ಉತ್ತರ ದೊರೆಯಲಿದೆ. ಇದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಕಳೆದ 7-8 ವರ್ಷಗಳಲ್ಲಿ ಕರ್ನಾಟಕವು ಅಗಾಧವಾಗಿ ಪ್ರಗತಿ ಸಾಧಿಸಿದೆ, ಆದರೆ ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿಗೆ ಹೋಲಿಸಿದರೆ ತಾಯಂದಿರ ಮರಣ ಪ್ರಮಾಣ ಅಥವಾ ಶಿಶು ಮರಣ ಪ್ರಮಾಣ ರಾಜ್ಯದಲ್ಲಿ ಹೆಚ್ಚಿದೆ ಎಂದು ತಿಳಿಸಿದರು.

ಇದೇ ವೇಳೆ ವೈದ್ಯರೊಬ್ಬರು ಮಾತನಾಡಿ, ಕೋವಿಡ್ ಗಿಂತಲೂ ಮಧುಮೇಹ ಹೆಚ್ಚಾಗುತ್ತಿದೆ. ಇದೊಂದು ರೀತಿಯ ಸ್ಲೋ ಪಾಯಿಸನ್. ಇದನ್ನೂ ನಿಯಂತ್ರಣಕ್ಕೆ ತರದೇ ಹೋದರೆ, ಕೋವಿಡ್ ನಿಂದ ಸಂಭವಿಸಿದ ಸಾವಿಗಿಂತಲೂ ಹೆಚ್ಚು ಸಾವು ಇದರಿಂದ ಸಂಭವಿಸುತ್ತದೆ ಎಂದರು.

ಈ ವೇಳೆ ಸಚಿವರು ಉತ್ತಮ ಆರೋಗ್ಯ ಸೇವೆಯನ್ನು ನಿರ್ಮಿಸಲು ತಡೆಗಟ್ಟುವ-ಆಧಾರಿತ ವಿಧಾನವನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com