ಈಶ್ವರ ಖಂಡ್ರೆ ಆಯ್ಕೆ ಎತ್ತಿಹಿಡಿದ ಹೈಕೋರ್ಟ್: ಪರಾಜಿತ ಅಭ್ಯರ್ಥಿ ಸಲ್ಲಿಸಿದ್ದ ಅರ್ಜಿ ವಜಾ
ಬಿಜೆಪಿಯ ಪರಾಜಿತ ಅಭ್ಯರ್ಥಿ ಭಾಲ್ಕಿ ತಾಲ್ಲೂಕಿನ ಕೇಸರ ಜಾವಳಗಾ ಗ್ರಾಮದ ಡಿ.ಕೆ.ಸಿದ್ರಾಮ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.
Published: 08th January 2022 10:21 AM | Last Updated: 08th January 2022 01:54 PM | A+A A-

ಈಶ್ವರ ಖಂಡ್ರೆ
ಬೆಂಗಳೂರು: ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರ ಆಯ್ಕೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಈ ಕುರಿತಂತೆ ಬಿಜೆಪಿಯ ಪರಾಜಿತ ಅಭ್ಯರ್ಥಿ ಭಾಲ್ಕಿ ತಾಲ್ಲೂಕಿನ ಕೇಸರ ಜಾವಳಗಾ ಗ್ರಾಮದ ಡಿ.ಕೆ.ಸಿದ್ರಾಮ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.
‘ಈಶ್ವರ ಖಂಡ್ರೆ ಚುನಾವಣೆಯಲ್ಲಿ ಭಾರಿ ಅಕ್ರಮಗಳನ್ನು ಎಸಗಿದ್ದಾರೆ. ಆದ್ದರಿಂದ, ಪ್ರಜಾಪ್ರತಿನಿಧಿ ಕಾಯ್ದೆ–1951ರ ಕಲಂ 123ರ ಅನುಸಾರ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ನನ್ನನ್ನು ವಿಜೇತ ಎಂದು ಘೋಷಿಸಬೇಕು’ ಎಂದು ಸಿದ್ರಾಮ ಅವರು ಈ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ, ‘ಅರ್ಜಿದಾರರ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಂದ ಅಸಹಕಾರ; ಹೈಕೋರ್ಟ್ ಅಸಮಾಧಾನ; ಕಠಿಣ ಕ್ರಮದ ಎಚ್ಚರಿಕೆ
‘ನಾಮಪತ್ರ ಘೋಷಣೆ ವೇಳೆ ಆಸ್ತಿ ವಿವರ ಘೋಷಿಸುವಾಗ ಸರಿಯಾದ ಮಾಹಿತಿ ನೀಡಿಲ್ಲ, ಸಚಿವರೂ ಆಗಿದ್ದ ಈಶ್ವರ ಖಂಡ್ರೆ ಹಲವಾರು ಸ್ಥಿರ ಮತ್ತು ಚರಾಸ್ತಿಗಳ ಮಾಲೀಕರು. ಶಾಸಕರ ವೇತನ ಪಡೆಯುತ್ತಿದ್ದವರು. ಆದರೆ, ತೆರಿಗೆ ಪಾವತಿದಾರ ಅಲ್ಲ ಎಂದು ಹೇಳಿಕೊಂಡಿದ್ದಾರೆ, ಮತದಾನ ನಡೆದ ಸಂಜೆ ಆರು ಗಂಟೆಗೆ ಭಾಲ್ಕಿ ಮತಕ್ಷೇತ್ರದಿಂದ ಹೊರಟು ಬೀದರ್ ಜಿಲ್ಲಾ ಖಜಾನೆಗೆ ಸೇರಬೇಕಾದ ಮತ ಪೆಟ್ಟಿಗೆಗಳು 17 ಗಂಟೆ ತಡವಾಗಿ ಖಜಾನೆ ಸ್ಥಳ ತಲುಪಿವೆ ಮತ್ತು ಚುನಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದೆ' ಎಂಬ ಗುರುತರ ಆರೋಪಗಳನ್ನು ಅರ್ಜಿದಾರರು ಮಾಡಿದ್ದರು.