ಬೆಂಗಳೂರು: ದುಬೈನಿಂದ ಬೆಂಗಳೂರಿಗೆ 1.5 ಕೆಜಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ 30 ವರ್ಷದ ವ್ಯಕ್ತಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ)ದ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಹಿಡಿದಿದ್ದು. ಆ ಚಿನ್ನದ ಮೌಲ್ಯ ಸುಮಾರು 50 ಲಕ್ಷ ರೂಪಾಯಿ ಎನ್ನಲಾಗಿದೆ. ಈ ವ್ಯಕ್ತಿ ಜಾಣತನದಿಂದ ಚಿನ್ನದ ಪೇಸ್ಟ್ ನಿಂದ ಮೊಬೈಲ್ ಕೇಸ್ ತಯಾರಿಸಿ ಅದರಲ್ಲಿ ಮೊಬೈಲ್ ಇಟ್ಟಿದ್ದರು.
ಮೂಲಗಳ ಪ್ರಕಾರ, ಜೂನ್ 14 ರ ರಾತ್ರಿ ವ್ಯಕ್ತಿಯೊಬ್ಬರು ದುಬೈನಿಂದ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿನ್ನವನ್ನು ತರುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಡಿಆರ್ಐ ಅಧಿಕಾರಿಗಳು ಈ ವ್ಯಕ್ತಿಯನ್ನು ವಶಪಡಿಸಿಕೊಂಡಿದ್ದಾರೆ.
“ಕೇರಳದ ಕಾಸರಗೋಡು ಮೂಲದ ಈ ವ್ಯಕ್ತಿ(ಹೆಸರು ಹೇಳಲಾಗಿಲ್ಲ) ಪ್ರಯಾಣಿಸುತ್ತಿದ್ದ ಏರೋಬ್ರಿಡ್ಜ್ ವಿಮಾನದಿಂದ ಇಳಿದ ತಕ್ಷಣ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಫೋನ್ ಕೇಸ್ ಹೆಚ್ಚು ಭಾರವಾಗಿತ್ತು ಮತ್ತು ಪ್ಲಾಸ್ಟಿಕ್ ಕೇಸ್ನಲ್ಲಿ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ”ಎಂದು ಮೂಲಗಳು ತಿಳಿಸಿವೆ.
ಆ ವ್ಯಕ್ತಿ ಚಿನ್ನದ ಕೇಸ್ ನಲ್ಲಿ ತನ್ನ ಫೋನ್ ಅನ್ನು ಇರಿಸಿದ್ದರು. "ಇದರಿಂದ ಸಾಮಾನ್ಯ ಬ್ಯಾಗೇಜ್ ಸ್ಕ್ರೀನಿಂಗ್ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಬಹುದು ಮತ್ತು ಮೊಬೈಲ್ ಕೇಸ್ ಕವರ್ ಮಾತ್ರ ಎಂದು ತಪ್ಪಾಗಿ ಗ್ರಹಿಸಬಹುದು" ಎಂದು ಮೂಲವೊಂದು ತಿಳಿಸಿದೆ.
ಬೆಂಗಳೂರಿನಿಂದ ಕೇರಳಕ್ಕೆ ಬಸ್ ಮೂಲಕ ಈ ಚಿನ್ನವನ್ನು ಸಾಗಿಸಲು ಈ ವ್ಯಕ್ತಿ ಯೋಜಿಸಿದ್ದರು ಎಂದು ತಿಳಿದು ಬಂದಿದೆ. ನಂತರ ಅಪರಿಚಿತ ವ್ಯಕ್ತಿಯೊಬ್ಬರು ಅವರ ಮನೆಯಲ್ಲಿ ಅವರನ್ನು ಭೇಟಿಯಾಗಬೇಕಿತ್ತು ಮತ್ತು ಅವರಿಂದ ಪ್ಯಾಕೇಜ್ ಪಡೆಯಬೇಕಿತ್ತು ಎಂದು ಮೂಲಗಳು ತಿಳಿಸಿವೆ. ಆತನ ವಿರುದ್ಧ ಕಸ್ಟಮ್ಸ್ ಆಕ್ಟ್ ಸೆಕ್ಷನ್ 111 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement