ಜನವರಿ 31ರಿಂದ ನೈಟ್ ಕರ್ಫ್ಯೂ ರದ್ದು, ಶಾಲೆಗಳು ಪುನಾರಂಭ: ರಾಜ್ಯದ ಜನತೆಗೆ ಸಿಹಿಸುದ್ದಿ
ಕೋವಿಡ್ ಮೂರನೇ ಅಲೆಯ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ಹಾಕಿದ್ದ ರಾಜ್ಯ ಸರ್ಕಾರ ಇದೀಗ ಕೊರೋನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.
Published: 29th January 2022 02:07 PM | Last Updated: 29th January 2022 03:07 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯಾದಾದ್ಯಂತ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂವನ್ನು ಜನವರಿ 31 ರಿಂದ ತೆಗೆದುಹಾಕಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಕೋವಿಡ್ ನಿರ್ಬಂಧಗಳ ಸಡಿಲಿಕೆ ಬಗ್ಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋಟೆಲ್, ರೆಸ್ಟೋರೆಂಟ್, ಪಬ್ ಬಾರ್ಗಳಿಗೆ ಸಂಪೂರ್ಣವಾಗಿ ತೆರೆಯಲು ಅನುಮತಿ ನೀಡಲಾಗಿದೆ. ವಿವಾಹ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 300 ಜನರಿಗೆ ಹಾಗೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಅವಕಾಶ ಎಂದು ಹೇಳಿದರು.
ಇನ್ನು ಕಚೇರಿಗಳು ಸಹ ತೆರೆಯಲು ಅನುಮತಿ ನೀಡಲಾಗಿದೆ. ದೇವಾಲಯಗಳಲ್ಲಿ ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ ಅವಕಾಶ ನೀಡಲಾಗುವುದು. ಶೇ. 50ರ ಸಾಮರ್ಥ್ಯದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುವುದು. ಜಾತ್ರೆ, ಧರಣಿ, ರ್ಯಾಲಿ, ಪ್ರತಿಭಟನೆಗಳಿಗೆ ನಿರ್ಬಂಧ ಹೇರಲಾಗಿದೆ. ಜಿಮ್, ಈಜುಕೊಳ, ಸ್ಪೋಟ್ಸ್ ಕಾಂಪ್ಲೆಕ್ಸ್ ಮತ್ತು ಕ್ರೀಡಾಂಗಣಗಳಲ್ಲಿ 5೦%ರ ನಿಯಮ ಮುಂದುವರೆಯಲಿದೆ.
ಸಿನೆಮಾ, ಮಲ್ಟಿಪ್ಲೆಕ್ಸ್, ಥಿಯೇಟರ್ ಗಳು, ರಂಗಮಂದಿರಗಳು, ಆಡಿಟೋರಿಯಂ ಗಳು ಮತ್ತು ಇತರ ಸ್ಥಳಗಳಲ್ಲಿ ಶೇ. 50ರ ಆಸನ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. 2ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞರ ಮಾಹಿತಿ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅವರು ಹೇಳಿದ ಪ್ರಕಾರ ಈ ಆದೇಶವನ್ನು ಹೊರಡಿಸಿದ್ದೇವೆ ಎಂದು ಹೇಳಿದರು.
ಶಾಲೆಗಳು ಪುನಾರಂಭ: ಬೆಂಗಳೂರು ಸೇರಿದಂತೆ ಕೋವಿಡ್ ಹೆಚ್ಚಳವಿದ್ದ ಜಿಲ್ಲೆಗಳಲ್ಲಿ ಸ್ಥಗಿತಗೊಂಡಿದ್ದ ಶಾಲೆಗಳ ಭೌತಿಕ ತರಗತಿಗಳು ಕೂಡ ಸೋಮವಾರ (ಜ.31)ದಂದು ಪುನಾರಂಭವಾಗಲಿದೆ. ಒಂದು ವೇಳೆ ಶಾಲೆಯ ಯಾವ ತರಗತಿಯ ಮಕ್ಕಳಿಗೆ ಕೋವಿಡ್ ಬಂದಲ್ಲಿ ಆ ತರಗತಿ ಮಾತ್ರ ಮುಚ್ಚಲಾಗುತ್ತದೆ. ಆ ತರಗತಿಯ ಎಲ್ಲಾ ಮಕ್ಕಳಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ,ಆಯಾ ನಿರ್ದಿಷ್ಟ ತರಗತಿಯನ್ನು ಆನ್ಲೈನ್ ಮೋಡ್ಗೆ ವರ್ಗಾಯಿಸಲಾಗುತ್ತದೆ. ಆದಾಗ್ಯೂ, ಒಟ್ಟಾರೆಯಾಗಿ ಶಾಲೆಯು ಆಫ್ಲೈನ್ ತರಗತಿಗಳನ್ನು ನಡೆಸುತ್ತಲೇ ಇರುತ್ತದೆ.
