ಗದಗ: ಹಿಂಸಾಚಾರಕ್ಕೊಳಗಾದವರಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹ
ಗದಗ ಜಿಲ್ಲೆ ನರಗುಂದದಲ್ಲಿ ಥಳಿತಕ್ಕೊಳಕ್ಕಾಗಿ ಮೃತಪಟ್ಟ ಸಮೀರ್ ಶಹಾಪುರ ಘಟನೆ ಬಳಿಕ ಅಲ್ಲಿನ ಮುಸ್ಲಿಮರು ಭಯದ ವಾತಾವರಣದಲ್ಲಿ ಬದುಕುವಂತಾಗಿದ್ದು, ಅವರಿಗೆ ಭದ್ರತೆ ಕಲ್ಪಿಸಬೇಕು.
Published: 29th January 2022 10:54 AM | Last Updated: 29th January 2022 01:46 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಗದಗ ಜಿಲ್ಲೆ ನರಗುಂದದಲ್ಲಿ ಥಳಿತಕ್ಕೊಳಕ್ಕಾಗಿ ಮೃತಪಟ್ಟ ಸಮೀರ್ ಶಹಾಪುರ ಘಟನೆ ಬಳಿಕ ಅಲ್ಲಿನ ಮುಸ್ಲಿಮರು ಭಯದ ವಾತಾವರಣದಲ್ಲಿ ಬದುಕುವಂತಾಗಿದ್ದು, ಅವರಿಗೆ ಭದ್ರತೆ ಕಲ್ಪಿಸಬೇಕು ಎಂದು ಬಹುತ್ವ ಕರ್ನಾಟಕ ಸತ್ಯಶೋಧನಾ ತಂಡದ ಸದಸ್ಯರು ಆಗ್ರಹಿಸಿದ್ದಾರೆ.
ನರಗುಂದದ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ಸಾರ್ವಜನಿಕರು ಹೀಗೆ ಎಲ್ಲರಿಂದ ಮಾಹಿತಿ ಸಂಗ್ರಹಿಸಿ ನಾವು ವರದಿ ತಯಾರಿಸಿದ್ದೇವೆ. ಸಮೀರ್ ಹತ್ಯೆ ಮತ್ತು ಅಂದು ನಡೆದ ಶಂಶೀರ್ ಮೇಲಿನ ದಾಳಿಯ ಹಿಂದಿನ ಘಟನೆಗಳ ಬಗ್ಗೆ ನ್ಯಾಯಯುತವಾಗಿ ಮುಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಹಿಂಸಾಚಾರಕ್ಕೆ ಪ್ರಚೋದಿಸುವ ದ್ವೇಷ ಭಾಷಣಗಳನ್ನು ಮಾಡುವವರ ಮೇಲೆ ಪೊಲೀಸರು ಕಠಿಣಕ್ರಮ ಜರುಗಿಸಬೇಕು. ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಸರಣಿ ಸುಗಮಗೊಳಿಸಿದ ಸಂಘಟನೆಗಳ ವಿರುದ್ಧ ತನಿಖೆ ಕೈಗೊಳ್ಳಬೇಕು. ಆಪರಾಧಿಗಳಿಗೆ ರಾಜಕೀಯ ವ್ಯಕ್ತಿಗಳು ರಕ್ಷಣೆ ನೀಡುವುದನ್ನು ನಿಲ್ಲಿಸಬೇಕು. ಸಮೀರ್ ಮತ್ತು ಶಂಶೀರ್ ಕುಟುಂಬಕ್ಕೆ ಪೊಲೀಸರು ರಕ್ಷಣೆ ಒದಗಿಸಬೇಕು.
ನರಗುಂದದಲ್ಲಿ ತನ್ನ ವೃತ್ತಿಯನ್ನು ಪುನರಾರಂಭಿಸಲು ಶಂಶೀರ್ಗೆ ಸ್ಥಳೀಯ ಆಡಳಿತ ವ್ಯವಸ್ಥೆ ನೆರವಾಗಬೇಕು’ ಎಂದರು. ’ಕೂಲಿ ದುಡಿಮೆ ಮೇಲೆ ಅವಲಂಬಿತವಾಗಿದ್ದ ಸಮೀರ್ ಮೃತವಾದ ನಂತರ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳು ಮತ್ತು ಮಹಿಳೆಯರಿಗೆ ಭದ್ರತೆ ಕಲ್ಪಿಸಬೇಕು’ ಎಂದರು.
‘ಅಂದಿನ ಘಟನೆಯಲ್ಲಿ ಭಾಗಿಯಾದ ಆರೋಪ ಹೊತ್ತವರ ಜೊತೆ ಆರ್ಎಸ್ಎಸ್ ಮತ್ತು ಬಜರಂಗದಳದ ಮುಖಂಡರು ನಂಟು ಹೊಂದಿರುವ ಆರೋಪವಿದೆ. ಪೊಲೀಸರು ಬಜರಂಗದಳದ ಸದಸ್ಯರನ್ನೂ ಬಂಧಿಸಿದ್ದಾರೆ. ಆದರೆ, ಈಗಲೂ ಮೃತ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಒದಗಿಸಿಲ್ಲ.
ಇದೆಲ್ಲವನ್ನೂ ನೋಡಿದರೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ನಿಷ್ಕ್ರಿಯತೆಗೆ ಜಾರಿದೆ ಎನ್ನುವುದು ಖಾತ್ರಿಯಾಗುತ್ತಿದೆ. ಕಾನೂನು ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಅವಹೇಳನ ಮಾಡುವ ಸಂಘಪರಿವಾರಕ್ಕೆ ಉತ್ತೇಜನ ನೀಡುವಂತಿದೆ’ ಎಂದು ಆರೋಪಿಸಿದರು.