ಉಡುಪಿ: ಉಡುಪಿ ಜಿಲ್ಲೆಯ ಬೈಂದೂರಿನ ಹೆನುಬೇರು ಬಳಿ ಸುಟ್ಟು ಕರಕಲಾದ ಕಾರಿನಲ್ಲಿ ಸಂಪೂರ್ಣ ಸುಟ್ಟುಹೋದ ಶವವೊಂದು ಪತ್ತೆಯಾದ ನಂತರ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಕಾರಿನಲ್ಲಿ ಶವ ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಅದು ಪುರುಷರದ್ದೇ ಅಥವಾ ಮಹಿಳೆಯ ಮೃತದೇಹವೇ ಎಂಬುದನ್ನು ಗುರುವಾರ ಬೆಳಗ್ಗೆಯವರೆಗೂ ಗುರುತಿಸಲು ಸಾಧ್ಯವಾಗಿರಲಿಲ್ಲ. ಆದರೆ, ನಂತರ ಪೊಲೀಸರು ಇದು ಹತ್ಯೆಯಾದ ಪುರುಷನ ಶವ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಾರ್ಕಳದ ಮಾಳಾ ನಿವಾಸಿ ಸದಾನಂದ ಶೇರಿಗಾರ್ (54) ಮತ್ತು ಹಿರ್ಗಾನ ನಿವಾಸಿ ಶಿಲ್ಪಾ (40) ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸದಾನಂದ ಪರವಾನಗಿ ಪಡೆದ ಸರ್ವೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ. ಕೆಲವು ದಿನಗಳ ಹಿಂದೆ, ಭೂ ದಾಖಲೆಗಳನ್ನು ನಕಲಿ ಮಾಡಿದ್ದ ಸದಾನಂದ, ರಸ್ತೆಗೆ ಹೊಂದಿಕೊಂಡಂತಿರುವ ಆಸ್ತಿಯ ರೇಖಾಚಿತ್ರವನ್ನು ಸಿದ್ಧಪಡಿಸಿದರು. ವಾಸ್ತವದಲ್ಲಿ ಹೇಳಲಾದ ಜಮೀನಿಗೆ ರಸ್ತೆಯೇ ಇರಲಿಲ್ಲ. ಈ ಸಂಬಂಧ ದೂರಿನ ಆಧಾರದ ಮೇಲೆ ಕಾರ್ಕಳ ಪೊಲೀಸರು ಸದಾನಂದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಕೋರ್ಟ್ ನಲ್ಲಿ ಚಾರ್ಚ್ ಶೀಟ್ ಕೂಡಾ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡಾ ನೀಡಲಾಗಿತ್ತು.
ಇತ್ತೀಚಿಗೆ ಕೋರ್ಟ್ ವಾರೆಂಟ್ ಕೂಡಾ ಕಳುಹಿಸಿತ್ತು. ಬಂಧನದ ಭೀತಿಯಲ್ಲಿದ್ದ ಸದಾನಂದ, ಕಾರೊಂದರಲ್ಲಿ ತಾನಾಗಿಯೇ ಕೊಲೆಯಾಗುವ ನಾಟಕ ಮಾಡಲು ಪ್ಲಾನ್ ಮಾಡಿದ್ದಾನೆ. ಇದಕ್ಕಾಗಿ ಸರ್ಕಾರಿ ಕಚೇರಿಯೊಂದರಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ತನ್ನ ಸಹಾಯಕಿ ಶಿಲ್ಪಾ ಅವರ ಸಹಾಯ ಪಡೆದಿದ್ದಾನೆ. ತನ್ನ ವಯಸ್ಸಿನ ವ್ಯಕ್ತಿಯನ್ನು ಆರಿಸಿ ತನ್ನ ಕಾರಿನಲ್ಲಿ ಬೈಂದೂರು ತನಕ ಕರೆದುಕೊಂಡು ಹೋಗಿದ್ದಾನೆ. ಇನ್ನಿಬ್ಬರು ಸದಾನಂದ್ ಮತ್ತು ಶಿಲ್ಪಾ ಅವರಿಗೆ ಸಹಾಯ ಮಾಡಿದ್ದಾರೆ. ಮೃತಪಟ್ಟವನಿಗೆ ನಿದ್ರೆ ಬರಿಸುವ ಮಾತ್ರೆಗಳೊಂದಿಗೆ ಮದ್ಯ ಕುಡಿಸಲಾಗಿತ್ತು.ಇದಾದ ನಂತರ, ಇದನ್ನು ಸದಾನಂದನ ಕೊಲೆ ಎಂದು ಬಿಂಬಿಸಲು ಕಾರಿನೊಂದಿಗೆ ಬೆಂಕಿ ಹಚ್ಚಲಾಗಿದೆ. ಕಾರ್ಕಳ ಪೊಲೀಸರಿಂದ ಬಂಧನದಿಂದ ತಪ್ಪಿಸಿಕೊಳ್ಳಲು ಸದಾನಂದ ಈ ಎಲ್ಲಾ ನಾಟಕ ಮಾಡಿದ್ದಾನೆ.
ಸದಾನಂದ ಅವರ ಈ ಭೀಕರ ಹತ್ಯೆಯ ಕೃತ್ಯದ ತನಿಖೆ ನಡೆಸಿದ ಪೊಲೀಸರು, ಹತ್ಯೆಗೆ ನಿಜವಾದ ಉದ್ದೇಶವನ್ನು ಪತ್ತೆ ಹಚ್ಚಿದ್ದಾರೆ. ಕಾರ್ಕಳ ಮೂಲದ ವ್ಯಕ್ತಿಯೊಬ್ಬರು ಕಾರಿನಲ್ಲಿ ಸುಟ್ಟ ಕರಕಲಾಗಿದ್ದಾರೆ ಎಂದು ಹೇಳಲಾಗಿದ್ದರೂ ಪೊಲೀಸರು ಇನ್ನೂ ಬಲಿಯಾದವರ ಗುರುತಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Advertisement