ಬೆಂಗಳೂರು: ಹಲವು ವರ್ಷಗಳ ಕಾಯುವಿಕೆ ಬಳಿಕ ನಗರದ ವಿಭೂತಿಪುರ ಕೆರೆ ಅಭಿವೃದ್ಧಿ ಕಾಣುತ್ತಿದೆ. ರೂ.1 ಕೋಟಿ ವೆಚ್ಚದಲ್ಲಿ ಕೆರೆ ಬದಿಯಿರುವ ಪ್ರದೇಶಗಳನ್ನು ಉದ್ಯಾನವನಗಳಾಗಿ ನಿರ್ಮಿಸಲಾಗುತ್ತಿದೆ.
ಯೋಜನೆಗೆ ನಿನ್ನೆಯಷ್ಟೇ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಸೌಂದರ್ಯೀಕರಣ ಕಾಮಗಾರಿಯು ಸಾಕಷ್ಟು ಸಮಯದಿಂದ ಬಾಕಿ ಉಳಿದಿದ್ದು, ಇದೀಗ ಯೋಜನೆಯು ತ್ವರಿತ ಗತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಅಲಂಕಾರಿಕ ಸಸ್ಯಗಳು ಮತ್ತು ಫಲ ನೀಡುವ ಮರಗಳನ್ನು ನೆಡಲಾಗುತ್ತದೆ. ಲ್ಯಾಂಡ್ ಸ್ಕೇಪಿಂಗ್ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತಿದ್ದು, ಬಿಬಿಎಂಪಿಯ ತೋಟಗಾರಿಕೆ ವಿಭಾಗ ಕಾಮಗಾರಿಯನ್ನು ನಿರ್ವಹಿಸಲಿದೆ ಎಂದು ಹೇಳಿದರು.
“ಕೆರೆ ಬಳಿ ಭದ್ರತೆಯು ಕಾಳಜಿ ವಹಿಸುವ ವಿಚಾರವಾಗಿದ್ದು, ಇದಕ್ಕಾಗಿ ಹೆಚ್ಚಿನ ಹೋಂಗಾರ್ಡ್ಗಳನ್ನು ನಿಯೋಜಿಸಲಾಗುತ್ತಿದೆ. ಕೆರೆ ಬಳಿ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಗಸ್ತು ಹೆಚ್ಚಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಕೆರೆ ಬಳಿ ಕೊಳಚೆ ನೀರು ಸಂಸ್ಕರಣಾ ಘಟಕದ ಕಾಮಗಾರಿಯೂ ಆರಂಭವಾಗಿದೆ. ಈ ಅಭಿವೃದ್ಧಿಯು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ತೆಗೆದುಕೊಳ್ಳಲಾದ ಯೋಜನೆಗಳ ಒಂದು ಭಾಗವಾಗಿದೆ ಎಂದು ತಿಳಿಸಿದರು.
ಕೆರೆಯ ಆವರಣದಲ್ಲೇ ನಾಯಿಕೊಡೆಗಳಂತೆ ಫ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿದ್ದು, ಅಂತಹ ಎಲ್ಲ ವಸ್ತುಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಸ್ಪಷ್ಟ ಆದೇಶವಿದ್ದು, ಅಧಿಕಾರಿಗಳು ಹಾಗೂ ವಾರ್ಡ್ ಮಟ್ಟದ ಮುಖಂಡರಿಗೆ ಸೂಚನೆ ನೀಡಲಾಗುತ್ತದೆ ಎಂದಿದ್ದಾರೆ.
ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ
ಬಿಬಿಎಂಪಿ ಚುನಾವಣೆ ಮೀಸಲಾತಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿರುವ ಕುರಿತು ಮಾತನಾಡಿದ ಸಚಿವರು, ಶೀಘ್ರದಲ್ಲಿಯೇ ಡಿಲಿಮಿಟೇಶನ್ ಕರಡನ್ನು ಕೂಡ ತೆರವುಗೊಳಿಸಲಾಗುವುದು ಮತ್ತು ಬಿಬಿಎಂಪಿ ಚುನಾವಣೆಯನ್ನು ಶೀಘ್ರದಲ್ಲೇ ನಡೆಸಲಾಗುತ್ತದೆ ಎಂದು ಹೇಳಿದರು.
Advertisement