ಕೇಂದ್ರದ ವಸತಿ ಯೋಜನೆಯಿಂದ ಕರ್ನಾಟಕದ 18 ಲಕ್ಷ ಜನರಿಗೆ ಪ್ರಯೋಜನ!
ಕರ್ನಾಟಕದಿಂದ ವಸತಿ ಇಲಾಖೆಯ ಅಂಕಿಅಂಶಗಳನ್ನು ಸಿಂಕ್ರೊನೈಸ್ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಒಟ್ಟಾರೆಯಾಗಿ, ಮನೆ ಇಲ್ಲದ 18.78 ಲಕ್ಷ ಮತ್ತು ವಸತಿ ನಿವೇಶನ ಇಲ್ಲದ 6.61 ಲಕ್ಷ ಜನರಿಗೆ ಪರಿಹಾರ ಸಿಗಲಿದೆ.
Published: 17th January 2022 01:06 PM | Last Updated: 17th January 2022 01:43 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕದಿಂದ ವಸತಿ ಇಲಾಖೆಯ ಅಂಕಿಅಂಶಗಳನ್ನು ಸಿಂಕ್ರೊನೈಸ್ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಒಟ್ಟಾರೆಯಾಗಿ, ಮನೆ ಇಲ್ಲದ 18.78 ಲಕ್ಷ ಮತ್ತು ವಸತಿ ನಿವೇಶನ ಇಲ್ಲದ 6.61 ಲಕ್ಷ ಜನರಿಗೆ ಪರಿಹಾರ ಸಿಗಲಿದೆ. ಆವಾಸ್-ಪ್ಲಸ್ ಸಾಫ್ಟ್ವೇರ್ನಲ್ಲಿ ಡೇಟಾವನ್ನು ಅಪ್ಲೋಡ್ ಮಾಡದ ಕಾರಣ ಕೇಂದ್ರ ಸರ್ಕಾರ ಯೋಜನೆಯನ್ನು ಬಾಕಿ ಇರಿಸಿತ್ತು.
ವಸತಿ ಸಚಿವ ವಿ.ಸೋಮಣ್ಣ ಅವರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಜನವರಿ 31ರೊಳಗೆ ಪಟ್ಟಿಯನ್ನು ಕಳುಹಿಸುವಂತೆ ಈಗಾಗಲೇ ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದಾರೆ. ಕಾರ್ಯಕ್ರಮದಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1,500-2500 ಮನೆಗಳು ಸಿಗಲಿವೆ. ಮುಂದಿನ ವರ್ಷದಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ (PMAY-G) ಅಡಿಯಲ್ಲಿ ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು, ಫಲಾನುಭವಿಗಳಿಗೆ 1.2 ಲಕ್ಷ ರೂ. 60 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಹಂಚಿಕೊಳ್ಳಲಿದ್ದು, ಉಳಿದ ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ. 1.2 ಲಕ್ಷ ರೂ.ಗಳಲ್ಲದೆ, ಶೌಚಾಲಯ ನಿರ್ಮಿಸಿಕೊಳ್ಳಲು ಫಲಾನುಭವಿಗಳಿಗೆ ರೂ.30,000 ಮತ್ತು ಎಂಎನ್ಆರ್ಇಜಿಎ ಅಡಿಯಲ್ಲಿ ರೂ.10,000 ನೀಡಲಾಗುವುದು. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದು, ಇದು ರಾಜ್ಯದ ಜನತೆಗೆ ಸಂಕ್ರಾಂತಿ ಉಡುಗೊರೆ ಎಂದು ಬಣ್ಣಿಸಿದ್ದಾರೆ. ಪಿಎಂಎವೈ-ಜಿ ಅಡಿಯಲ್ಲಿ ಕರ್ನಾಟಕದ ಬಡ ಗ್ರಾಮೀಣ ಜನರಿಗೆ 18,78,671 ವಸತಿ ರಹಿತ ಮತ್ತು 6,61,535 ನಿವೇಶನ ರಹಿತ ಮನೆಗಳ ಸಿಂಕ್ರೊನೈಸೇಶನ್ ಅನ್ನು ಅನುಮೋದಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟಿಸಿದ್ದಾರೆ.
ಇದನ್ನೂ ಓದಿ: ರೇರಾ ಕಾಯ್ದೆ ಅಸಮರ್ಪಕ ಅನುಷ್ಠಾನ: ಮನೆ ಖರೀದಿದಾರರಿಂದ ವರ್ಚುವಲ್ ಮೂಲಕ ಪ್ರತಿಭಟನೆ
ಇದಕ್ಕೆ ಉತ್ತರಿಸಿದ ಮೋದಿ, “ರಾಷ್ಟ್ರೀಯ ಪ್ರಗತಿಗೆ ಅಭೂತಪೂರ್ವ ಕೊಡುಗೆಗಳನ್ನು ನೀಡುತ್ತಿರುವ ಕರ್ನಾಟಕದ ನನ್ನ ಸಹೋದರಿಯರು ಮತ್ತು ಸಹೋದರರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತವೆ ಎಂದು ಟ್ವೀಟ್ ಮಾಡಿದ್ದರು.
ವಸತಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್ ಮಾತನಾಡಿ, ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ ಸಮೀಕ್ಷೆ ನಡೆಸಿ 18 ಲಕ್ಷಕ್ಕೂ ಅಧಿಕ ಮನೆಗಳಿಲ್ಲದ ಕುಟುಂಬಗಳನ್ನು ಗುರುತಿಸಲಾಗಿದೆ. 'ನಾವು ಅವರ ಡೇಟಾವನ್ನು ತೆಗೆದುಕೊಂಡು ಅದನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ನಲ್ಲಿ ಅಪ್ಲೋಡ್ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಅದನ್ನು ಆವಾಸ್-ಪ್ಲಸ್ ಸಾಫ್ಟ್ವೇರ್ನಲ್ಲಿ ಬಯಸಿದೆ. ಇದೀಗ ಸಿಂಕ್ರೊನೈಸೇಶನ್ಗೆ ಅನುಮೋದನೆ ನೀಡಿದ್ದು, ಹಂತ ಹಂತವಾಗಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗುವುದು. ಪ್ರತಿ ವರ್ಷ ನಿರ್ದಿಷ್ಟ ಸಂಖ್ಯೆಯ ಫಲಾನುಭವಿಗಳಿಗೆ ಹಣ ಸಿಗಲಿದೆ ಎಂದು ವಿವರಿಸಿದರು.