ಕೋವಿಡ್-19: ಹೆಚ್ಚು ಅಪಾಯವಿರುವ ದೇಶಗಳ ವಿಮಾನ ಪ್ರಯಾಣದ ಮೇಲೆ ನಿರ್ಬಂಧ ಹೇರಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

ವಿಶ್ವದ ಹಲವು ದೇಶಗಳಲ್ಲಿ ಮಹಾಮಾರಿ ಕೊರೋನಾ ಆರ್ಭಟಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚು ಅಪಾಯವಿರುವ ರಾಷ್ಟ್ರಗಳಲ್ಲಿನ ವಿಮಾನ ಪ್ರಯಾಣದ ಮೇಲೆ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಶ್ವದ ಹಲವು ದೇಶಗಳಲ್ಲಿ ಮಹಾಮಾರಿ ಕೊರೋನಾ ಆರ್ಭಟಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚು ಅಪಾಯವಿರುವ ರಾಷ್ಟ್ರಗಳಲ್ಲಿನ ವಿಮಾನ ಪ್ರಯಾಣದ ಮೇಲೆ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.

ಚೀನಾ, ಅಮೆರಿಕಾ, ಜಪಾನ್ ಮತ್ತು ಕೊರಿಯಾ ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ತೀವ್ರ ಪ್ರಮಾಣದಲ್ಲಿದ್ದು, ಈ  ರಾಷ್ಟ್ರಗಳಿಂದ ವಿಮಾನ ಪ್ರಯಾಣದ ಮೇಲೆ ನಿರ್ಬಂಧಗಳ ವಿಧಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ.

ಪರಿಸ್ಥಿತಿ ಹದಗೆಟ್ಟಿದ್ದೇ ಆದರೆ, ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲು ಸರ್ಕಾರ ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ಹೊಂದಿರುವ ದೇಶಗಳಿಂದ ಅಂತರರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳ ವಿಧಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆಂದು ಆರೋಗ್ಯ ಆಯುಕ್ತ ಡಿ ರಂದೀಪ್ ಹೇಳಿದ್ದಾರೆ.

ಡಿಸೆಂಬರ್ 24 ರಿಂದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ರ್ಯಾಂಡಮ್ ಟೆಸ್ಟ್ ಗಳನ್ನು ರಾಜ್ಯ ಸರ್ಕಾರವು ಪ್ರಾರಂಭಿಸಿದೆ. ಡಿಸೆಂಬರ್ 26 ರಂದು 13 ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಎಲ್ಲಾ ಪ್ರಯಾಣಿಕರಲ್ಲಿಯೂ ಸೌಮ್ಯವಾದ ರೋಗಲಕ್ಷಣಗಳು ಕಂಡು ಬಂದಿದೆ. ಎಲ್ಲರನ್ನೂ ಐಸೋಲೇಷನ್' ನಲ್ಲಿ ಇರಿಸಲಾಗಿದೆ. ಸೋಂಕಿತರ ಪರೀಕ್ಷಾ ಮಾದರಿಗಳನ್ನು ಜೀನೋಮ್ ಪರೀಕ್ಷೆಗೆ ಕಳುಹಿಸಲಾಗಿದೆ. ಶನಿವಾರ ವೈದ್ಯಕೀಯ ವರದಿಗಳು ಬರುವ ಸಾಧ್ಯತೆಗಳಿವೆ.  ಅಲ್ಲಿಯವರೆಗೂ ಪ್ರಯಾಣಿಕರು ಪ್ರತ್ಯೇಕವಾಗಿರಬೇಕಿದೆ ಎಂದು ತಿಳಿಸಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅವರು ಮಾತನಾಡಿ,  ಜೀನೋಮಿಕ್ ಸೀಕ್ವೆನ್ಸಿಂಗ್ ವರದಿಗಳು ಬಂದ ನಂತರವೇ ಪ್ರಯಾಣಿಕರು ಹೆಚ್ಚು ಹರಡುವ BF.7 ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆಯೇ, ಇಲ್ಲವೇ ಎಂಬುದು ತಿಳಿದುಬರಲಿದೆ ಎಂದಿದ್ದಾರೆ.

ಮಂಗಳವಾರದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್‌ಗಳನ್ನು ಪ್ರಾರಂಭಿಸಲಾಗಿದೆ ಮತ್ತು ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರ ರೋಗಲಕ್ಷಣಗಳ ತಪಾಸಣೆ ನಡೆಯುತ್ತಿರುವುದರಿಂದ, ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಆಯುಕ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com