ಬಾಗಲಕೋಟೆಯಲ್ಲಿ ಮರ್ಯಾದೆ ಹತ್ಯೆ: ಅನ್ಯ ಸಮುದಾಯದವನನ್ನು ಮದುವೆಯಾಗಿದ್ದ ಪುತ್ರಿ; ಅಳಿಯನನ್ನು ಕೊಚ್ಚಿ ಕೊಂದ ತಂದೆ

ಅನ್ಯ ಸಮುದಾಯದವನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ ಎಂದು ತಂದೆಯೇ ಮಗಳ ಪತಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಅನ್ಯ ಸಮುದಾಯದವನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ ಎಂದು ತಂದೆಯೇ ಮಗಳ ಪತಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದಲ್ಲಿ ನಡೆದಿದೆ.

ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದ ಭುಜಬಲ ಕರ್ಜಗಿ (34) ಕೊಲೆಯಾದ ವ್ಯಕ್ತಿ. ಇದೇ ಗ್ರಾಮದ ಭಾಗ್ಯಶ್ರಿ ತಂದೆ ತಮ್ಮನಗೌಡ, ಭುಜಬಲನ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಒಂದೇ ಗ್ರಾಮದ ಕ್ಷತ್ರೀಯ ಜಾತಿಯ ಭಾಗ್ಯಶ್ರೀ ಹಾಗೂ ಜೈನ ಸಮುದಾಯದ ಭುಜಬಲ ಇಬ್ಬರೂ ಪ್ರೀತಿಸಿ ವರ್ಷದ ಹಿಂದೆ ಮನೆ ಬಿಟ್ಟು ಹೋಗಿ ಮದುವೆ ಆಗಿದ್ದರು. ಬಳಿಕ ಇಬ್ಬರೂ ಟಕ್ಕೋಡ ಗ್ರಾಮದಲ್ಲೇ ಬಂದು ನೆಲೆಸಿದ್ದರು. ಮಗಳ ಮದುವೆಯ ಸೇಡು ಇಟ್ಟುಕೊಂಡಿದ್ದ ತಮ್ಮನಗೌಡ, ಡಿ.17ರ ರಾತ್ರಿ 8.30ಕ್ಕೆ ಅಳಿಯನನ್ನು ಕೊಂದು ಪರಾರಿಯಾಗಿದ್ದಾನೆ.

ಈ ಕೃತ್ಯಕ್ಕೆ ಇಬ್ಬರು ಸ್ನೇಹಿತರು ಸಹಾಯ ಮಾಡಿದ್ದಾರೆ ಎಂಬ​ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಘಟನೆ ಸಂಬಂಧ ಸಾವಳಗಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com