ಶಾಲೆಗಳು ಆರಂಭವಾದ ನಂತರ ಕೋವಿಡ್ ಪಾಸಿಟಿವ್ ಕಂಡುಬಂದರೆ ಶಾಲೆಗಳನ್ನು ಮುಚ್ಚುವ ತೀರ್ಮಾನ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ.
ಸಭೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ:
1. ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.
2. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. 2ಕ್ಕೆ ಇಳಿದಿದೆ.
3. ಜನವರಿ 31 ರಿಂದ ರಾತ್ರಿ ಕರ್ಫ್ಯೂ ರದ್ದು ಪಡಿಸಲು ನಿರ್ಧರಿಸಲಾಗಿದೆ.
4. ಬೆಂಗಳೂರು ನಗರದಲ್ಲಿ ಜನವರಿ 31 ರಿಂದ ಶಾಲೆ, ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಲಾಯಿತು.
5. ಮೆಟ್ರೋ ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ತಮ್ಮ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ನಡೆಸಬಹುದು.
6. ಪಬ್ ಗಳು, ಕ್ಲಬ್ ಗಳು, ರೆಸ್ಟೋರೆಂಟ್ ಗಳು, ಬಾರ್, ಹೋಟೆಲ್ ಗಳಲ್ಲಿ ಶೇ. 50 ಆಸನ ಸಾಮರ್ಥ್ಯದಡಿ ಕಾರ್ಯ ನಿರ್ವಹಿಸುವ ನಿರ್ಬಂಧವನ್ನು ಹಿಂಪಡೆಯಲಾಗುವುದು.
7. ಸಿನೆಮಾ, ಮಲ್ಟಿಪ್ಲೆಕ್ಸ್, ಥಿಯೇಟರ್ ಗಳು, ರಂಗಮಂದಿರಗಳು, ಆಡಿಟೋರಿಯಂ ಗಳು ಮತ್ತು ಇಂತರ ಸ್ಥಳಗಳಲ್ಲಿ ಶೇ. 50 ರ ಆಸನ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ.
8. ವಿವಾಹ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 300 ಜನರಿಗೆ ಹಾಗೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಅವಕಾಶ.
9. ಸರ್ಕಾರದ ಸಚಿವಾಲಯದಲ್ಲಿ ಶೇ. 50 ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುವುದನ್ನು ರದ್ದುಪಡಿಸಿ ಶೇ. ನೂರರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುವುದು.
10. ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ ಅವಕಾಶ ನೀಡಲಾಗುವುದು. ಶೇ. 50ರ ಸಾಮರ್ಥ್ಯದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುವುದು.
11. ಎಲ್ಲ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ರ್ಯಾಲಿ, ಧರಣಿ, ಸಮಾವೇಶ, ಪ್ರತಿಭಟನೆಗಳಿಗೆ ಅವಕಾಶವಿಲ್ಲ.
12. ಸ್ವಿಮ್ಮಿಂಗ್ ಪೂಲ್, ಜಿಮ್ ಗಳು ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು.
13. ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಕ್ರೀಡಾಂಗಣಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು.
14. ಕೇರಳ, ಮಹಾರಾಷ್ಟ್ರ, ಗೋವಾ ಗಡಿಗಳಲ್ಲಿ ತೀವ್ರ ನಿಗಾ ವಹಿಸುವುದು.
15. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಶೇ. 25 ರಷ್ಟು ಹಾಸಿಗೆಗಳನ್ನು ನಿಗದಿಪಡಿಸಲು ನಿರ್ಧರಿಸಲಾಯಿತು.
16. ಕೋವಿಡ್ ಹೊರತು ಪಡಿಸಿ, ಇತರ ಚಿಕಿತ್ಸೆಗಳನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.