ಬೆಂಗಳೂರು: ವಿದ್ಯಾರಣ್ಯಪುರಂನ ಹೆಚ್ ಎಂಟಿ ಲೇಔಟ್ ಮತ್ತು ಎನ್ ಟಿಐ ಲೇಔಟ್ ನಡುವೆ ಇರುವ ವಿಸ್ತಾರವಾದ ಎನ್ ಟಿಐ ಮೈದಾನದಲ್ಲಿ ದೊಡ್ಡ ದೊಡ್ಡ ಕ್ರೀಡಾಕೂಟ ಆಯೋಜಿಸುವುದರೊಂದಿಗೆ ಅನೇಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಆದರೆ, ದಿನನಿತ್ಯ ಇಲ್ಲಿಗೆ ಬರುವ ಮಹಿಳೆಯರು ಸೇರಿದಂತೆ ನೂರಾರು ಕ್ರೀಡಾಪಟುಗಳಿಗೆ ಅಗತ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲ. ಈ ಸೌಕರ್ಯಕ್ಕಾಗಿ 40 ಸದಸ್ಯರು ಇರುವ ದತ್ರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಸೋಸಿಯೇಷನ್ ಸಹ ಸಂಸ್ಥಾಪಕಿ ಮಾಧುರಿ ಸುಬ್ಬಾ ರಾವ್ ಸುಮಾರು ಆರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಮಾಜಿ ಮೇಯರ್ ಗಂಗಾಬಿಕಾ ಮಲ್ಲಿಕಾರ್ಜುನ್, ಮಾಜಿ ಕಾರ್ಪೋರೇಟರ್ ಗಳಾದ ಕುಸುಮ ಮಂಜುನಾಥ್ ಮತ್ತು ಹೆಚ್ ಲಕ್ಷ್ಮಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಮಹಿಳೆಯರು ಪದೇ ಪದೇ ಮನವಿ ಮಾಡಿದ್ದರೂ ಮೂಲ ಭೂತ ಸೌಕರ್ಯ ಒದಗಿಸದಿರುವುದು ಇತ್ತೀಚಿಗೆ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಡೆಸಿದ ನಗರಕ್ಕೆ ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ವೇದಿಕೆಗಳಲ್ಲಿ ಈ ವಿಷಯವನ್ನು ಆಗಾಗ್ಗೆ ಪ್ರಸ್ತಾವಿಸುವುದರೊಂದಿಗೆ ಶಾಸಕ ಕೃಷ್ಣಬೈರೇಗೌಡ ಅವರಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಟ್ಯಾಗ್ ಮಾಡುತ್ತಿದ್ದೇವೆ ಎಂದು ಮಾಧುರಿ ಸುಬ್ಬಾ ರಾವ್ ತಿಳಿಸಿದರು.
ಈಗ ಇರುವ ಮೂರು ಸಾರ್ವಜನಿಕ ಶೌಚಾಲಯಗಳು ಹಲವು ವರ್ಷಗಳಿಂದ ಬಳಕೆಯಾಗುತ್ತಿಲ್ಲ. ಅವುಗಳಿಗೆ ನೀರಿನ ಸೌಕರ್ಯವಿಲ್ಲಾ. ಮೈದಾನದಿಂದ ಹತ್ತಿರವಿರುವ ಸಾರ್ವಜನಿಕ ಶೌಚಾಲಯಗಳು ರಸ್ತೆಯ ಎರಡು ಬದಿಯಿಂದ ಸ್ವಲ್ಪ ದೂರದಲ್ಲಿವೆ. ಪುರುಷರು ಸಿಕ್ಕ ಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಇಲ್ಲಿಗೆ ಕ್ರೀಡಾಕೂಟಕ್ಕೆಆಗಮಿಸುವ ಮಹಿಳಾ ಕ್ರೀಡಾಪಟುಗಳು ದೊಡ್ಡ ಮುಜುಗರವಾಗುತ್ತಿದೆ. ಕ್ರೀಡಾವಸ್ತ್ರಗಳನ್ನು ಬದಲಿಸಲು ಮಹಿಳೆಯರಿಗೆ ಪ್ರತ್ಯೇಕವಾದ ಜಾಗವಿಲ್ಲ ಎಂದು ಅವರು ಹೇಳಿದರು.
ಮಾಜಿ ಬಿಜೆಪಿ ಕಾರ್ಪೋರೇಟರ್ ಕುಸುಮ ಮಂಜುನಾಥ್ ಮಾತನಾಡಿ, ಗುತ್ತಿಗೆದಾರ ಕುಮಾರ್ ಎಂಬವರು ಕೆಲವು ದಿನಗಳ ಹಿಂದೆ ಶೌಚಾಲಯ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಸಂಪ್ ಕೆಲಸ ಆರಂಭಿಸಿದ್ದರು. ಆದರೆ, ಅದು ವ್ಯರ್ಥವಾಯಿತು. ಕೋವಿಡ್ ಲಸಿಕೆ ಮತ್ತು ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡೇವು. ಕುಮಾರ್ ಯಾವಾಗ ಕೆಲಸ ಸ್ಥಗಿತಗೊಳಿಸಿದರು ಎಂಬುದೇ ಯಾರಿಗೂ ತಿಳಿಯಲಿಲ್ಲ. ನನ್ನ ಅವಧಿ ಕೂಡಾ ಈಗ ಮುಗಿದಿದೆ ಎಂದರು.
ಕೂಡಲೇ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೃಷ್ಣ ಬೈರೇಗೌಡ ಈಗ ಆಶ್ವಾಸನೆ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾರೂ ಕೂಡಾ ನನ್ನ ಗಮನಕ್ಕೆ ತಂದಿದೆ. ಇದನ್ನು ನನ್ನ ಗಮನಕ್ಕೆ ತಂದಿರುವುದು ಒಳ್ಳೆಯದು. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
Advertisement