ಬೆಂಗಳೂರು: ಹುಟ್ಟುಹಬ್ಬ ಆಚರಿಸಲು ಸ್ನೇಹಿತರ ಜೊತೆ ತೆರಳಿದ್ದ ಯುವಕನ ಬರ್ಬರ ಹತ್ಯೆ

ಹುಟ್ಟುಹಬ್ಬದ ಆಚರಣೆಗಾಗಿ ಸ್ನೇಹಿತರ ಜತೆಗೆ ತೆರಳಿದ್ದ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹುಟ್ಟುಹಬ್ಬದ ಆಚರಣೆಗಾಗಿ ಸ್ನೇಹಿತರ ಜತೆಗೆ ತೆರಳಿದ್ದ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆಂಗೇರಿ ಸಮೀಪದ ಎಚ್‌.ಗೊಲ್ಲಹಳ್ಳಿ ನಿವಾಸಿ ಹೇಮಂತ್‌ ಕುಮಾರ್‌  ಮೃತ ಯುವಕ. ಭಾನುವಾರ ಬೆಳಗ್ಗೆ 8ರ ಸುಮಾರಿಗೆ ಕೋನಸಂದ್ರ ಕೆರೆ ಸಮೀಪದ ನೈಸ್‌ ರಸ್ತೆಯ ಅಂಡರ್‌ ಪಾಸ್‌ನಲ್ಲಿ ಹೇಮಂತ್‌ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಗುರುತು ಸಿಗದ ಹಾಗೆ ಕಲ್ಲಿನಿಂದ ಮುಖ ಜಜ್ಜಿ ಶವ ಎಸೆದು ಪರಾರಿಯಾಗಿದ್ದಾರೆ.

ಶನಿವಾರ ಹೇಮಂತ್‌ ಹುಟ್ಟುಹಬ್ಬವಿದ್ದ ಹಿನ್ನೆಲೆಯಲ್ಲಿ ಸ್ನೇಹಿತರ ಜೊತೆ ತೆರಳಿದ್ದ.ರಾತ್ರಿ 8ರ ಸುಮಾರಿಗೆ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದ. ರಾತ್ರಿ 10 ಗಂಟೆಯಾದರೂ ಹೇಮಂತ್‌ ಮನೆಗೆ ಬಾರದಿದ್ದರಿಂದ ಪೋಷಕರು ಕರೆ ಮಾಡಿದಾಗ ಹೇಮಂತ್‌ ಮೊಬೈಲ್‌ ಸ್ವಿಚ್‌ ಆಫ್‌ ಬಂದಿದೆ. ಇದರಿಂದ ಗಾಬರಿಗೊಂಡ ಪೋಷಕರು ಆತನ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ನಡುವೆ ದುಷ್ಕರ್ಮಿಗಳು ಹೇಮಂತ್‌ನನ್ನು ಮಾರಕಾಸ್ತ್ರಗಳಿಂದ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ.

ಹತ್ಯೆ ಬಳಿಕ ದುಷ್ಕರ್ಮಿಗಳು ಕೋನಸಂದ್ರ ಕೆರೆ ಸಮೀಪದ ನೈಸ್‌ ರಸ್ತೆಯ ಅಂಡರ್‌ ಪಾಸ್‌ನಲ್ಲಿ ಶವ ಎಸೆದಿದ್ದಾರೆ. ಬಳಿಕ ಶವದ ಗುರುತು ಸಿಗದ ಹಾಗೆ ಕಲ್ಲಿನಿಂದ ಮುಖವನ್ನು ಜಜ್ಜಿದ್ದಾರೆ. ಭಾನುವಾರ ಬೆಳಗ್ಗೆ 8ರ ಸುಮಾರಿಗೆ ದಾರಿಹೋಕರು ಅಪರಿಚಿತ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ದೌಡಾಯಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಇದೇ ವೇಳೆಗೆ ಹೇಮಂತ್‌ ಪೋಷಕರು ಸ್ಥಳಕ್ಕೆ ಬಂದು ಶವದ ಕೈ ಮೇಲಿನ ತ್ರಿಶೂಲ ಮತ್ತು ಡಮರುಗ ಟ್ಯಾಟು ನೋಡಿ, ಇದು ಹೇಮಂತ್‌ ಶವ ಎಂದು ಗುರುತು ಪತ್ತೆಹಚ್ಚಿದ್ದಾರೆ. ದ್ವೇಷದ ಹಿನ್ನೆಲೆಯಲ್ಲಿ ಪರಿಚಿತರೇ ಹೇಮಂತ್‌ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com