ಮಡಿಕೇರಿ: ಕಾವೇರಿ ಮಾತೆ ಹಾಗೂ ಕೊಡವ ಸಮುದಾಯದ ಹೆಣ್ಣುಮಕ್ಕಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ದುಷ್ಕರ್ಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಕೆ ದಿವಿನ್ ದೇವಯ್ಯ ವಿರಾಜಪೇಟೆಯ ಪಲಂಗಾಲ ನಿವಾಸಿಯಾಗಿದ್ದು ಅದೇ ಸಮುದಾಯಕ್ಕೆ ಸೇರಿದವನು. ಮುಸ್ಲಿಂ ಹುಡುಗನ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಪೋಸ್ಟ್ ಮಾಡಿದ್ದನು.
ಜುಲೈ 3ರಂದು ಇನ್ಸ್ಟಾಗ್ರಾಮ್ನಲ್ಲಿ ಕಾವೇರಿ ನದಿ ಮತ್ತು ಕೊಡವ ಹುಡುಗಿಯರನ್ನು ಅವಮಾನಿಸುವ ಕಾಮೆಂಟ್ ಅನ್ನು ಮುಸ್ಲಿಂ ಹುಡುಗನೆಂದು ಶಂಕಿಸಲಾದ ಅಪರಿಚಿತ ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಕೊಡವ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪೋಸ್ಟ್ ಕೋಮು ಸೌಹಾರ್ದತೆಗೆ ಧಕ್ಕೆ ತಂದಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜುಲೈ 29ರಂದು ಸಮುದಾಯದ ಮುಖಂಡರು ಬೃಹತ್ ಪ್ರತಿಭಟನೆಗೆ ಯೋಜಿಸಿದ್ದರು. ವಿವಿಧ ಕೊಡವ ಸಮಾಜದವರು ನೀಡಿದ ದೂರಿನ ಮೇರೆಗೆ ಕೊಡಗು ಪೊಲೀಸರು ತನಿಖೆ ಕೈಗೊಂಡಿದ್ದರು. ಪೊಲೀಸರು ಇನ್ಸ್ಟಾಗ್ರಾಮ್ ಅನ್ನು ಪರೀಕ್ಷಿಸಿ ಆರೋಪಿಯ ಮಾಹಿತಿ ಪಡೆದು ಐಪಿ ವಿಳಾಸವನ್ನು ಪತ್ತೆಹಚ್ಚಿದರು.
ಆರೋಪಿ ದಿವಿನ್ ದೇವಯ್ಯ ನಾಸ್ತಿಕನಾಗಿದ್ದು, ಮೋಜಿಗಾಗಿ ನಕಲಿ ಇನ್ಸ್ಟಾಗ್ರಾಮ್ ಖಾತೆಯನ್ನು ಬಳಸಿ ಕಾಮೆಂಟ್ ಹಾಕಿದ್ದಾನೆ ಎಂದು ಮೂಲಗಳು ಖಚಿತಪಡಿಸಿವೆ. ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಸೆಕ್ಷನ್ 153 ಎ, 295ಎ ಮತ್ತು ಐಪಿಸಿ 505 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement