ಉಡುಪಿ: ಬಸ್ಗಾಗಿ ಕಾಯುತ್ತಿದ್ದ 7 ವರ್ಷದ ಬಾಲಕಿ ಚಾಕಲೇಟ್ ತಿನ್ನುವ ವೇಳೆ ಕವರ್ ಸಮೇತ ನುಂಗಿದ ಹಿನ್ನೆಲೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉಡುಪಿಯ ಬೈಂದೂರು ಬಳಿಯ ಬಿಜೂರಿನಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಮೂಲದ ಸಮನ್ವಿ ಸಾವನ್ನಪ್ಪಿರುವ ಬಾಲಕಿ. ಸಮನ್ವಿ ಬುಧವಾರ ಬೆಳಿಗ್ಗೆ ಎಂದಿನಂತೆಯೇ ಶಾಲೆಗೆ ಹೊರಡಲು ಸಮವಸ್ತ್ರ ಧರಿಸಿ ಸಿದ್ಧವಾಗಿದ್ದಳು. ಸಮನ್ವಿ ಸ್ಥಳೀಯ ಖಾಸಗಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಳು.
ಸಮನ್ವಿ ಶಾಲೆಗೆ ಹೋಗಲು ಒಪ್ಪದೇ ಅಳುತ್ತಿದ್ದಳು, ಇದರಿಂದಾಗಿ ಮನೆಯವರು ಆಕೆಗೆ ಪುಸಲಾಯಿಸಿ ಶಾಲೆಗೆ ಹೊರಡಿಸಿದ್ದು. ಕೈಯಲ್ಲೊಂದು ಚಾಕ್ಲೆಟ್ ನೀಡಿದ್ದರು ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಶಾಲಾ ವಾಹನ ಬಂದಿದೆ. ಇದರಿಂದ ಗಾಬರಿಗೊಂಡ ಬಾಲಕಿ ಸಮನ್ವಿ ಕೈಯಲ್ಲಿದ್ದ ಚಾಕಲೇಟನ್ನು ಪ್ಲಾಸ್ಟಿಕ್ ಕವರ್ ಸಮೇತ ಬಾಯಿಗೆ ಹಾಕಿಕೊಂಡು ಶಾಲಾ ವಾಹನದತ್ತ ಓಡಿದ್ದಾಳೆ. ಈ ವೇಳೆ ಚಾಕಲೇಟ್ ಕವರ್ ಗಂಟಲಿನಲ್ಲಿ ಸಿಲುಕಿ ಉಸಿರು ಗಟ್ಟಿ ಸಾವನ್ನಪ್ಪಿದ್ದಾಳೆ.
ಬೆಳಗ್ಗೆ ಶಾಲೆಗೆ ಹೋಗಬೇಕಾದ ಸಮಯದಲ್ಲಿ ಸಮನ್ವಿ ಅಳುತ್ತಿದ್ದರಿಂದ ಆಕೆಯ ತಾಯಿ ಸುಪ್ರೀತಾ ಆಕೆಯನ್ನು ಮುದ್ದಿಸಲು ಚಾಕಲೇಟ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement