ಉಡುಪಿ ಮೂಲದ ಹಿರಿಯ ಪ್ರಗತಿಪರ ಚಿಂತಕ ಜಿ.ರಾಜಶೇಖರ್ ನಿಧನ

ಹಿರಿಯ ಚಿಂತಕ, ಪ್ರಖರ ವಿಮರ್ಶಕ ಜಿ.ರಾಜಶೇಖರ್ ಅವರು ವಯೋಸಹಜ ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಜಿ. ರಾಜಶೇಖರ್
ಜಿ. ರಾಜಶೇಖರ್

ಉಡುಪಿ: ಹಿರಿಯ ಚಿಂತಕ, ಪ್ರಖರ ವಿಮರ್ಶಕ ಜಿ.ರಾಜಶೇಖರ್ ಅವರು ವಯೋಸಹಜ ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ ಪ್ರೋಗ್ರೆಸ್ಸಿವ್ ಸುಪ್ರಾ-ನ್ಯೂಕ್ಲಿಯರ್ ಪಾಲ್ಸಿ (ಪಿಎಸ್‌ಪಿ) ಎಂಬ ಅಪರೂಪದ ನರಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಕೊಳಂಬೆಯಲ್ಲಿರುವ ತಮ್ಮ ನಿವಾಸದಲ್ಲಿ ವಾಸವಾಗಿದ್ದ ರಾಜಶೇಖರ್ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ರಾತ್ರಿ 11.15ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಜಶೇಖರ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಜಿ. ರಾಜಶೇಖರ ಅವರು 1946ರಲ್ಲಿ ಜನಿಸಿದರು. ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ ನಡೆಸಿ ಕೆಲಕಾಲ ಶಿಕ್ಷಕರಾಗಿ ಕೆಲಸಮಾಡಿ ಎಲ್ಐಸಿಯಲ್ಲಿ ಉದ್ಯೋಗಸ್ಥರಾದರು. ಜಿ. ರಾಜಶೇಖರ ಅವರು ಸಾಹಿತ್ಯ-ಸಮಾಜ-ರಾಜಕಾರಣ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ಬರೆಯತ್ತ ಬಂದಿದ್ದಾರೆ.

ಅನೇಕ ಪ್ರಗತಿಪರ ಹೋರಾಟ ಸಂಘಟಿಸಿದ್ದ ಅವರು ಕರಾವಳಿಯಲ್ಲಿ ಕೋಮುವಾದದ ವಿರುದ್ಧ ಧ್ವನಿಯೆತ್ತಿದ್ದ ಪ್ರಮುಖ ನಾಯಕರೆನಿಸಿಕೊಂಡಿದ್ದರು. ಅನ್ಯಾಯ, ದೌರ್ಜನ್ಯಗಳ ವಿರುದ್ಧ ಚಳುವಳಿ ರೂಪಿಸಿ ಮುಂಚೂಣಿಯಲ್ಲಿ ಜನರನ್ನು ಸಂಘಟಿಸುತ್ತಿದ್ದರು.

ರಾಜಶೇಖರ್ ಕೋಮುವಾದಿ ಶಕ್ತಿಗಳ ವಿರುದ್ಧ ಸೆಟೆದು ನಿಂತಿದ್ದರು. ಅವರು ದೀರ್ಘಕಾಲದವರೆಗೆ ಜನಪರ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ಆದರೆ ಅವರ ವಿಶೇಷತೆ ಎಂದರೆ ಅವರು ಬೀದಿಗಳಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಭಾಗವಹಿಸಲು ಆದ್ಯತೆ ನೀಡಿದರೇ ಹೊರತು ಹೆಸರು ಖ್ಯಾತಿ ಪಡೆಯಲು ನಿರಾಕರಿಸಿದರು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ 2020-21ನೇ ಸಾಲಿನಲ್ಲಿ ‘ಮಾನವ ರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ. 2016 ರಲ್ಲಿ ಪ್ರಕಟವಾದ ಅವರ ಕೃತಿ ಬಹುವಚನ ಭಾರತ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com