ಭೂಸುಧಾರಣೆ, ಎಪಿಎಂಸಿ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಬಿ.ಸಿ.ಪಾಟೀಲ್

ಕೇಂದ್ರ ಸರ್ಕಾರ ಕಳೆದ ವರ್ಷ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ, ರಾಜ್ಯ ಸರ್ಕಾರ ಅಂಗೀಕರಿಸಿದ ಕರ್ನಾಟಕ ಭೂಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಗಳು ಕೇಳಿಬಂದಿವೆ. 
ಕೃಷಿ ಸಚಿವ ಬಿ.ಸಿ. ಪಾಟೀಲ್
ಕೃಷಿ ಸಚಿವ ಬಿ.ಸಿ. ಪಾಟೀಲ್

ಬೆಂಗಳೂರು: ಕೇಂದ್ರ ಸರ್ಕಾರ ಕಳೆದ ವರ್ಷ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ, ರಾಜ್ಯ ಸರ್ಕಾರ ಅಂಗೀಕರಿಸಿದ ಕರ್ನಾಟಕ ಭೂಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಗಳು ಕೇಳಿಬಂದಿವೆ.  ಎಪಿಎಂಸಿ ಕಾಯಿದೆಯು ಖಾಸಗಿ ಕಂಪನಿಗಳು ರೈತರಿಂದ ಕೃಷಿ ವಸ್ತು ಖರೀದಿಸಲು ಅವಕಾಶ ನೀಡಿದರೆ, ಭೂಸುಧಾರಣಾ ಕಾಯ್ದೆಯು ಕೃಷಿಕರಲ್ಲದವರಿಗೆ ಕೃಷಿ ಭೂಮಿ ಖರೀದಿಸಲು ಅನುಮತಿ ನೀಡುತ್ತದೆ.

ಕೇಂದ್ರ ಸರ್ಕಾರ ಕೃಷಿ ಕಾನೂನು ರದ್ದುಗೊಳಿಸಿ ಏಳು ತಿಂಗಳಾದರೂ, ರಾಜ್ಯ ಸರ್ಕಾರ ಎರಡು ಶಾಸನಗಳನ್ನು ಹಿಂಪಡೆಯಲು ಸಿದ್ಧರಿಲ್ಲ. ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ರಾಜ್ಯ ಸರ್ಕಾರ ಎರಡೂ ಕಾಯ್ದೆಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದರು. ರಾಜ್ಯಾದ್ಯಂತ ವರದಿಯಾಗುತ್ತಿರುವ ರಸಗೊಬ್ಬರ ಕೊರತೆ ಕುರಿತು ಅವರು ಮಾತನಾಡಿದರು.

ಮುಂಗಾರು ತಡವಾಗಿ ಆಗಮನ ಹಾಗೂ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ. ಇದು ಕಾಳಜಿಯ ವಿಷಯವಲ್ಲವೇ?

ಈ ಬಾರಿ ಮುಂಗಾರು ವಿಳಂಬವಾಗಿದೆ.  ಇಷ್ಟೊತ್ತಿಗೆ ಬಿತ್ತನೆ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಿದ್ದೆವು. ಒಟ್ಟು  ಶೇ.70ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಗುರಿ ತಲುಪಿಲ್ಲ. ಸಕಾರಾತ್ಮಕ ಅಂಶವೆಂದರೆ, ಕೆಲವು ಪ್ರದೇಶಗಳಲ್ಲಿ ಮಳೆ ಬಂದಿದೆ. ಮುಂದಿನ ದಿನಗಳಲ್ಲಿ ಇದು ಉತ್ತಮಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಸರ್ಕಾರದಿಂದ ಅಂತಹ ಯಾವುದೇ ಪ್ರಸ್ತಾವನೆ ಇದೆಯೇ?

ಇಲ್ಲ. ನಾವು ಈ ಕಾನೂನುಗಳನ್ನು ಹಿಂಪಡೆಯುವುದಿಲ್ಲ ಮತ್ತು ಹಾಗೆ ಮಾಡುವ ಪ್ರಸ್ತಾಪವೂ ಇಲ್ಲ. ಎಪಿಎಂಸಿ ಕಾಯಿದೆ ನಮ್ಮ ರೈತರಿಗೆ ಸಹಕಾರಿಯಾಗುತ್ತಿರುವುದರಿಂದ ಅದನ್ನು ಒಪ್ಪಿಕೊಂಡಿದ್ದಾರೆ. ಕಾಯಿದೆ ಜಾರಿಯಾದ ನಂತರ ಮಧ್ಯವರ್ತಿಗಳನ್ನು ತೊಲಗಿಸಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ. ಭೂಸುಧಾರಣಾ ಕಾಯ್ದೆಯಿಂದಲೂ ಅವರಿಗೆ ಲಾಭವಾಗುತ್ತದೆ. ನೈಜ ಫಲಾನುಭವಿಗಳು ಸಂತೋಷವಾಗಿರುವಾಗ, ಈ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಅಗತ್ಯವೇನು?

ರಾಜ್ಯದ ಹಲವೆಡೆ ರಸಗೊಬ್ಬರಗಳ ತೀವ್ರ ಕೊರತೆ ಉಂಟಾಗಿದೆ. ಸರ್ಕಾರ ಏನು ಮಾಡುತ್ತಿದೆ?

ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ. ನಮ್ಮಲ್ಲಿ ಸಾಕಷ್ಟು ಡೈಅಮೋನಿಯಂ ಫಾಸ್ಫೇಟ್ (ಡಿಎಪಿ) ಅಥವಾ ಸಂಕೀರ್ಣ ರಸಗೊಬ್ಬರವಿದೆ. ರಸಗೊಬ್ಬರ ವ್ಯಾಪಾರದಲ್ಲಿರುವ ಏಜೆಂಟರು ಮತ್ತು ಮಧ್ಯವರ್ತಿಗಳು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ವಿರೋಧ ಪಕ್ಷದ ಸದಸ್ಯರು ಈ ವಿಷಯವನ್ನು ಬಿಂಬಿಸಿ ರಾಜಕೀಯ ಮಾಡುತ್ತಿದ್ದಾರೆ. ರಸಗೊಬ್ಬರ ಮಾರಾಟ ಮಾಡುವ ಪಾಯಿಂಟ್-ಆಫ್-ಸೇಲ್ ತಾಣಗಳು ಮತ್ತು ಗೋಡೌನ್‌ಗಳಿಗೆ ಭೇಟಿ ನೀಡುವ ಜಾಗೃತ ತಂಡಗಳನ್ನು  ಹೊಂದಿದ್ದೇವೆ. ಈ ಪ್ರತಿಯೊಂದು ಮಾರಾಟ ಮಳಿಗೆಗಳಲ್ಲಿ ಎಷ್ಟು ರಸಗೊಬ್ಬರ ಬರುತ್ತದೆ ಮತ್ತು ಎಷ್ಟು ಮಾರಾಟವಾಗಿದೆ ಎಂಬುದರ ಕುರಿತು ದಿನನಿತ್ಯದ ಮಾಹಿತಿ ಹೊಂದಿದ್ದೇವೆ. ಕೃತಕ ಅಭಾವ ಸೃಷ್ಟಿಸುವ ಕೆಲಸದಲ್ಲಿ ತೊಡಗಿರುವವರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದರು.

ಕೃಷಿ ಇಲಾಖೆಯಲ್ಲಿ ಶೇ.50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಏಕೆ ಕ್ರಮ ಕೈಗೊಂಡಿಲ್ಲ?

ಸಿಬ್ಬಂದಿ ಕೊರತೆ ಇದ್ದು ಅದು ರಾತ್ರೋರಾತ್ರಿ ಆಗಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದೇವೆ. 742 ರೈತ ಸಂಪರ್ಕ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ಕೃಷಿ ಅಧಿಕಾರಿಗಳು (ಎಒ) ಇಲ್ಲ. ನಾವು 300 ಎಒಗಳನ್ನು ನೇಮಿಸಿಕೊಳ್ಳುತ್ತಿದ್ದೇವೆ ಮತ್ತು ಅವರನ್ನು ಆದ್ಯತೆಯ ಮೇಲೆ ನಿಯೋಜಿಸುತ್ತೇವೆ. ಆಗಲೂ ಕೊರತೆ ಉಂಟಾಗಲಿದ್ದು, ಮುಂದಿನ ದಿನಗಳಲ್ಲಿ ಭರ್ತಿಯಾಗಲಿದೆ.

ಕೃಷಿ ಇಲಾಖೆ ಅಭಿವೃದ್ಧಿಪಡಿಸಿದ ಆ್ಯಪ್‌ನಲ್ಲಿ ಬೆಳೆ ಡೇಟಾ ನೀಡಲು ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ?

 2020 ರಲ್ಲಿ ಆ್ಯಪ್ ಪರಿಚಯಿಸಲಾಗಿದ್ದು,  ಆರಂಭದಲ್ಲಿ ತೊಂದರೆಗಳಿವೆ. ನಮ್ಮಲ್ಲಿ 2.10 ಕೋಟಿ ಕೃಷಿ ಪ್ಲಾಟ್‌ಗಳಿವೆ, ಅದರಲ್ಲಿ 80 ಲಕ್ಷಕ್ಕೆ ಸಂಬಂಧಿಸಿದ ಡೇಟಾವನ್ನು ರೈತರೇ ಅಪ್‌ಲೋಡ್ ಮಾಡಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ತರಬೇತಿ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಮತ್ತು ಅಪ್ಲಿಕೇಶನ್ ಅನ್ನು ಸುವ್ಯವಸ್ಥಿತಗೊಳಿಸಲಾಗುವುದು.

ರೈತರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?

 ಹೊಸದಾಗಿ ರಚಿಸಲಾದ ದ್ವಿತೀಯ ಕೃಷಿ ನಿರ್ದೇಶನಾಲಯಕ್ಕೆ ನಿರ್ದೇಶಕರನ್ನು ನೇಮಿಸಿಕೊಳ್ಳುತ್ತಿದ್ದೇವೆ, ಇದು ಈ ವಿಷಯದ ಬಗ್ಗೆ ಕೆಲಸ ಮಾಡಲು ಮೀಸಲಾದ ತಂಡವಾಗಿರುತ್ತದೆ.ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆಯನ್ನೂ ನಡೆಸಿದ್ದೇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com