ಬೆಳಗಾವಿ: ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಕೋವಿಡ್ ಸೋಂಕು, ರಾಜ್ಯದಲ್ಲಿ ಕೋವಿಡ್ ನಿಯಮ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಮಾತನಾಡುವಾಗ 'ಓವರ್ ಆಕ್ಟಿಂಗ್' ಎಂಬ ಪದ ಬಳಸಿದ್ದು ಅದಕ್ಕೆ ಪತ್ರಕರ್ತರು ಪ್ರಶ್ನೆ ಕೇಳಿ ಸಚಿವರು ಕಕ್ಕಾಬಿಕ್ಕಿಯಾದ ಪ್ರಸಂಗ ನಡೆಯಿತು.
ಕೋವಿಡ್ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ, ಅತಿಹೆಚ್ಚು ಆಗಿ ಅಂದರೆ ಓವರ್ ಆ್ಯಕ್ಟಿಂಗ್ ಮಾಡದೆ ಸಾರ್ವಜನಿಕ ಸ್ನೇಹಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಸಚಿವ ಅಶೋಕ್ ಹೇಳಿದರು. ಆಗ ಪತ್ರಕರ್ತರು ಯಾರು ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ ಸರ್, ಸುಧಾಕರ್ ಅವರಾ ಎಂದು ಕೇಳಿದಾಗ ಕ್ಷಣ ಅವಕ್ಕಾದಂತೆ ಅಶೋಕ್ ಕಂಡುಬಂದರು.
ಅಲ್ಲಲ್ಲ, ಯಾರ ಮೇಲೋ ಕೋಪ, ಅವರ ಮೇಲೆ ಕೋಪ ಇದ್ದರೆ ತೀರಿಸ್ಕೊಂಡ್ಬಿಟಿ, ಇಲ್ಲ ನಾನೇ ಓವರ್ ಆಕ್ಟಿಂಗ್ ಮಾಡುತ್ತಿರುವುದು, ನಾನೇ ಸರಿಹೋಯ್ತ ನೀವಿನ್ನು ಅದಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದರು.
ಅಂದರೆ ಸರ್ಕಾರದಲ್ಲಿ ಸಚಿವರಾದ ಅಶೋಕ್ ಮತ್ತು ಸುಧಾಕರ್ ಮಧ್ಯೆ ಭಿನ್ನಾಭಿಪ್ರಾಯ, ಕೈ ಮೇಲಾಟ ನಡೆಯುತ್ತಿದೆಯೇ ಎಂಬ ಅನುಮಾನ ಕಾಡಿದ್ದಂತೂ ಸುಳ್ಳಲ್ಲ.
Advertisement