ಬೆಂಗಳೂರು: ಬೆಂಗಳೂರಿಗೆ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಬ್ಯಾಂಕರ್ ಪತ್ನಿಯೊಬ್ಬರು ರೈಲಿನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದ 33 ವರ್ಷದ ಉಮಾ ಅವರ ಮೃತದೇಹ ಶನಿವಾರ ಬೆಳಗ್ಗೆ ಜೋಲಾರ್ಪೇಟೆ ಬಳಿಯ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಮೂಲಗಳ ಪ್ರಕಾರ, ಇಂಡಿಯನ್ ಬ್ಯಾಂಕ್ ಉದ್ಯೋಗಿ ಬಿ ಶಶಿಧರ್ ನಾಯ್ಕ್ ಮತ್ತು ಪತ್ನಿ ಉಮಾ ಶುಕ್ರವಾರ ರಾತ್ರಿ ತಿರುಪತಿ-ಚಾಮರಾಜನಗರ ಎಕ್ಸ್ಪ್ರೆಸ್ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಇಬ್ಬರೂ ಜೂನ್ 10 ರಂದು ರಾತ್ರಿ 11.58 ಕ್ಕೆ ತಮಿಳುನಾಡಿನ ಕಾಟ್ಪಾಡಿ ಜಂಕ್ಷನ್ನಲ್ಲಿ ರೈಲಿಗೆ ಹತ್ತಿದ್ದಾರೆ. ರೈಲು ಮರುದಿನ ಬೆಳಿಗ್ಗೆ (ಶನಿವಾರ) 4.25 ಕ್ಕೆ ಬೆಂಗಳೂರು ತಲುಪಲಿತ್ತು. ಎಸಿ 3-ಟೈರ್ ಕೋಚ್ನ ಬಿ2 ಕಂಪಾರ್ಟ್ಮೆಂಟ್ನಲ್ಲಿ ಅವರನ್ನು ಕೂರಿಸಲಾಗಿತ್ತು ಎಂದು ಮೂಲವೊಂದು ತಿಳಿಸಿದೆ.
ನಾಯಕ್ ಅವರನ್ನು ಚೆನ್ನೈನಿಂದ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಕರ್ತವ್ಯಕ್ಕೆ ಸೇರಲು ಅವರ ಪತ್ನಿಯೊಂದಿಗೆ ಕರ್ನಾಟಕಕ್ಕೆ ತೆರಳುತ್ತಿದ್ದರು ಎಂದು ಮೂಲಗಳು ವಿವರಿಸಿವೆ. ಬೆಳಿಗ್ಗೆ 3 ಗಂಟೆಯ ಸುಮಾರಿಗೆ ರೈಲು ವೈಟ್ಫೀಲ್ಡ್ ಸಮೀಪಿಸುತ್ತಿದ್ದಂತೆ, ತನ್ನ ಹೆಂಡತಿ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ.
ರೈಲಿನಲ್ಲಿ ಎಲ್ಲೂ ಆಕೆ ಪತ್ತೆಯಾಗಿಲ್ಲ. ರೈಲು ಬೆಂಗಳೂರಿನ ಕ್ರಾಂತಿವೀರ ರೈಲು ನಿಲ್ದಾಣವನ್ನು ತಲುಪಿದ ನಂತರ, ನಾಯಕ್ ಸಹಾಯಕ್ಕಾಗಿ ರೈಲ್ವೆ ಪೊಲೀಸರನ್ನು ಸಂಪರ್ಕಿಸಿದರು ಎಂದು ಮೂಲಗಳು ತಿಳಿಸಿವೆ. ಎಲ್ಲಾ ಠಾಣೆಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆಗ ಜೋಲಾರ್ಪೆಟ್ಟೈ ಬಳಿ ಮಧ್ಯವಯಸ್ಸಿನ ಮಹಿಳೆಯ ಶವ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಆಕೆಯ ಪಾದರಕ್ಷೆಗಳು, ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ಕಂಪಾರ್ಟ್ಮೆಂಟ್ನಲ್ಲಿ ಬಿಟ್ಟು ಹೋಗಿದ್ದರಿಂದ ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Advertisement