ಬೆಂಗಳೂರು: ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ನಡೆಯಲಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಭಾರೀ ಸಿದ್ಧತೆಗಳನ್ನು ನಡೆಸುತ್ತಿದೆ. ಈ ನಡುವಲ್ಲೇ ಇದಕ್ಕೆ ಹೊಡೆತ ಬೀಳುವ ಬೆಳವಣಿಗೆಯೊಂದು ನಗರದಲ್ಲಿ ಕಂಡು ಬಂದಿದೆ.
ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಯ ಎಂಡಿ ಮತ್ತು ಸಿಇಒ ಅರವಿಂದ್ ಮೆಂಡಿರಟ್ಟಾ ಅವರಿಗೆ ಜೀವ ಬೆದರಿಕೆ ಪತ್ರವೊಂದು ಬಂದಿದ್ದು, ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲು ಸಮಯ ಕೋರಲಾಗಿದೆ ಎಂಟು ಮೆಟ್ರೋ ಮೂಲಗಳು ಮಾಹಿತಿ ನೀಡಿವೆ.
ತಮಿಳು ಭಾಷೆಯಲ್ಲಿ ಈ ಬೆದರಿಕೆ ಪತ್ರವನ್ನು ಬಂದಿದ್ದು, ಪತ್ರದಲ್ಲಿ ಮೆಟ್ರೋ ಶಾಪಿಂಗ್ ಮಾಲ್ ರಿಲಯನ್ಸ್ ಅಂಬಾನಿ, ಟಾಟಾ ಅಥವಾ ವಿಪ್ರೋ ಕಂಪನಿಗೆ ಮಾರಾಟ ಮಾಡಬೇಕು. ಈ ಕಂಪನಿಗಳಿಗೆ ಬಿಟ್ಟು ಹೆಚ್ಸಿಎಲ್ ಕಂಪನಿಗೆ ಮಾರಾಟ ಮಾಡಿದರೆ ಮೆಟ್ರೋ ಎಂಡಿ ಹಾಗೂ ಸಿಇಒ ಅರವಿಂದ್ ಮೆಂಡರೆಟ್ಟಾ ಅವರನ್ನ ಜೀವಂತವಾಗಿ ಉಳಿಸೋದಿಲ್ಲ ಎಂದು ಬೆದರಿಕೆ ಹಾಕಲಾಗಿದೆ.
ಬೆದರಿಕೆ ಪತ್ರ ಕುರಿತು ಅರವಿಂದ್ ಮೆಂಡರೆಟ್ಟಾ ಅವರನ್ನು ಸಂಪರ್ಕಿಸಲು ಪ್ರಯತ್ನಗಳ ನಡೆಸಲಾಗಿದ್ದು, ಅರವಿಂದ್ ಮೆಂಡರೆಟ್ಟಾ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿ, ಈ ಕುರಿತು ಮಾಹಿತಿಗಳು ಬಂದಿವೆ. ಪೊಲೀಸರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಮಾತನಾಡಿ, ಜೀವ ಬೆದರಿಕೆ ಪತ್ರದ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಪೊಲೀಸರು ಈ ಸಂಬಂಧ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಕೆಲವೇ ತಿಂಗಳುಗಳಲ್ಲಿ ಜಾಗತೀಕ ಬಂಡವಾಳ ಹೂಡಿಕೆ ಸಮಾವೇಶ ನಡೆಯಲಿದ್ದು, ಬಂಡವಾಳ ಹೂಡಿಕೆದಾರರಿಗೆ ಅಧಿಕಾರಿಗಳು ಭದ್ರತೆಯನ್ನು ನೀಡಬೇಕು ಎಂದಿದ್ದಾರೆ.
ಇನ್ಫೋಸಿಸ್ನ ಮಾಜಿ ನಿರ್ದೇಶಕ ಮತ್ತು ಮಣಿಪಾಲ್ ಗ್ಲೋಬಲ್ ಎಜುಕೇಶನ್ನ ಅಧ್ಯಕ್ಷರಾದ ಮೋಹನ್ದಾಸ್ ಪೈ ಅವರು ಮಾತನಾಡಿ, ಮೆಟ್ರೋ ತಂಡವು ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಮೆಂಡಿರಟ್ಟಾಗೆ ವೈಯಕ್ತಿಕ ಭದ್ರತೆ ನೀಡಬೇಕೆಂದು ಮನವಿ ಮಾಡಬೇಕೆಂದು ಸಲಹೆ ನೀಡಿದರು.
ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ದೇಶದಲ್ಲಿ 2,300 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, 33 ಮಳಿಗೆಗಳನ್ನು ಹೊಂದಿದೆ, ಇದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ.
Advertisement